ಗೋಣಿಕೊಪ್ಪಲು, ಜ.17: ಹಿಂದೂ ಮಲಯಾಳಿ ಸಮಾಜದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮವು ಗೋಣಿಕೊಪ್ಪಲುವಿನಲ್ಲಿ ನಡೆಯಿತು. ಸಮಾಜದ ಅಧ್ಯಕ್ಷ ಶರತ್‍ಕಾಂತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಕಾರ್ಯದರ್ಶಿ ಹಾಗೂ ಪತ್ರಕರ್ತ ವಿ.ವಿ.ಅರುಣ್‍ಕುಮಾರ್ ಹಾಗೂ ಸಮಾಜದ ಮುಖಂಡ ಸುಬ್ರಮಣಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೋಣಿಕೊಪ್ಪ ಎಸ್‍ಎನ್‍ಡಿಪಿ ಅಧ್ಯಕ್ಷ ಕೆ.ಜೆ. ಜನಾರ್ಧನ್ ಸಂಘಟನೆ ಉತ್ತಮವಾಗಿ ಬೆಳೆಯಲು ಎಲ್ಲರ ಸಹಕಾರ ಅವಶ್ಯಕ. ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಕಾರ ನೀಡುವಂತಾಗಬೇಕು. ಕಡಿಮೆ ಅವಧಿಯಲ್ಲಿ ಕಚೇರಿ ಆರಂಭಗೊಂಡಿರುವುದು ಸಮಾಜದ ಗಟ್ಟಿತನವನ್ನು ತೋರಿಸುತ್ತಿದೆ ಎಂದರು.

ಸಮಾಜದ ಗೌರವ ಅಧ್ಯಕ್ಷ ಭಾಸ್ಕರ್ ಮಾತನಾಡಿ ಸಮಾಜ ಭಾಂದವರನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ನಡೆಸಿ ಎರಡು ವರ್ಷದ ನಂತರ ಕಚೇರಿಯನ್ನು ಆರಂಭಿಸಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೆ.ಎಸ್.ಎಸ್.ಎಸ್. ಗೋಣಿಕೊಪ್ಪ ಶಾಖೆಯ ಅಧ್ಯಕ್ಷರಾದ ಪಿ.ಜಿ.ಪವಿತ್ರನ್, ಗೋಣಿಕೊಪ್ಪ ವಿಶ್ವಕರ್ಮ ಶಾಖೆಯ ಅಧ್ಯಕ್ಷ ವಿನೋದ್, ಪ್ರಶಾಂತ್ ಜ್ಯುವೆಲ್ಲರಿ ಮಾಲೀಕ ಮೀರಾ ಗೋಪಿನಾಥನ್, ಸೌಂದರ್ಯ ಗಿಫ್ಟ್‍ಶಾಪ್‍ನ ಮಾಲೀಕರಾದ ಸಜಿತ ಚಂದ್ರಶೇಖರ್, ಗೋಣಿಕೊಪ್ಪ ಪ್ರಕಾಶ್ ಇಂಟರ್‍ನ್ಯಾಷನಲ್ ಹೊಟೇಲ್‍ನ ಮಾಲೀಕ ಪ್ರಕಾಶ್, ಸುಬ್ರಮಣಿ ಮತ್ತಿತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಕೆಲಸಕ್ಕೆ ಸಹಕರಿಸಿದ ಆಯ್ದ ಪ್ರಮುಖರನ್ನು ಗೌರವಿಸಲಾಯಿತು. ಸಮಾಜದ ಪ್ರಮುಖರಾದ ಪ್ರಭು, ಅಪ್ಪು, ಪ್ರಶಾಂತ್, ಸುನೀಲ್, ಕೃಷ್ಣನ್, ಶ್ರೀಜಾ ಪ್ರದೀಪ್, ಪುಷ್ಪಮನೋಜ್, ಅಮೃತ್ ರಾಜ, ವಿಮಲ, ರಾಜಶೇಖರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶ್ರೀಮಂಗಲ ಪಾಲಿಬೆಟ್ಟ ಸೇರಿದಂತೆ ಇನ್ನಿತರ ಭಾಗಗಳಿಂದ ಸಮಾಜದ ಬಾಂಧವರು ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಸಮಾಜದ ಮುಖಂಡ ಸುಬ್ರಮಣಿ ಮಾತನಾಡಿದರು. ಕಾರ್ಯದರ್ಶಿ ವಿ.ವಿ.ಅರುಣ್ ಕುಮಾರ್ ಸ್ವಾಗತಿಸಿದರು.ಪುಷ್ಪಮನೋಜ್ ವಂದಿಸಿದರು.