26-12-2019ರ ಗುರುವಾರ ಮಾರ್ಗಶಿರ ಕೃಷ್ಣ ಅಮಾವಾಸ್ಯೆಯ ದಿನ ಸಂಭವಿಸುವ ಕೇತುಗ್ರಸ್ತ ಸಂಪೂರ್ಣ ಸೂರ್ಯ ಗ್ರಹಣದ ವಿವರ ಈ ಕೆಳಗಿನಂತಿದೆ.

ವಿಕಾರಿ ನಾಮ ಸಂವತ್ಸರದ ಮಾರ್ಗಶಿರ ಬಹುಳ ಅಮಾವಾಸ್ಯೆ ತಾ. 26 ಗುರುವಾರ ಮೂಲಾ ನಕ್ಷತ್ರ, ಧನು ರಾಶಿಯಲ್ಲಿ, ವೃಶ್ಚಿಕ, ಧನು ಮತ್ತು ಮಕರ ಲಗ್ನಗಳಲ್ಲಿ, ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತದೆ.

ಸೂರ್ಯೋದಯಾದಿ ಗ್ರಹಣ ಸ್ಪರ್ಶ ಕಾಲ : ಬೆಳಿಗ್ಗೆ 8-07 ಗಂಟೆ, ಗ್ರಹಣ ಮಧ್ಯ ಕಾಲ : 9-37-5 ಹಾಗೂ ಗ್ರಹಣ ಮೋಕ್ಷ ಕಾಲ: ಬೆಳಿಗ್ಗೆ 11-08 ಗಂಟೆ.

ಆದ್ಯಂತ ಪುಣ್ಯಕಾಲ: 3 ಘಂಟೆ 1 ನಿಮಿಷ. ಗ್ರಹಣವು ಭಾರತ ದೇಶದಲ್ಲಿ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ. ಮಾರ್ಗಶಿರ ಕೃಷ್ಣ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ ಹಗಲು 8-07 ರಿಂದ ಪ್ರಾರಂಭವಾಗಿ ಹಗಲು 11-08 ಕ್ಕೆ ಮೋಕ್ಷ ಕಾಲವಾಗಿರುತ್ತದೆ.

ಭೋಜನ ವಿಚಾರ : ತಾ. 25ನೇ ಬುಧವಾರ ಸೂರ್ಯೋದಯಾಸ್ತಕ್ಕೆ ಮೊದಲು ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಆ ದಿನ ರಾತ್ರಿ 8-40 ಗಂಟೆಯವರೆಗೂ ಆಹಾರ ಸೇವಿಸಬಹುದು.

ತರ್ಪಣ ವಿಚಾರ : ಆ ದಿನ ಗ್ರಹಣ ಮಧ್ಯಕಾಲಾನಂತರ ಅಂದರೆ ತಾ. 26 ರಂದು ಗುರುವಾರ ಹಗಲು 8-07 ರಿಂದ 9-37 ಗಂಟೆಯೊಳಗೆ ತರ್ಪಣ ಮಾಡಬಹುದು.

ಶ್ರಾದ್ಧ ವಿಚಾರ : ತಾ. 26 ರಂದು ನಡೆಸತಕ್ಕ ಮಾರ್ಗಶಿರ ಕೃಷ್ಣ ಅಮಾವಾಸ್ಯೆ ಶ್ರಾದ್ಧವನ್ನು ಗ್ರಹಣ ಮೊಕ್ಷಕಾಲಾನಂತರ ನಡೆಸತಕ್ಕದ್ದು.

ಶಾಂತಿ ವಿಚಾರ : “ಮೂಲಾ ನಕ್ಷತ್ರದವರು ಧನಸ್ಸು” ರಾಶಿಯವರೂ ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ಯಥಾಶಕ್ತಿ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.

ಶ್ಲೋಕ : ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ|

ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |

ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |

ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||

ಗ್ರಹಣಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳು : ಗ್ರಹಣದ ಆರಂಭ ಅಂತ್ಯಗಳಲ್ಲಿ ಧರಿಸಿದ ಬಟ್ಟೆಯ ಸಮೇತ ಸ್ನಾನವನ್ನು ಮಾಡಲೇಬೇಕು. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿ ಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ಸೂರ್ಯ ಗ್ರಹಣದ ಸೂತಕವು ಗ್ರಹಣ ಆರಂಭದ ಒಂಬತ್ತು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.

ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟ ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟ ಆಹಾರ ತಿನ್ನಬಾರದು. ದೇವಾಲಯ ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು. ಶೌಚಾಲಯದ ಬಳಕೆಯನ್ನು ಮಾಡಬಾರದು. ಗ್ರಹಣ ಕಾಲದಲ್ಲಿ ಲೈಂಗಿಕ ಸಂಪರ್ಕ ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಅಲಂಕಾರ ಮಾಡಿಕೊಳ್ಳಬಾರದು.

‘‘ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ” ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.

ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು. ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇ ಬೇಕು. ಆದರೆ, ಅವರು ಜಪ ಪಾರಾಯಣ ಗಳನ್ನು ಮಾಡಬಾರದು. ಗ್ರಹಣದ ಕಾಲದಲ್ಲಿ ಮೂಲಾ ನಕ್ಷತ್ರ ಮತ್ತು ಧನುಸ್ಸು ರಾಶಿಯವರು ಹಾಗೂ ಗರ್ಭಿಣಿಯರು ಮನೆಯಲ್ಲೇ ಇರತಕ್ಕದ್ದು. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ. ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು. ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. ಸೂಚನೆ : ಧರ್ಮಶಾಸ್ತ್ರ ಗ್ರಂಥಗಳಲ್ಲಿ ತಿಳಿಸಿರುವ ರೀತಿ ಗ್ರಹಣಾಚರಣೆಯ ಕ್ರಮ ಆದರೆ ಆಚರಣೆ ಮಾಡುವುದು, ಬಿಡುವುದು ಜನತೆಯ ವೈಯಕ್ತಿಕ ಅಭಿಪ್ರಾಯಕ್ಕೆ ಸೇರಿದ್ದೂ ಆಗಿರುತ್ತದೆ.

- ಶಾಸ್ತ್ರಜ್ಞರು

ಕೃಪೆ: ಮಿತ್ತೂರು ಸಂಪ್ರತಿಷ್ಠಾನ