ಮಡಿಕೇರಿ, ಜ. 21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಸಂತ ವೇಮನ ಜಯಂತಿ ಕಾರ್ಯಕ್ರಮವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಎಲ್ಲಾ ಮಹನೀಯರ ಜೀವನ ಮತ್ತು ಚಿಂತನೆಗಳನ್ನು ಪುನರ್ ಸ್ಮರಿಸುವ ಮತ್ತು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ವೇಮನ ಮತ್ತು ಅಂಬಿಗರ ಚೌಡಯ್ಯನವರು ಸಮಾನತೆಗಾಗಿ, ಸ್ತ್ರೀ ಶೋಷಣೆಯ ವಿರುದ್ಧವಾಗಿ ಧ್ವನಿ ಎತ್ತಿದವರು. ಅವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹೆಬ್ಬಾಲೆ ಪ್ರೌಢಶಾಲೆಯ ಶಿಕ್ಷಕ ಮೆ.ನಾ. ವೆಂಕಟನಾಯಕ ಮಾತನಾಡಿ, ಅಂಬಿಗರ ಚೌಡಯ್ಯ ಒಬ್ಬ ಅದ್ಭುತ ಚಿಂತಕ. ಸಮಾನತೆಯ ಸಾರವನ್ನು ತನ್ನ ಕಠಿಣ ಪದಗಳ ಮೂಲಕ ಜನರಿಗೆ ತಿಳಿಸಿದ ಶ್ರೇಷ್ಠ ವಚನಕಾರ ಎಂದರು. ಆಂಧ್ರಪ್ರದೇಶಲ್ಲಿ ವೇಮನ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ವಚನಕಾರರು ಮತ್ತು ಸಾಹಿತಿಗಳು ಬೃಹತ್ ಆಗಿ ಬೆಳೆದ ಆಲದ ಮರವಿದ್ದಂತೆ. ಆ ಮರದಡಿ ಯಲ್ಲಿ ಯಾವುದೇ ಜಾತಿ-ಧರ್ಮದ ವಿಚಾರಗಳಿಲ್ಲದೆ ಸಾಹಿತ್ಯದ ನೆರಳನ್ನು ಎಲ್ಲರಿಗೂ ನೀಡುತ್ತಾರೆ ಎಂದರು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ರಾಜು ಮತ್ತು ತಂಡದವರು ನಾಡಗೀತೆ ಹಾಡಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.