ಕೂಡಿಗೆ, ಡಿ. 14: ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ದಲ್ಲಿರುವ 11.2 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣ ಘಟಕದ ಕಾಮಗಾರಿಯು ಮೂರು ವರ್ಷಗಳಿಂದ ನಡೆದು ಕಟ್ಟಡ ಕಾಮಗಾರಿಯೂ ಇದೀಗ ಶೇ. 80 ರಷ್ಟು ಮುಗಿದಿದ್ದು, ಇದೀಗ ಕಾಮಗಾರಿಯು ಸ್ಥಗಿತಗೊಂಡಿದೆ.

ಇನ್ನೂ ಕಟ್ಟಡ ಕಾಮಗಾರಿ ಶೇ. 20 ರಷ್ಟು ಆಗಬೇಕಿದ್ದು, ಅದರ ಜೊತೆಗೆ ಘಟಕಕ್ಕೆ ಬೇಕಾಗುವ ಯಂತ್ರೋಪಕರಣ ಮತ್ತು ಮೇಕೆ ಹಾಲು ಸಂಸ್ಕರಣಕ್ಕೆ ಬೇಕಾಗುವ ಶಿಥಿಲೀಕರಣ ಕೇಂದ್ರ ಹಾಗೂ ಮೇಕೆಗೆ ಹುಲ್ಲು ಸಂಗ್ರಹಣ ಘಟಕ, ಮೇಕೆ ಸಾಕಾಣಿಕ ಕೇಂದ್ರಕ್ಕೆ ಜೋಡಣೆಯ ಕಾರ್ಯವು ಪಶುಪಾಲನಾ ಇಲಾಖೆಯ ವತಿಯಿಂದ ಆಗಬೇಕಿದೆ. ಕಟ್ಟಡ ಕಾಮಗಾರಿ ಮುಗಿಯುವ ಹಂತ ದಲ್ಲಿದ್ದರೂ, ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಇನ್ನೂ ನಡೆದಿಲ್ಲ.

ಮೂರು ವರ್ಷಗಳ ಹಿಂದೆ ಎ. ಮಂಜು ಅವರು ಕರ್ನಾಟಕ ರಾಜ್ಯ ಪಶು ಸಂಗೋಪನಾ ಮತ್ತು ರೇಷ್ಮೆ ಖಾತೆ ಮಾಜಿ ಸಚಿವರಾಗಿದ್ದ ಸಂದರ್ಭ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ್ದರು. ರಾಜ್ಯ ಸರ್ಕಾರದ ಈ ಯೋಜನೆಯು ರೂ. 5 ಕೋಟಿ ವೆಚ್ಚದ್ದಾಗಿದ್ದು, ಕಾಮಗಾರಿಗೆ ಪಶು ಸಂಗೋಪನ ಇಲಾಖೆಯಿಂದ ರೂ. 3 ಕೋಟಿ ಬಿಡುಗಡೆಯಾಗಿದ್ದು, ಬಿಡುಗಡೆಯ ಹಣದಲ್ಲಿ ಮೇಕೆ ಹಾಲು ಉತ್ಪಾದನಾ ಘಟಕದ ಕಟ್ಟಡ ಕಾಮಗಾರಿಯೂ ಇದೀಗ ಶೇ. 80 ಭಾಗದಷ್ಟು ಪೂರ್ಣಗೊಂಡಿದ್ದರೂ ಅದಕ್ಕೆ ಅಳವಡಿಸಬೇಕಾಗದ ಯಂತ್ರೋಪಕರಣಗಳ ಕಾಮಗಾರಿ ಸ್ಥಗಿತಗೊಂಡಿದೆ.

