ಮಡಿಕೇರಿ, ಜ. 11: ಕಳೆದ ವರ್ಷ ವೀರಾಜಪೇಟೆ ತಾಲೂಕಿನ ಎಲ್ಲಾ ಭಾಗಗಳಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆಯಾದ ಪರಿಣಾಮ ಮಣ್ಣಿನಲ್ಲಿನ ಖನಿಜ ಮತ್ತು ಲವಣಾಂಶಗಳಲ್ಲಿ ಕೊರತೆ ಕಂಡುಬರುವ ಸಾಧ್ಯತೆಗಳಿದ್ದು, ಮಣ್ಣಿನ ರಸಸಾರದಲ್ಲಿ ವ್ಯತ್ಯಯ ಉಂಟಾಗಿ ನಾವು ನೀಡುವ ಗೊಬ್ಬರವನ್ನು ಗಿಡಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಾಗದೆ ಕಾಫಿ ಇಳುವರಿಯಲ್ಲಿ ವ್ಯತ್ಯಯ ಆಗುವುದರ ಜೊತೆಗೆ ವರ್ಷವಿಡೀ ನಾವುಗಳು ಕೈಗೊಳ್ಳುವ ಎಲ್ಲಾ ಕೃಷಿ ಚಟುವಟಿಕೆಗಳು ವ್ಯರ್ಥವಾಗುತ್ತವೆ. ಆ ದಿಸೆಯಲ್ಲಿ ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆಯ ಮಹತ್ವವನ್ನರಿತು, ವೈಜ್ಞಾನಿಕವಾಗಿ ಪರೀಕ್ಷಾಧಾರದ ಮೇಲೆ ನೀಡುವ ಫಲಿತಾಂಶವನ್ನಾಧರಿಸಿ ತಮ್ಮ ತೋಟಗಳಿಗೆ ಸುಣ್ಣ ಮತ್ತು ಗೊಬ್ಬರವನ್ನು ನೀಡುವುದು ಅತೀ ಅವಶ್ಯಕವಾಗಿದೆ. ಈಗಾಗಲೇ ರೋಬಷ್ಟಾ ಕಾಫಿಯ ಕೊಯ್ಲು ಪ್ರಾರಂಭವಾಗಿದ್ದು, ಕೊಯ್ಲಿನ ನಂತರ ಎಲ್ಲಾ ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯೋ ನ್ಮುಕರಾಗಬೇಕಿದೆ. ಮಣ್ಣು ಪರೀಕ್ಷೆಗೆ ಮಣ್ಣಿನ ಮಾದರಿಯನ್ನು ತೆಗೆಯುವ ವಿಧಾನದ ಬಗ್ಗೆ ಮತ್ತು ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಅಥವಾ ಚೆಟ್ಟಳ್ಳಿ ಕಾಫಿ ಉಪ ಸಂಶೋಧನ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ವೀರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು (ವಿಸ್ತರಣೆ) ತಿಳಿಸಿದ್ದಾರೆ.