ಮಡಿಕೇರಿ, ಜ. 27: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ವೀರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ.

ಗ್ರಾಮದ ಕೊಕ್ಕೆಂಗಡ ಜಯ ಭೀಮಯ್ಯ ಎಂಬವರ ತೋಟದ ಕೆರೆದಂಡೆ ಮೇಲೆ 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ತಿಳಿದು ಉರಗ ತಜ್ಞ ಶರತ್ ಹಾಗೂ ತಂಡ ಕಾರ್ಯಾಚರಣೆ ಮಾಡಿ ರಕ್ಷಿಸಿ ಕಾಡಿಗೆ ಬಿಟ್ಟಿತು.

ಭಾನುವಾರ ಸಂಜೆ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ತಿಳಿದು ಶರತ್ ಮತ್ತು ತಂಡ ಸ್ಥಳಕ್ಕೆ ತೆರಳಿ ಸತತ ಒಂದು ಗಂಟೆ ಪ್ರಯತ್ನಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಕಾಳಿಂಗ ಸರ್ಪವನ್ನು ಇಂದು ಮಡಿಕೇರಿಯ ಗಾಂಧಿಮೈದಾನಕ್ಕೆ ತಂದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಶರತ್ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದರು.

ಹಾವು ಕಂಡರೆ ಕೊಲ್ಲಬೇಡಿ, ನಮಗೆ ಮಾಹಿತಿ ನೀಡಿ. ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡಿದರು. ಕಳೆದ ಹಲವು ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿರುವ ಶರತ್ ಈವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇವುಗಳ ಪೈಕಿ 23ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು ಸೇರಿವೆ.

ಸುಳುಗೋಡಿನಲ್ಲಿ ಸೆರೆಹಿಡಿದ ಕಾಳಿಂಗ ಸರ್ಪವನ್ನು ಅರಣ್ಯಾಧಿಕಾರಿಗಳ ಅನುಮತಿಯೊಂದಿಗೆ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.