ಮಡಿಕೇರಿ, ಫೆ.23 : ತನ್ನದೇ ಆದ ಧಾರ್ಮಿಕ ಇತಿಹಾಸವನ್ನು ಹೊಂದಿರುವ ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಮಾ.5 ರಿಂದ 15ರ ವರೆಗೆ ನಡೆಯಲಿದೆ.ಶ್ರೀಮೃತ್ಯುಂಜಯ ಕ್ಷೇತ್ರದಲ್ಲಿ ಹೋಮ, ಹವನಾದಿ ವಿವಿಧ ಪೂಜಾ ಕೈಂಕರ್ಯಗಳು ದಶದಿನಗಳ ಕಾಲ ಜರುಗಲಿದ್ದು, ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ವಾರ್ಷಿಕ ಪೂಜಾ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.ಬಾಡಗರಕೇರಿಯಲ್ಲಿರುವ ಶ್ರೀಮೃತ್ಯುಂಜಯ ಸ್ವಾಮಿ ದೇವಸ್ಥಾನಕ್ಕೆ ಎಂಟು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಮೃತ್ಯುಂಜಯನನ್ನು ನಂಬಿ ಬಂದರೆ ಸಾವಿನ ದವಡೆಯಲ್ಲಿರುವವರನ್ನು ಪಾರು ಮಾಡಿ ಅವರಿಗೆ ಆಯಸ್ಸು, ಆರೋಗ್ಯವನ್ನು ಕೊಟ್ಟು ಕಾಪಾಡುತ್ತಾನೆ ಎನ್ನುವ ಪ್ರತೀತಿ ಇದೆ. ತಾವು ಅನುಭವಿಸುತ್ತಿರುವ ಕಷ್ಟನಷ್ಟಗಳಿಂದ ಬಿಡುಗಡೆ ಮಾಡುವಂತೆ ಪ್ರಾರ್ಥಿಸಿಕೊಳ್ಳಲು ಪ್ರತಿದಿನ ಈ ಶಿವಕ್ಷೇತ್ರಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9448504020, 8277131623 ನ್ನು ಸಂಪರ್ಕಿಸಬಹುದಾಗಿದೆ.