ಮಡಿಕೇರಿ, ಡಿ. 28: ಜಿಲ್ಲೆಯಲ್ಲಿ 1,03,304 ಬಿಪಿಎಲ್ ಪಡಿತರ ಚೀಟಿದಾರರು ಇದ್ದು, ಕುಟುಂಬದ ತಲಾ ಒಬ್ಬರಿಗೆ 7 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದಲ್ಲಿ 28 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಹಾಗೆಯೇ ಬಿಪಿಎಲ್ ಪಡಿತರ ಚೀಟಿ ಜೊತೆಗೆ ಅಂತ್ಯೋದಯ ಯೋಜನೆಯಡಿ 6,236 ಕಾರ್ಡ್ ವಿತರಿಸಲಾಗಿದ್ದು, ಒಂದು ಅಂತ್ಯೋದಯ ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 25,278 ಎಪಿಎಲ್ ಕಾರ್ಡ್‍ದಾರರು ಇದ್ದಾರೆ. ಮಡಿಕೇರಿ ತಾಲೂಕಿನಲ್ಲಿ ಬಿಪಿಎಲ್ ಕಾರ್ಡ್‍ದಾರರು 24,101, ಎಪಿಎಲ್ ಕಾರ್ಡ್‍ದಾರರು 11,062, ಅಂತ್ಯೋದಯ ಯೋಜನೆಯಡಿ 818 ಮಂದಿ ಕಾರ್ಡ್ ಪಡೆದಿದ್ದಾರೆ.

ವೀರಾಜಪೇಟೆ ತಾಲೂಕಿನಲ್ಲಿ ಬಿಪಿಎಲ್ ಕಾರ್ಡ್‍ದಾರರು 33,612 ಮಂದಿ, ಎಪಿಎಲ್ ಕಾರ್ಡ್‍ದಾರರು 9,258, ಅಂತ್ಯೋದಯ ಯೋಜನೆಯಡಿ 3,680 ಮಂದಿ ಕಾರ್ಡ್ ಪಡೆದಿದ್ದಾರೆ.

ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ ಬಿಪಿಎಲ್ ಕುಟುಂಬದಡಿ 45,591, ಎಪಿಎಲ್ ಕಾರ್ಡ್ 4,958, ಅಂತ್ಯೋದಯ ಯೋಜನೆಯಡಿ 1,738 ಮಂದಿ ಕಾರ್ಡ್ ಪಡೆದಿದ್ದಾರೆ.

ಬಿಪಿಎಲ್ ಮತ್ತು ಅಂತ್ಯೋದಯ ಅಡುಗೆ ಅನಿಲ ಚೀಟಿಯನ್ನು 99,445 ಮಂದಿ ಪಡೆದಿದ್ದಾರೆ. ಹಾಗೆಯೇ ಬಿಪಿಎಲ್ ಮತ್ತು ಅಂತ್ಯೋದಯದಡಿ 10,095 ಮಂದಿ ಅನಿಲ ರಹಿತ ಪಡಿತರ ಚೀಟಿದಾರರು ಇದ್ದಾರೆ ಎಂದು ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.