ಕೂಡಿಗೆ, ಜ.31 : ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 11.2 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣ ಘಟಕದ ಕಾಮಗಾರಿಯು ಪ್ರಗತಿಯತ್ತ ಸಾಗುತ್ತಿದ್ದು, ಕಟ್ಟಡ ಕಾಮಗಾರಿಯೂ ಇದೀಗ ಶೇ.90 ರಷ್ಟು ಮುಗಿದಿದೆ. ಇನ್ನೂ ಕಟ್ಟಡ ಕಾಮಗಾರಿ ಶೇ.10 ರಷ್ಟು ಆಗಬೇಕಿದ್ದು, ಅದರ ಜೊತೆಗೆ ಘಟಕಕ್ಕೆ ಬೇಕಾಗುವ ಯಾಂತ್ರೋಪಕರಣ ಮತ್ತು ಮೇಕೆ ಹಾಲು ಸಂಸ್ಕರಣಕ್ಕೆ ಬೇಕಾಗುವ ಶಿಥೀಲಿಕರಣ ಕೇಂದ್ರ ಹಾಗೂ ಮೇಕೆಗೆ ಹುಲ್ಲು ಸಂಗ್ರಹಣ ಘಟಕ, ಮೇಕೆ ಸಾಕಾಣಿಕ ಕೇಂದ್ರಕ್ಕೆ ಜೋಡಣೆಯ ಕಾರ್ಯವು ಪಶುಪಾಲನಾ ಇಲಾಖೆಯ ವತಿಯಿಂದ ಆಗಬೇಕಿದೆ. ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದ್ದರೂ, ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಪಶುಪಾಲನೆ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ.ಪ್ರಶಾಂತ್‍ಮೂರ್ತಿ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ರಾಜ್ಯ ಸರ್ಕಾರದ ಈ ಯೋಜನೆಯು 5 ಕೋಟಿ ರೂ. ವೆಚ್ಚದ್ದಾಗಿದ್ದು, ಕಾಮಗಾರಿಗೆ ಪಶು ಸಂಗೋಪನಾ ಇಲಾಖೆಯಿಂದ 3 ಕೋಟಿ ರೂ ಬಿಡುಗಡೆಯಾಗಿದ್ದು, ಬಿಡುಗಡೆಯ ಹಣದಲ್ಲಿ ಮೇಕೆ ಹಾಲು ಉತ್ಪಾದನಾ ಘಟಕದ ಕಟ್ಟಡ ಕಾಮಗಾರಿ ಇದೀಗ ಶೇ.90 ಭಾಗದಷ್ಟು ಪೂರ್ಣಗೊಂಡಿದೆ. ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಅವರು, ಇದೀಗ ಆಗಬೇಕಿರುವ ಕಾಮಗಾರಿಯನ್ನು ನಡೆಸಲು ಟೆಂಡರ್ ಪ್ರಕ್ರಿಯೆಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವು ದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಮೇಕೆಗಳಿಗೆ ಆಧುನಿಕ ರೀತಿಯ ಪಂಜರ ಹಾಗು ಹುಲ್ಲುಗಾವಲನ್ನು ನಿರ್ಮಿಸಲು ಈಗಾಗಲೇ ಗುರುತಿಸಲಾಗಿರುವ 112 ಎಕರೆ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಯೊಳಗೆ 50 ಜಾತಿಯ ಹೈಬ್ರಿಡ್ ಹುಲ್ಲಿನ ತಳಿಗಳನ್ನು ಬೆಳೆಸುವ ಯೋಜನೆಯಿದೆ. ಅಲ್ಲದೆ ರಾಜ್ಯದಲ್ಲಿನ ಬರಗಾಲಪೀಡಿತ ಪ್ರದೇಶಗಳಿಗೆ ಇಲ್ಲಿನಿಂದ ಬೆಳೆಸಲಾದ ಹುಲ್ಲನ್ನು ಕಳಿಸುವ ಯೋಜನೆಯು ಇದಾಗಿದೆ. ಇದರ ಜೊತೆಯಲ್ಲಿ ಮಲೆನಾಡು ಗಿಡ್ಡ ರಾಸುಗಳು ಮತ್ತು ಸ್ಥಳೀಯ ಹಸುಗಳನ್ನು ಪ್ರೋತ್ಸಾಹಿಸುವ ಯೋಜನೆಯು ಇದಾಗಿದೆ. ಪಶುಸಂಗೋಪನ ಇಲಾಖೆಯ ರಾಜ್ಯ ಉಪನಿರ್ದೇಶಕರು ಇದರ ಉಸ್ತುವಾರಿಯನ್ನು ವಹಿಸಿರುತ್ತಾರೆ.

