ಮಡಿಕೇರಿ, ಜ.16 : ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಹಾಗೂ ಅಸಂಘಟಿತ ಕಾರ್ಮಿಕರಿಗೆ ಯೋಜನೆ ಜಾರಿಗೊಳಿಸಿದ್ದು, 18 ರಿಂದ 40 ವರ್ಷದೊಳಗಿನ 15 ಸಾವಿರ ರೂ ಒಳಗೆ ಮಾಸಿಕ ಆದಾಯ ಹೊಂದಿರುವವರು ಹೆಸರು ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಕಾರ್ಯಕ್ರಮಗಳ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಹೆಸರು ನೋಂದಾಯಿಸಿ 60 ವರ್ಷದವರೆಗೆ ಅಸಂಘಟಿತ ಕಾರ್ಮಿಕರು ಮಾಸಿಕವಾಗಿ ಕನಿಷ್ಟ 58 ರೂ. ನಿಂದ 200 ರೂ.ವರೆಗೆ ವಂತಿಕೆ ಪಾವತಿ ಮಾಡಿದ್ದಲಿ,್ಲ 60 ವರ್ಷ ಪೂರ್ಣಗೊಂಡ ನಂತರ ಪ್ರತೀ ತಿಂಗಳು 3 ಸಾವಿರ ರೂ. ಮಾಸಿಕ ಪಿಂಚಣಿ ಸೌಲಭ್ಯ ದೊರೆಯಲಿದ್ದು, ಈ ಅವಕಾಶ ಬಗ್ಗೆ ಅಸಂಘಟಿತ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಅಸಂಘಟಿತ ಕಾರ್ಮಿಕರ ವಂತಿಕೆ ಜೊತೆಗೆ ಸರ್ಕಾರವು ವಂತಿಕೆ ಭರಿಸಲಿದ್ದು, ಈ ಅವಕಾಶವನ್ನು ಬಳಸಿಕೊಳ್ಳು ವಂತಾಗಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾಹಿತಿ ನೀಡಿ ಜಿಲ್ಲೆಯಲ್ಲಿ 9 ಸಾವಿರ ಮಂದಿ ಅಸಂಘಟಿತ ಕಾರ್ಮಿಕರ ಹೆಸರು ನೋಂದಾಯಿಸುವ ಗುರಿ ಹೊಂದ ಲಾಗಿದೆ. ಈಗಾಗಲೇ 1031 ಮಂದಿ ಅಸಂಘಟಿತ ಕಾರ್ಮಿಕರ ಹೆಸರು ನೋಂದಾಯಿಸಲಾಗಿದೆ ಎಂದರು. ಇಎಸ್‍ಐ/ಪಿಎಫ್ ಒಳಪಡದ ಕಾರ್ಮಿಕರು ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ಬರಲಿದ್ದಾರೆ ಎಂದು ತಿಳಿಸಿದರು. ತಾ. 30 ರೊಳಗೆ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದಾಗಿದೆ. (ಆಧಾರ್ ನೋಂದಣಿ ಮಾಡುವ ಕೇಂದ್ರಗಳಲ್ಲಿ) ಎಂದು ಅವರು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಭಾರತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್, ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ತಾಲೂಕು ಕಾರ್ಮಿಕ ಅಧಿಕಾರಿಗಳಾದ ಯತ್ನಟ್ಟಿ(ಮಡಿಕೇರಿ), ಮಹದೇವ ಸ್ವಾಮಿ (ಸೋಮವಾರಪೇಟೆ), ಬಾಲ ಕಾರ್ಮಿಕ ಸೊಸೈಟಿಯ ಶಿರಾಜ್ ಅಹ್ಮದ್ ಇತರರು ಇದ್ದರು.