ಈ ಕೇಂದ್ರ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿರುವ ಜರ್ಸಿತಳಿ ಸಂವರ್ಧನಾ ಕೇಂದ್ರದ ಅಧೀನ ದಲ್ಲಿದ್ದು, ಇದರ ಜವಬ್ದಾರಿಯನ್ನು ಜರ್ಸಿತಳಿ ಸಂವರ್ಧನಾ ಕೇಂದ್ರವು ವಹಿಸಿಕೊಂಡಿದ್ದು, ಮೇಕೆಗಳಿಗೆ ಆಧುನಿಕ ರೀತಿಯ ಪಂಜರ ಹಾಗೂ ಹುಲ್ಲುಗಾವಲನ್ನು ನಿರ್ಮಿಸಲು ಈಗಾಗಲೇ ಗುರುತಿಸಲಾಗಿರುವ 112 ಎಕರೆ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಯೊಳಗೆ 50 ಜಾತಿಯ ಹೈಬ್ರಿಡ್ ಹುಲ್ಲಿನ ತಳಿಗಳನ್ನು ಬೆಳೆಸುವ ಯೋಜನೆಯಿದೆ. ಅಲ್ಲದೆ ರಾಜ್ಯದಲ್ಲಿನ ಬರಗಾಲಪೀಡಿತ ಪ್ರದೇಶಗಳಿಗೆ ಇಲ್ಲಿನಿಂದ ಬೆಳೆಸಲಾದ ಹುಲ್ಲನ್ನು ಕಳಿಸುವ ಯೋಜನೆಯು ಇದಾಗಿದೆ. ಇದರ ಜೊತೆಯಲ್ಲಿ ಮಲೆನಾಡು ಗಿಡ್ಡ ರಾಸುಗಳು ಮತ್ತು ಸ್ಥಳೀಯ ಹಸು ಗಳನ್ನು ಪ್ರೋತ್ಸಾಹಿಸುವ ಯೋಜ ನೆಯು ಇದಾಗಿದೆ. ಪಶು ಸಂಗೋಪನ ಇಲಾಖೆಯ ರಾಜ್ಯ ಉಪನಿರ್ದೇಶಕರು ಇದರ ಉಸ್ತುವಾರಿಯನ್ನು ವಹಿಸಿರುತ್ತಾರೆ.

