ಶನಿವಾರಸಂತೆ, ಏ. 12: ಜಿಲ್ಲೆಯಲ್ಲಿ ಲಾಕ್‍ಡೌನ್ ಕೃಷಿಕರು ಬೆಳೆದ ಹಣ್ಣು, ತರಕಾರಿ ಮೇಲೆ ಮಾತ್ರವಲ್ಲ, ಚೆಂಡು ಹೂ ಬೆಳೆಯ ಮೇಲೂ ತನ್ನ ಪ್ರಭಾವ ಬೀರಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಕರ ಜೀವನ ನಿರ್ವಹಣೆ ನಿಟ್ಟಿನಲ್ಲಿ ಸರಕಾರ ಬೆಳೆಯನ್ನು ಮಾರಾಟ ಮಾಡಲು ಅನುಮತಿ ನೀಡಿದ್ದರೂ ಸಾಗಾಟ ಸಮಸ್ಯೆಯೊಂದಿಗೆ ಮಾರಾಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಕೃಷಿಕರು ತಮ್ಮ ಜಮೀನಿನಲ್ಲಿ ಚೆಂಡು ಹೂ ಬೆಳೆದಿದ್ದು, ಕಟಾವು ಮಾಡಲಾಗದ ಸಂಕಷ್ಟದಲ್ಲಿದ್ದಾರೆ. ಕಟಾವು ಮಾಡಿದರೂ ಸಾಗಾಟಕ್ಕೆ ವ್ಯವಸ್ಥೆಯಾದರೂ ಕೊಳ್ಳುವ ಗ್ರಾಹಕರಿಲ್ಲದಿರುವುದೇ ಕೃಷಿಕರ ಸಂಕಷ್ಟಕ್ಕೆ ಕಾರಣವಾಗಿದೆ.

ಜನವರಿ ತಿಂಗಳಿನಲ್ಲಿ ಚೆಂಡು ಹೂ ಸಸಿಯನ್ನು ನಾಟಿ ಮಾಡಿ, ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಕಟಾವು ಮಾಡಲಾಗು ತ್ತದೆ. ಎಕರೆಗೆ 3-4 ಟನ್ ಇಳುವರಿ ಸಿಗುತ್ತದೆ. ರೂ. 25 ರಿಂದ 50 ಸಾವಿರ ವೆಚ್ಚವಾಗುತ್ತದೆ. ಈಗಾಗಲೇ ಬೆಳೆ ಕಟಾವಿಗೆ ಬಂದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆ ನಾಶವಾಗುತ್ತಿದೆ.

ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಆಗಿದ್ದು, ಮದುವೆ, ಗೃಹಪ್ರವೇಶ, ಕರಗ ಇತ್ಯಾದಿ ಯಾವುದೇ ಧಾರ್ಮಿಕ ಸಮಾರಂಭಗಳು ನಡೆಯುವಂತಿಲ್ಲ. ಅಲಂಕಾರಕ್ಕಾಗಿಯೇ ಬೆಳೆಯುವ ಚೆಂಡು ಹೂ ಖರೀದಿಸುವ ಗ್ರಾಹಕರಿಲ್ಲದ ಮೇಲೆ ಕಟಾವು ಮಾಡಿ ಪ್ರಯೋಜನವೇನು? ಹಣ್ಣು ತರಕಾರಿಯಾದರೆ ಮಾರಾಟ ಮಾಡಬಹುದು. ಸಮಾರಂಭಗಳಿಲ್ಲದೆ ಹೂ ಖರೀದಿಸುವವರು ಯಾರು? ಎಂದು ಬೇಸರದಿಂದ ಪ್ರಶ್ನಿಸುತ್ತಾರೆ ಮೂದರವಳ್ಳಿ ಗ್ರಾಮದ ಕೃಷಿಕ ಎಂ.ಪಿ. ರಸನ್.

ಕೃಷಿಕ ರಸನ್ 10 ವರ್ಷಗಳಿಂದ ಚೆಂಡು ಹೂ ಬೆಳೆಯುತ್ತಿದ್ದಾರೆ. ಈ ವರ್ಷ 1 ಎಕರೆ ಜಮೀನಿನಲ್ಲಿ 12 ಸಾವಿರ ಗಿಡ ನೆಟ್ಟಿದ್ದು, ಗೊಬ್ಬರ ಇತ್ಯಾದಿಗಳಿಗೆ ರೂ. 25 ಸಾವಿರ ಖರ್ಚು ಮಾಡಿದ್ದಾರೆ. ಪ್ರತಿ ವರ್ಷ ಖರ್ಚು ಕಳೆದು ರೂ. 1 ಲಕ್ಷ ಲಾಭಗಳಿಸುತ್ತಿದ್ದರು. ಆದರೆ, ಈ ವರ್ಷ ಕೊರೊನಾದಿಂದಾಗಿ ಇದೇ ಮೊದಲ ಬಾರಿ ಬೆಳೆ ಸಂಪೂರ್ಣ ನಾಶವಾಗುವ ಹಾದಿಯಲ್ಲಿದೆ.

ಕಟಾವು ಮಾಡುವಂತಿಲ್ಲ, ಮಾರಾಟವೇ ಇಲ್ಲವೆಂದ ಮೇಲೆ ಪೋಷಣೆ ಯಾಕೆಂದು ಗಿಡಗಳಿಗೆ ನೀರುಣಿಸುವುದನ್ನೇ ನಿಲ್ಲಿಸಿರುತ್ತಾರೆ. ಮೂದರವಳ್ಳಿ ಗ್ರಾಮದಲ್ಲಿ ರತನ್ ಅವರಂತೆ ಸುನಿಲ್, ಚಂದ್ರಾಮತಿ, ದಯಾನಂದ್, ಪೊನ್ನಪ್ಪ ಮತ್ತಿತರ ಕೃಷಿಕರೂ ಚೆಂಡು ಹೂ ಬೆಳೆದಿದ್ದು, ಹತಾಶೆಯಿಂದ ಕೈ ಚೆಲ್ಲಿ ಕುಳಿತಿದ್ದಾರೆ.

ಸುಂದರವಾಗಿ ಅರಳಿ ಕಣ್ಮನ ಸೆಳೆಯುತ್ತಿದ್ದ ಹೂ ಒಣಗಿ, ಕೊಳೆತು ನಾಶವಾಗುವ ಸ್ಥಿತಿ ತಲುಪಿದೆ. ಪ್ರತಿ ವರ್ಷ ಮೈಸೂರು, ಬೆಂಗಳೂರು ಮಾರುಕಟ್ಟೆಗೆ ಸಾಗಿಸುತ್ತಿದ್ದು, 1 ಕೆಜಿಗೆ ರೂ. 65-120ರ ವರೆಗೂ ಉತ್ತಮ ದರ ಪಡೆಯುತ್ತಿದ್ದವರು ಈ ವರ್ಷ ಕೊರೊನಾ ವೈರಸ್‍ನಿಂದಾಗಿ ಅಸಲನ್ನೂ ಕಳೆದುಕೊಂಡು ನಷ್ಟವಾಗಿ ಪರಿತಪಿಸುವಂತಾಗಿದೆ.

-ನರೇಶ್ಚಂದ್ರ