ಸುಂಟಿಕೊಪ್ಪ, ಮಾ.31: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತರಕಾರಿ ವ್ಯಾಪಾರಸ್ಥರು ವಾಹನದಲ್ಲಿ ತರಕಾರಿಗಳನ್ನು ಗ್ರಾಹಕರ ಮನೆ ಮನೆಗಳಿಗೆ ತೆರಳಿ ನಿಗದಿತ ದರದಲ್ಲಿ ಮಾರಲು ದೃಢೀಕರಣ ಪತ್ರ ನೀಡಲಾಗುವುದೆಂದು ಸೋಮವಾರ ಪೇಟೆ ಡಿವೈಎಸ್‍ಪಿ ಶೈಲೇಂದ್ರ ತಿಳಿಸಿದರು.

ಸುಂಟಿಕೊಪ್ಪ ಪೊಲೀಸ್‍ಠಾಣೆ ಯಲ್ಲಿ ನಡೆದ ತರಕಾರಿ ಹಾಗೂ ದಿನಸಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು ದಿನಸಿ ಅಂಗಡಿಯವರು ಸಹ ಗ್ರಾಹಕರು ದಿನಸಿ ವಸ್ತುಗಳ ಪಟ್ಟಿ ಮಾಡಿ ಕಳುಹಿಸಿದಾಗ ಸಾಮಗ್ರಿಗಳನ್ನು ಅಂಗಡಿ ಸಹಾಯಕನ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ದಿನಸಿ ಹಾಗೂ ತರಕಾರಿ ಖರೀದಿಸಲು ಬರುತ್ತಿರುವ ಗ್ರಾಹಕರನ್ನು ನಿಯಂತ್ರಿಸಬಹುದು ಎಂದು ಅವರು ಹೇಳಿದರು.

ಹಾಪ್‍ಕಾಮ್ ದರದ ಅನ್ವಯ ತರಕಾರಿ ಮಾರಾಟ ಮಾಡತಕ್ಕದ್ದು ಇಲ್ಲದಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಪಟ್ಟಣದಲ್ಲಿ ಸುಮ್ಮನೆ ಅಡ್ಡಾಡುವ ದ್ವಿಚಕ್ರ ವಾಹಗಳನ್ನು ಮುಟ್ಟುಗೋಲು ಹಾಕಿಕೊಂಡು ಮೊಕದ್ದಮೆ ದಾಖಲಿಸುವಂತೆ ಠಾಣಾಧಿಕಾರಿಗೆ ಡಿವೈಎಸ್‍ಪಿ ಸೂಚಿಸಿದರು. ಸಭೆಯಲ್ಲಿ ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಮಹೇಶ್ ಸುಂಟಿಕೊಪ್ಪ ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಹಾಜರಿದ್ದರು.