ಮಡಿಕೇರಿ, ಫೆ. 26: ಕಳೆದ ರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ಮಡಿಕೇರಿಯ ಚಾಮುಂಡೇಶ್ವರಿ ನಗರದ ಸಂತ್ರಸ್ತ ಮಹಿಳೆಯೊಬ್ಬರಿಗೆ ನೀಡಲಾಗಿದ್ದ ಪರಿಹಾರದ ಹಣದಲ್ಲಿ ಸುಮಾರು 40 ಸಾವಿರ ರೂ.ಗಳನ್ನು ನಗರಸಭಾ ಸಿಬ್ಬಂದಿಯೊಬ್ಬರು ಸಂತ್ರಸ್ತೆಗೆ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಮಡಿಕೇರಿ ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರಸಭಾ ಕಚೇರಿ ಎದುರು ದಿಢೀರ್ ಧರಣಿ ಕುಳಿತ ವೇದಿಕೆಯ ಪ್ರಮುಖರು ಬಾಕಿ ಉಳಿಸಿಕೊಂಡಿರುವ ಪರಿಹಾರದ ಹಣವನ್ನು ತಕ್ಷಣ ನೀಡಬೇಕು ಮತ್ತು ತಪ್ಪಿತಸ್ಥ ಅಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಸಂಘಟನೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ; ಚಾಮುಂಡೇಶ್ವರಿ ನಗರ ಬಡಾವಣೆಯ ನೂರ್ ಜಹಾನ್ ಎಂಬ ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ ಒಟ್ಟು 1.40 ಲಕ್ಷ ರೂ. ನೀಡಲಾಗಿತ್ತು. ಆದರೆ ಪರಿಹಾರ ವಿತರಣೆಗೆ ಸಂಬಂಧಿಸಿದ ನಗರಸಭೆಯ ಅಧಿಕಾರಿಯೊಬ್ಬರು ಬೆದರಿಕೆಯೊಡ್ಡಿ 40 ಸಾವಿರ ರೂ.ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದರು.

ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲಗಳಿದ್ದರೆ ಅದನ್ನು ನಗರ ಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ವಿತರಣೆಯಲ್ಲಿ ಲೋಪ ವಾಗಿದ್ದರೆ ಸರಿಪಡಿಸುವ ಕಾರ್ಯ ಮಾಡಬೇಕಾಗುತ್ತದೆ. ಆದರೆ ಏಕಾಏಕಿ ನಗರಸಭೆಯ ಅಧಿಕಾರಿ ಯೊಬ್ಬರು ದೌರ್ಜನ್ಯದಿಂದ ಸರ್ಕಾರದ ಹಣವನ್ನು ಕಸಿದುಕೊಂಡಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು. ವಿಕಲಚೇತನ ಪುತ್ರನನ್ನು ಹೊಂದಿರುವ ಸಂತ್ರಸ್ತೆ ನೂರ್‍ಜಹಾನ್ ಅವರು ಅಸಹಾಯಕರಾಗಿದ್ದು; ತಕ್ಷಣ ಹಣವನ್ನು ಮರಳಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಮೇಶ್ ಅವರು ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಸೂಕ್ತ ತನಿಖೆ ಕೈಗೊಂಡು ಸಂಬಂಧಿಸಿದ ಅಧಿಕಾರಿ ನೋಟೀಸ್ ನೀಡಲಾಗುವುದು. ನಂತರ ನೈಜಾಂಶ ತಿಳಿದುಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಮಹಿಳೆಗೆ ನ್ಯಾಯ ಸಿಗದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪವನ್ ಪೆಮ್ಮಯ್ಯ ತಿಳಿಸಿದರು.

ಖಜಾಂಚಿ ಉಮೇಶ್ ಗೌಡ, ನಿರ್ದೇಶಕ ಪಾಪು, ರವಿ, ವಿನು, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ಸಂತ್ರಸ್ತೆ ನೂರ್‍ಜಹಾನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.