ವೀರಾಜಪೇಟೆ, ನ. 28: ಕೇರಳದಿಂದ ಮೈಸೂರಿಗೆ ಎರಡು ಕಾರುಗಳನ್ನು ಬಳಸಿ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ಇಲ್ಲಿನ ಬಿಟ್ಟಂಗಾಲದ ಜಂಕ್ಷನ್ನಿಂದ ಕೇರಳಕ್ಕೆ ಹೋಗುವ ದಾರಿಯಲ್ಲಿ ವೀರಾಜಪೇಟೆಯ ಸಿ.ಐ.ಡಿ ಅರಣ್ಯ ಸಂಚಾರಿ ಪೊಲೀಸ್ ದಳ ಪತ್ತೆ ಹಚ್ಚಿ ಆಮೆಯನ್ನು ವಶಪಡಿಸಿಕೊಂಡು, ಎರಡು ಕಾರು ಹಾಗೂ ಮೂವರನ್ನು ಬಂಧಿಸಿ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.ಸಿಐಡಿ ಅರಣ್ಯ ಸಂಚಾರಿ ಪೊಲೀಸ್ ಘಟಕಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ನಿನ್ನೆ ದಿನ ರಾತ್ರಿ 7ಗಂಟೆಯ ಸಮಯದಲ್ಲಿ ಬಿಟ್ಟಂಗಾಲದ ಜಂಕ್ಷನ್ನ ಮುಂದೆ ರಸ್ತೆಯಲ್ಲಿರುವ ಭದ್ರಕಾಳಿ ದೇವಸ್ಥಾನದ ಬಳಿ ಕೇರಳದ ಕಡೆಯಿಂದ ಬಂದ (ಕೆ.ಎಲ್. 59-ಎಚ್-8010) ಮಹೇಂದ್ರ ಕ್ಷೈಲೋ ಹಾಗೂ (ಕೆ.ಎಲ್.30-ಎಫ್ 3113) ಪೊಲೋ ಕಾರನ್ನು ತಪಾಸಣೆ ಮಾಡಿದಾಗ ಪೊಲೋ ಕಾರಿನಲ್ಲಿ ನಕ್ಷತ್ರ ಆಮೆ ಕಂಡುಬಂದಿದ್ದು ಇದನ್ನು ಅಕ್ರಮವಾಗಿ ಮೈಸೂರಿಗೆ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಪೊಲೋ ಕಾರಿಗೆ ಎಸ್ಕಾರ್ಟ್ ಆಗಿ ಕ್ಷೈಲೋ ಕಾರು ಕಾರ್ಯ ನಿರ್ವಹಿಸುತ್ತಿತ್ತು. ಅರಣ್ಯ ದಳದ ಪೊಲೀಸರು ವಾಹನದಲ್ಲಿದ್ದ ಕೇರಳದ ಅಳುಪೊಯಾದ ಕೆ.ಪಿ.ಪ್ರಿನ್ಸ್(23) ಮಾನಂದವಾಡಿಯ ತೊಂಡರ್ನಾಡಿನ ನೆಡುಂದಾನತ್ ನಿಪಿನ್, (31) ಕಾಸರಗೋಡಿನ ಪೆರುದಡಿ ಗ್ರಾಮದ ಕೆ. ಶರತ್ ಕುಮಾರ್(32) ಇವರುಗಳನ್ನು ಬಂಧಿಸಿದ್ದಾರೆ. ವಾಹನಗಳ ತಪಾಸಣೆ ಸಮಯದಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯ ಚರ್ನಲೂರು ಗ್ರಾಮದ ನಿವಾಸಿ ಹಾಗೂ ಪೊಲೋ ಕಾರಿನ ಚಾಲಕ ಎಸ್. ವಿವೇಕ್ (35) ಓಡಿ ತಲೆಮರೆಸಿ ಕೊಂಡಿದ್ದಾನೆ.
(ಮೊದಲ ಪುಟದಿಂದ) ಆರೋಪಿ ಕೆ.ಪಿ. ಪ್ರಿನ್ಸ್ ಈ ಅಮೂಲ್ಯವಾದ ಹಾಗೂ ಅಪರೂಪದ ನಕ್ಷತ್ರ ಆಮೆಯನ್ನು ಕೇರಳದ ಎರ್ನಾಕುಲಂನಲ್ಲಿ ಖರೀದಿಸಿ ಅಂತರರಾಜ್ಯ ಮೈಸೂರಿನಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದಾಗ ಸಿ.ಐ.ಡಿ. ಅರಣ್ಯ ಸಂಚಾರಿ ಪೊಲೀಸ್ ದಳಕ್ಕೆ ಸಿಕ್ಕಿ ಬಿದ್ದಿದ್ದಾನೆ. ಇಲಾಖೆಯ ಪ್ರಕಾರ ಈ ನಕ್ಷತ್ರ ಆಮೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ. 55 ರಿಂದ 65 ಲಕ್ಷ ಮೌಲ್ಯವಿದೆ. ಮೈಸೂರು, ಬೆಂಗಳೂರಿನಲ್ಲಿ ಇದೇ ನಕ್ಷತ್ರ ಆಮೆಗೆ ರೂ. 25 ರಿಂದ 35 ಲಕ್ಷದವರೆಗೆ ಮಾರುಕಟ್ಟೆ ಬೆಲೆ ಇದೆ. ಶ್ರೀಮಂತ ವರ್ಗದವರು ಈ ನಕ್ಷತ್ರ ಆಮೆಯನ್ನು ಬೇಡಿಕೆ ಮೇರೆ ದುಬಾರಿ ಬೆಲೆಗೆ ಖರೀದಿಸುತ್ತಾರೆ ಎಂಬುದು ಇಲಾಖೆ ತನಿಖೆಯಿಂದ ತಿಳಿದು ಬಂದಿದೆ.
ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್.ಪಿ. ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಅರಣ್ಯ ಸಂಚಾರಿ ದಳದ ಪೊಲೀಸರುಗಳಾದ ಕೆ.ವಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಎಂ.ಬಿ. ಗಣೇಶ್, ಪಿ.ಬಿ. ಮೊಣ್ಣಪ್ಪ, ಸಿ.ಎಂ. ರೇವಪ್ಪ, ಪಾಲ್ಗೊಂಡಿದ್ದರು.
-ಡಿ.ಎಂ.ಆರ್. / ಕೆ.ಕೆ.ಎಸ್.