ಈವರೆಗೆ ಬಿಡುಗಡೆಯಾಗಿರುವ 67 ಲಕ್ಷ ರೂ ಹಣದಲ್ಲಿ ಇದೀಗ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಇನ್ನುಳಿದ 8 ಲಕ್ಷ ರೂ ವೆಚ್ಚದಲ್ಲಿ ಸುತ್ತಲು ಸಿಮೆಂಟ್ ಕಂಬದ ಬೇಲಿ, ಮೇಕೆಗಳಿಗೆ ಬೇಕಾಗುವ ಹುಲ್ಲು ಬೆಳೆಸಲು ಸಿದ್ಧತೆಗಳು ನಡೆಯುತ್ತಿವೆ. ಇದರ ಜೊತೆಯಲ್ಲಿ ಈ ಕೇಂದ್ರದಲ್ಲಿ ಈಗಾಗಲೇ 500 ಮೇಕೆ ಸಾಕಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರ ಜೊತೆಯಲ್ಲಿ ಮೇಕೆ ಹಾಲು ಸಂಗ್ರಹದ ಶಿಥಿಲೀಕರಣ ಘಟಕ ಕಾಮಗಾರಿ ನಡೆಯಬೇಕಾಗಿದೆ. ಅಲ್ಲದೆ, ರಾಜ್ಯದಲ್ಲೇ ಪ್ರಪ್ರಥಮವಾಗಿರುವ ರಾಜ್ಯ ಸರ್ಕಾರದ ಈ ಯೋಜನೆಗೆ ರಾಜ್ಯ ಪಶುಪಾಲನ ಇಲಾಖೆಯ ಮುಖ್ಯಕಾರ್ಯದರ್ಶಿಗಳ ಮೂಲಕ ಸಭೆ ನಡೆದು ಸರ್ಕಾರದಿಂದ ಅನುಮತಿ ಪಡೆದು ಮೇಕೆಗಳನ್ನು ರಾಜ್ಯ, ಹೊರರಾಜ್ಯ ಮತ್ತು ಹೊರ ದೇಶಗಳಿಂದ ತರಿಸಿಕೊಂಡು ಅವುಗಳ ಸಾಕಾಣಿಕೆ ಮತ್ತು ಅಭಿವೃದ್ಧಿ ಪಡಿಸುವ ಬಗ್ಗೆ ರಾಜ್ಯ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ.

ಈ ಕೇಂದ್ರವು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿರುವ ಜರ್ಸಿತಳಿ ಸಂವರ್ಧನಾ ಕೇಂದ್ರದ ಅಧೀನ ದಲ್ಲಿದ್ದು, ಇದರ ಜವಾಬ್ದಾರಿ ಯನ್ನು ಜರ್ಸಿತಳಿ ಸಂವರ್ಧನಾ ಕೇಂದ್ರವು ವಹಿಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಜರ್ಸಿತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕರನ್ನು ಸುದ್ದಿಗಾರರು ಮಾತನಾಡಿಸಿದಾಗ, ಕೇಂದ್ರಕ್ಕೆ ಬೇಕಾಗುವ ಹೆಚ್ಚು ಮೇಕೆಗಳು ಮತ್ತು ಸಾಕಾಣಿಕೆ ಮಾಡಲು ಬರಿಸಬಹು ದಾದ ವೆಚ್ಚ ಹಾಗೂ ಬರುವ ಹಾಲಿನ ಉತ್ಪಾದನೆ ಮತ್ತು ಅದರ ಸದ್ಬಳಕೆಯ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮೇಲಾಧಿಕಾರಿಗಳ ಆದೇಶದನ್ವಯ ಕಾರ್ಯಪ್ರವೃತ್ತ ರಾಗಲು ಸಿದ್ಧರಿದ್ದು, ಇದೀಗ ಜಿಲ್ಲಾಧಿಕಾರಿಗಳ ಆದೇಶದನ್ವಯ ಇ-ಟೆಂಡರ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಇದಕ್ಕೆ ಬೇಕಾಗುವ ಎಲ್ಲಾ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಇಲಾಖೆಯ ಮೂಲಕ ತರಲಾಗಿದ್ದು, ಜಿಲ್ಲಾಧಿಕಾರಿ ಯವರು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜರ್ಸಿ ತಳಿ ಸಂವರ್ಧನಾ ಕೇಂದ್ರದ ಅಧಿಕಾರಿ ತಿಳಿಸಿದರು. ಈ ಸಂದರ್ಭ ಜರ್ಸಿ ತಳಿ ಸಂವರ್ಧನ ಕೇಂದ್ರದ ಉಪನಿರ್ದೇಶಕ ಡಾ.ಬಾದಾಮಿ ಸೇರಿದಂತೆ ಸಿಬ್ಬಂದಿಗಳು ಇದ್ದರು.

-ಕೆ.ಕೆ.ನಾಗರಾಜ ಶೆಟ್ಟಿ