ಈವರೆಗೆ ಬಿಡುಗಡೆಯಾಗಿರುವ ರೂ. 67 ಲಕ್ಷ ಹಣದಲ್ಲಿ ಇದೀಗ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಇನ್ನುಳಿದ ರೂ. 8 ಲಕ್ಷ ವೆಚ್ಚದಲ್ಲಿ ಸುತ್ತಲೂ ಸಿಮೆಂಟ್ ಕಂಬದ ಬೇಲಿ, ಮೇಕೆಗಳಿಗೆ ಬೇಕಾಗುವ ಹುಲ್ಲು ಬೆಳೆಸಲು ಸಿದ್ಧತೆಗಳು ನಡೆಯುತ್ತಿವೆ. ಇದರ ಜೊತೆಯಲ್ಲಿ ಈ ಕೇಂದ್ರದಲ್ಲಿ ಈಗಾಗಲೇ 500 ಮೇಕೆ ಸಾಕಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರ ಜೊತೆಯಲ್ಲಿ ಮೇಕೆ ಹಾಲು ಸಂಗ್ರಹದ ಶಿಥಿಲೀಕರಣ ಘಟಕ ಕಾಮಗಾರಿ ನಡೆಯಬೇಕಾಗಿದೆ. ಅಲ್ಲದೆ, ರಾಜ್ಯದಲ್ಲೇ ಪ್ರಪ್ರಥಮವಾಗಿರುವ ರಾಜ್ಯ ಸರ್ಕಾರದ ಈ ಯೋಜನೆಗೆ ರಾಜ್ಯ ಪಶುಪಾಲನ ಇಲಾಖೆಯ ಮುಖ್ಯಕಾರ್ಯದರ್ಶಿಗಳ ಮೂಲಕ ಸಭೆ ನಡೆದು ಸರ್ಕಾರದಿಂದ ಅನುಮತಿ ಪಡೆದು ಮೇಕೆಗಳನ್ನು ರಾಜ್ಯ, ಹೊರರಾಜ್ಯ ಮತ್ತು ಹೊರ ದೇಶಗಳಿಂದ ತರಿಸಿಕೊಂಡು ಅವುಗಳ ಸಾಕಾಣಿಕೆ ಮತ್ತು ಅಭಿವೃದ್ಧಿ ಪಡಿಸುವ ಬಗ್ಗೆ ರಾಜ್ಯ ಮಟ್ಟದಲ್ಲಿ ಸಭೆಗಳು ನಡೆಸಲಾಗಿದೆ ಎಂದೂ ಹೇಳುತ್ತಿರುವ ಅಧಿಕಾರಿಗಳು ಘಟಕ ಆರಂಭಿಸಲು ಮುಂದಾಗಿಲ್ಲ. ಮೇಕೆ ಹಾಲು ಉತ್ಪಾದನೆಯು ರಾಜ್ಯದಲ್ಲಿ ಬೀದರ್, ಮಂಗಳೂರು ಕಡೆಗಳಲ್ಲಿ ಖಾಸಗಿಯವರು ನಡೆಸುತ್ತಿದ್ದು, ಪ್ರಗತಿಯಲ್ಲಿ ಮುನ್ನಡೆದು ಮೇಕೆ ಹಾಲು ಆ ಭಾಗದ ಜನರಿಗೆ ಪ್ರಯೋಜನಾವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಯನ್ನು ರೂಪಿಸಿ ಹೆಚ್ಚು ವಿಸ್ತಾರವನ್ನು ಹೊಂದಿರುವ ಕೊಡಗು ಜಿಲ್ಲೆಯ ಕೂಡಿಗೆಯ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟದಲ್ಲಿ ಘಟಕವನ್ನು ಪ್ರಾರಂಭಿಸಲು ಚಿಂತನೆ ನಡೆಸಿದರಾದರೂ ಮೂರು ವರ್ಷಗಳೇ ಕಳೆದರೂ ಸಹ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಗೊಂಡಿಲ್ಲ. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳೂ ಸಹ ಪ್ರಯತ್ನಿಸದೇ ಈ ಘಟಕದಲ್ಲಿ ಆಗಬೇಕಾಗದ ಕಾಮಗಾರಿಗಳು ಸ್ಥಗಿತಗೊಂಡಿವೆ.

ಇದಕ್ಕೆ ಸಂಬಂಧಪಟ್ಟಂತೆ ಜರ್ಸಿತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕರನ್ನು ಸುದ್ದಿಗಾರರು ಮಾತನಾಡಿಸಿದಾಗ, ಕೇಂದ್ರಕ್ಕೆ ಬೇಕಾಗುವ ಹೆಚ್ಚು ಮೇಕೆಗಳು ಮತ್ತು ಸಾಕಾಣಿಕೆ ಮಾಡಲು ಬರಿಸಹುದಾದ ವೆಚ್ಚ ಹಾಗೂ ಬರುವ ಹಾಲಿನ ಉತ್ಪಾದನೆ ಮತ್ತು ಅದರ ಸದ್ಬಳಕೆಯ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮೇಲಾಧಿಕಾರಿಗಳ ಆದೇಶದನ್ವಯ ಕಾರ್ಯ ಪ್ರವೃತ್ತರಾಗಲು ಸಿದ್ಧರಿದ್ದು, ಇದೀಗ ಜಿಲ್ಲಾಧಿಕಾರಿಗಳ ಆದೇಶದನ್ವಯ ಇ-ಟೆಂಡರ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಇದಕ್ಕೆ ಬೇಕಾಗುವ ಎಲ್ಲಾ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಇಲಾಖೆಯ ಮೂಲಕ ತರಲಾಗಿದ್ದು, ಜಿಲ್ಲಾಧಿಕಾರಿ ಯವರು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜರ್ಸಿ ತಳಿ ಸಂವರ್ಧನಾ ಕೇಂದ್ರದ ಅಧಿಕಾರಿ ತಿಳಿಸಿದರು.

-ಕೆ.ಕೆ.ನಾಗರಾಜಶೆಟ್ಟಿ