ಸೋಮವಾರಪೇಟೆ, ಮಾ. 17: ಸಮೀಪದ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲ್ತರೆಶೆಟ್ಟಳ್ಳಿ ಗ್ರಾಮದ ಕುಂದಗೌಡನಮನೆ ಗ್ರೂಪ್ನಲ್ಲಿ ಸ್ಥಳೀಯರ ದೂರಿನ ಹಿನ್ನೆಲೆ ನೂತನವಾಗಿ ಬೋರ್ವೆಲ್ ಕೊರೆಯಲಾಗಿದೆ.
ಕಳೆದ 2017-18ನೇ ಸಾಲಿನಲ್ಲಿ ಬರಪರಿಹಾರ ಯೋಜನೆಯಡಿ ಜಿಲ್ಲಾಧಿಕಾರಿಗಳು 50 ಸಾವಿರ ಅನುದಾನ ಬಿಡುಗಡೆ ಮಾಡಿದ್ದು, 2017-18ರಲ್ಲಿ ಬಿಲ್ ಮಾಡಲಾಗಿತ್ತು. ಆದರೆ ಈ ಸ್ಥಳದಲ್ಲಿ ಬೋರ್ವೆಲ್ ಕೊರೆದಿಲ್ಲ ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಆರೋಪಿಸಿ, ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ, ಇದೀಗ ನೂತನವಾಗಿ ಬೋರ್ವೆಲ್ ಕೊರೆಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಕಾಮಗಾರಿ ನಿರ್ವಹಿಸದೇ ಬಿಲ್ ಮಾಡಿರುವ ಹಲವಷ್ಟು ಪ್ರಕರಣಗಳು ನಡೆದಿದ್ದು, ತಮ್ಮ ಗ್ರಾಮಕ್ಕೆ ಬಿಡುಗಡೆಯಾದ ಅನುದಾನದ ಬಗ್ಗೆ ಸ್ಥಳೀಯರು ಹೆಚ್ಚಿನ ಜಾಗ್ರತೆ ವಹಿಸುವ ಮೂಲಕ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಅನಿಲ್ ಅಭಿಪ್ರಾಯಿಸಿದ್ದಾರೆ.