ಕೂಡಿಗೆ, ಜ. 17: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಪ್ಪನಗುಡಿ ಸಮೀಪದಲ್ಲಿ ಮಲೆನಾಡು ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ. 24.04 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಸಾರ್ವಜನಿಕ ಬಸ್ ತಂಗುದಾಣದ ಕಾಮಗಾರಿ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ವೀಕ್ಷಿಸಿದರು. ಈ ಭಾಗದಲ್ಲಿ ಅಳುವಾದ ಸ್ನಾತಕೋತ್ತರ ಪದವಿ ಕೇಂದ್ರಕ್ಕೆ, ಕುಶಾಲನಗರ, ಕೂಡಿಗೆ, ಶನಿವಾರಸಂತೆ ಭಾಗಕ್ಕೆ ನೂರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ತೆರಳುತ್ತಾರೆ. ಈ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಶಾಸಕರ ನಿಧಿಯಿಂದ ರೂ. 5 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಅಲ್ಲದೆ ಗ್ರಾಮ ಪಂಚಾಯಿತಿ ವತಿಯಿಂದ ಅಂಗಡಿ ಮಳಿಗೆಗಳನ್ನು ನಿರ್ಮಿಸಲು ತಿಳಿಸಿದರು.

ಈ ಸಂದರ್ಭ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಸದಸ್ಯರಾದ ಮಹೇಶ, ಸುಲೋಚನ, ಪ್ರಮುಖರಾದ ಶಿವಪ್ಪ, ಗಣೇಶ್, ಶಂಕರಪ್ಪ, ಉದಯ, ಶಾಸಕರ ಅಪ್ತ ಸಹಾಯಕ ರವಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಸೇರಿದಂತೆ ಗ್ರಾಮಸ್ಥರು ಇದ್ದರು.