ವೀರಾಜಪೇಟೆ, ಮಾ. 10: ಕೊಡಗಿನ ರಸ್ತೆ ಹಾಗೂ ಇತರ ಅಬಿವೃದ್ಧಿ ಕಾಮಗಾರಿಗಳಿಗಾಗಿ ಈ ಸಾಲಿನಲ್ಲಿ ಹೆಚ್ಚು ಅನುದಾನ ಬಂದಿದ್ದು ಮಳೆಗಾಲಕ್ಕೂ ಮುನ್ನಾ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಐಮಂಗಲ-ಚೆಂಬೆಬೆಳ್ಳೂರು ಸಂಪರ್ಕ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 35 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬೋಪಯ್ಯ ಅವರು ಈ ವ್ಯಾಪ್ತಿಯ ಆರು ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಕೊಡಗು ಪ್ಯಾಕೇಜ್‍ನಲ್ಲಿ ರೂ. 60 ಲಕ್ಷ ನೀಡಲಾಗಿದ್ದು ಈ ಭಾಗದಲ್ಲಿ ಒಟ್ಟು ರೂ. 2 ಕೋಟಿ 38 ಲಕ್ಷ ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಸರಕಾರದ ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುವಂತಾಗಬೇಕು. ತೋಟದ ಮಾಲೀಕರು ಅಗತ್ಯವಿರುವೆಡೆಗಳಲ್ಲಿ ರಸ್ತೆಗೆ ಜಾಗಬಿಟ್ಟು ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಬೇಕೆಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ ಮಾತನಾಡಿ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುಕೋಟೆ-ಬೆಳ್ಳರಿಮಾಡು ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ, ಪುದುಕೋಟೆ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ರೂ. 20 ಲಕ್ಷ , ಐಮಂಗಲ ಚೆಂಬೆಬೆಳ್ಳೂರು ರಸ್ತೆ ಸೇರಿದಂತೆ ಬೆಳ್ಳರಿಮಾಡು ಸಂಪರ್ಕ ರಸ್ತೆ, ಪುದುಕೋಟೆ ಮಚ್ಚಮಾಡ ರಸ್ತೆ, ದೇವಣಗೇರಿ-ಬಟ್ಟಮಕ್ಕಿ ಪುಗ್ಗೇರ ರಸ್ತೆ, ದೇವಣಗೇರಿ ಮೂಕಂಡ ಕುಟುಂಬಸ್ಥರ ರಸ್ತೆ, ದೇವಣಗೇರಿ ಬೆಳ್ಳರಿಮಾಡು ರಸ್ತೆ, ಕುಕ್ಲೂರು ಮಂಡೇಪಂಡ ಸಂಪರ್ಕ ರಸ್ತೆ, ಪುಗ್ಗೇರ ಅಂಬಲ ರಸ್ತೆ, ತಾತೆಟ್ಟಿ ಮೂಕಂಡ ಕುಟುಂಬಸ್ತರ ರಸ್ತೆ, ವೈಪಡ ಪ.ಜಾತಿ ಕಾಲೋನಿ ರಸ್ತೆ, ಐಮಂಗಲ ಪ.ಜಾತಿ ಕಾಲೋನಿ ರಸ್ತೆ, ಚೀರಣೆ ಪ.ಜಾತಿ ಕಾಲೋನಿ ರಸ್ತೆ, ದೇವಣಗೇರಿ ಐಚಂಡ ಕುಟುಂಬಸ್ಥರ ಐನ್ ಮನೆ ರಸ್ತೆ, ಮಗ್ಗುಲ ಚೆರಿಯಮಟ್ಟು ರಸ್ತೆ, ದೇವಣಗೇರಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ತಡೆಗೋಡೆ, ಚೆಂಬೆಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ಕೊಡಗು ದಂತ ಕಾಲೇಜು ರಸ್ತೆ ಸೇರಿದಂತೆ ಒಟ್ಟು ರೂ. 143 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಭೂಮಿ ಪೂಜೆ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಯತೀಶ್, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ನಾಣಯ್ಯ, ಸದಸ್ಯರಾದ ತಾತಂಡ ಬಿಪಿನ್, ರಘು, ಸುಬ್ಬಯ್ಯ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಗ್ರಾಮಸ್ಥರಾದ ಮಂಡೆಪಂಡ ಮುತ್ತಪ್ಪ, ಚಾರಿಮಂಡ ಬಾನು ಬೋಪಣ್ಣ, ಗುತ್ತಿಗೆದಾರ ಪ್ರವೀಣ್ ಹಾಗೂ ಇತರರು ಹಾಜರಿದ್ದರು.

ನಂತರ ಶಾಸಕ ಕೆ.ಜಿ. ಬೋಪಯ್ಯ ದೇವಣಗೇರಿ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿ; ದೇವಾಲಯದ ಬೋಜನ ಕೊಠಡಿಗೆ ಸರಕಾರದ ಮುಜರಾಯಿ ಇಲಾಖೆಯ ಅನುದಾನದಲ್ಲಿ ರೂ. 5 ಲಕ್ಷದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ದೇವಾಲಯದ ಅಧ್ಯಕ್ಷ ಮುಕ್ಕಾಟೀರ ಪೂವಯ್ಯ, ಕಾರ್ಯದರ್ಶಿ ಐಚಂಡ ವಾಸು, ಸಮಿತಿಯ ಅಲ್ಲಪಂಡ ಉತ್ತಪ್ಪ, ಮುಂತಾದವರು ಉಪಸ್ಥಿತರಿದ್ದರು.