ಹೆಬ್ಬಾಲೆ, ಫೆ. 23: ಸಮೀಪದ ಬಾಣವಾರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೇಸಿಗೆ ಅವಧಿಯಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಅರಣ್ಯದಂಚಿನಲ್ಲಿ ಫೈರ್‍ಲೈನ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಬಾಣವಾರ ವ್ಯಾಪ್ತಿಯ ಸೋಮವಾರಪೇಟೆ ರಸ್ತೆ, ಆಲೂರು ಸಿದ್ದಾಪುರ ರಸ್ತೆ, ಹೆಬ್ಬಾಲೆ ರಸ್ತೆ, ಮರಿಯನಗರ ರಸ್ತೆಯ ಅರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಜಿಲ್ಲಾರಸ್ತೆಗಳ ಎರಡು ಬದಿಯಲ್ಲಿ ಕುರುಚಲು ಗಿಡಗಳನ್ನು ತೆರವುಗೊಳಿಸಲಾಗುತ್ತಿದೆ.

ಬೇಸಿಗೆ ಅವಧಿ ಆರಂಭ ಗೊಂಡಂತೆ ಮರಗಿಡಗಳ ಎಲೆಗಳು ಉದುರಲು ಆರಂಭವಾಗುತ್ತದೆ. ಕಾಡಿನಲ್ಲಿ ಬಿಸಿಲಿನ ಬೇಗೆಗೆ ಬಿದಿರು ಮರಗಳು, ಗಿಡಗಂಟಿಗಳು ಒಣಗಿ ಹೋಗುತ್ತವೆ. ಈ ನಿಟ್ಟಿನಲ್ಲಿ ಅರಣ್ಯಕ್ಕೆ ಆಗುವ ಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಫೈರ್‍ಲೈನ್ ನಿರ್ಮಾಣ ಮಾಡಲಾಗುತ್ತಿದೆ.

ಬಾಣಾವರ ವಲಯದ ಉಪ ವಲಯ ಅರಣ್ಯಾಧಿಕಾರಿ ಜೆ. ಪುನೀತ್ ಮಾತನಾಡಿ, ಕಾಡಿನ ಮಧ್ಯೆ ಹಾದುಹೋಗುವ ರಸ್ತೆಗಳಲ್ಲಿ ಸಂಚರಿಸುವ ಧೂಮಪಾನಿಗಳು ಬೀಡಿ-ಸಿಗರೇಟ್‍ಗಳನ್ನು ಸೇದಿದ ನಂತರ ರಸ್ತೆ ಬದಿಯಲ್ಲಿ ಹಾಕಿದಾಗ ಅದರಿಂದ ಒಣಗಿದ ಹುಲ್ಲು ಮತ್ತು ಎಲೆಗಳಿಗೆ ಬೆಂಕಿ ತಾಗಿ ಅದು ಅರಣ್ಯ ಪ್ರದೇಶಕ್ಕೆ ವ್ಯಾಪಿಸಿ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳು ಬೆಂಕಿಗೆ ಸಿಲುಕಿ ನಾಶವಾಗುತ್ತದೆ. ಈ ಹಿನ್ನೆಲೆ ಅರಣ್ಯ ಸಂಪತ್ತು, ವನ್ಯಪ್ರಾಣಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ಬೇಸಿಗೆಗೂ ಮುನ್ನ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳ ಎಡ ಮತ್ತು ಬಲ ಬದಿಯಲ್ಲಿ ತಲಾ 16 ಕಿಲೋ ಮೀಟರ್ ಉದ್ದ 5 ಅಡಿ ಅಗಲ ಗಿಡಗಂಟಿಗಳನ್ನು ಕಡಿದು ಅವುಗಳಿಗೆ ಬೆಂಕಿಕೊಡ ಲಾಗುತ್ತಿದೆ. ಕಾಡಿಗೆ ಬೀಳುವ ಬೆಂಕಿಯನ್ನು ನಂದಿಸಲು ಹಾಗೂ ಕಣ್ಗಾವಲಿಡಲು ಅಲ್ಲದೆ ಬೆಂಕಿ ಇತರೆಡೆಗಳಿಗೆ ಹರಡುವದನ್ನು ತಡೆಯುವ ಸಲುವಾಗಿ ರಸ್ತೆಯ ಎರಡು ಕಡೆಗಳಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ ಒಣಗಿದ ಹುಲ್ಲನ್ನು ಸುಟ್ಟು ನಿರ್ಮಿಸುವ ಮಾರ್ಗವೇ ಫೈರ್‍ಲೈನ್ ಆಗಿದ್ದು, ಇದೀಗ ಜಿಲ್ಲೆಯ ವಿವಿಧೆಡೆಗಳಲ್ಲಿ ಫೈರ್‍ಲೈನ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು. ಅಲ್ಲದೆ ಈ ಭಾಗ ಕಾಡಾನೆಗಳ ಕಾರಿಡಾರ್ ಆಗಿದ್ದು, ವಾಹನ ಸವಾರರಿಗೆ ಕಾಡಾನೆಗಳ ಸಂಚಾರದ ದೃಶ್ಯ ಕೂಡ ಕಾಣಬೇಕು ಎಂಬ ಉದ್ದೇಶದಿಂದ ಫೈರ್‍ಲೈನ್ ಅನುಕೂಲವಾಗಲಿದೆ ಎಂದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಮಾರ್ಗದರ್ಶನಲ್ಲಿ ಫೈರ್‍ಲೈನ್ ಕಾರ್ಯ ಕೈಗೊಳ್ಳಲಾಗಿದೆ. ಈ ಸಂದರ್ಭ ವನಪಾಲಕರಾದ ಕರುಂಬಯ್ಯ, ವರುಣ್ ಸಿಬ್ಬಂದಿಗಳಾದ ಅಂಟೋನಿ ಮತ್ತಿತರರು ಇದ್ದರು.