ಮಡಿಕೇರಿ, ಫೆ. 27: ‘ಒಂದು ದೇಶ, ಒಂದು ಪಡಿತರ’ ಹೆಸರಿನಲ್ಲಿ ಇ-ಕೆವೈಸಿ ಕಾರ್ಯ ಈಗಾಗಲೇ ಪ್ರಾರಂಭಿಸಲಾಗಿದೆ. ಇ-ಕೆವೈಸಿ ಮಾಡಿಸದೆ ಇರದ ಅಂತ್ಯೋದಯ ಅನ್ನಯೋಜನೆ ಎಎವೈ ಆದ್ಯತಾ ಪಡಿತರ ಚೀಟಿ ಬಿಪಿಎಲ್ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ ಎಪಿಎಲ್ ಸೇರ್ಪಡೆಗೊಂಡಿರುವ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚನ್ನು ನೀಡಿ ಇ-ಕೆವೈಸಿಯನ್ನು ಮಾಡಿಸಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಕೋರಿದ್ದಾರೆ.
ಪಡಿತರ ಚೀಟಿ ಕುಟುಂಬದ ಎಲ್ಲಾ ಸದಸ್ಯರು ಒಮ್ಮೆಲೆ ಹೋಗಿ ಬಯೋ ನೋಂದಣಿ ಮಾಡಬೇಕಾದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ತೆರಳಿ ಇ-ಕೆವೈಸಿ ಮಾಡಿಸಬಹುದು. ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಸಂಗ್ರಹಿಸಲಾಗುವುದು. ಈ ರೀತಿ ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಲು ಯಾವುದೇ ಶುಲ್ಕ ಇರುವುದಿಲ್ಲ. ಹಣ ತೆಗೆದುಕೊಂಡಲ್ಲಿ ತಾಲೂಕು ಅಹಾರ ಕಚೇರಿ, ಉಪ ನಿರ್ದೇಶಕರ ಕಚೇರಿಗೆ ದೂರು ನೀಡಬಹುದು.
ಎಎವೈ, ಆದ್ಯತಾ, ಆದ್ಯತೇತರ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಸದಸ್ಯರು ಈ ರೀತಿ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸುವುದು. ಇ-ಕೆವೈಸಿ ಕಾರ್ಯವನ್ನು ಕೇವಲ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಮಾಡಿಸಬೇಕಿದೆ. ಬಯೋ ಸೇವಾ ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಅಥವಾ ಇನ್ಯಾವುದೇ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಇ-ಕೆವೈಸಿ ಕಾರ್ಯ ಮಾಡುವಂತಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲಾ ವರ್ಗದ ಪಡಿತರ ಚೀಟಿಗಳ ಕುಟುಂಬದ ಸದಸ್ಯರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚನ್ನು ನೀಡಿ ಇ-ಕೆವೈಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಕೋರಿದ್ದಾರೆ.
ಪ್ರತಿಯೊಬ್ಬರ ರೇಷನ್ ಚೀಟಿ ಸಂಬಂಧಿಸಿದಂತೆ ಮಾಹಿತಿ ನೀಡಬೇಕಿದೆ. ಆ ನಿಟ್ಟಿನಲ್ಲಿ ಇ-ಕೆವೈಸಿ ನಡಿ ಬಯೋಮೆಟ್ರಿಕ್ ನೀಡಬೇಕಿದೆ. ಇದುವರೆಗೆ ಶೇ. 40 ರಷ್ಟು ಪ್ರಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಪಡಿತರ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ ಬಯೋಮೆಟ್ರಿಕ್ ನೀಡಬೇಕಿದೆ. ಕುಟುಂಬದವರ ಹೆಸರು ಸೇರಿಸುವುದು ಅಥವಾ ತೆಗೆದುಹಾಕಲು ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಿದೆ. ಬಿಪಿಎಲ್ ಕುಟುಂಬದವರಾಗಿದಲ್ಲಿ ಆದಾಯ ಪ್ರಮಾಣ ಪತ್ರ ತೆಗೆದುಕೊಂಡು ಹೋಗಬೇಕಿದೆ ಎಂದು ತಿಳಿಸಿದ್ದಾರೆ.