ಸೋಮವಾರಪೇಟೆ,ನ.18: ಭಾರೀ ಪೈಪೋಟಿ ನಡೆಯುತ್ತಿದ್ದ ಸೋಮವಾರಪೇಟೆ ತಾಲೂಕು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಅಚ್ಚರಿಯ ನೇಮಕ ನಡೆದಿದ್ದು, ಈವರೆಗೆ ತಾಲೂಕು ಪ್ರಧಾನ ಕಾರ್ಯದರ್ಶಿ ಯಾಗಿದ್ದ ಮನುಕುಮಾರ್ ರೈ ಅವರನ್ನು ಅಂತಿಮಗೊಳಿಸಲಾಗಿದೆ.

ಇಲ್ಲಿನ ಕೊಡವ ಸಮಾಜದಲ್ಲಿ ರಾಜ್ಯಮಟ್ಟದ ನಾಯಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚೌಡ್ಲು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಸೋಮವಾರಪೇಟೆ ವರ್ತಕರ ಸಂಘದ ಅಧ್ಯಕ್ಷರೂ ಆಗಿರುವ ಮನುಕುಮಾರ್ ರೈ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ತಾ. 4ರಂದು ಜಾನಕಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಸಭೆಯಲ್ಲಿ 13 ಮಂದಿ ಆಕಾಂಕ್ಷಿಗಳು ಹೆಸರು ನೀಡಿದ್ದು, ನಂತರದ ದಿನಗಳಲ್ಲಿ ಇದರ ಸಂಖ್ಯೆ 18ಕ್ಕೆ ಏರಿತ್ತು.

ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ತಮ್ಮ ನಾಯಕರನ್ನು ಮುಂದಿಟ್ಟುಕೊಂಡು ಇತರ ನಾಯಕರ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ಇಂದು ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಚುನಾವಣಾ ಅಧಿಕಾರಿ ಗಣೇಶ್ ಕಾರ್ಣಿಕ್ ಮತ್ತು ಪ್ರಭಾರಿ ಉದಯ್‍ಕುಮಾರ್ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಏರ್ಲೆ ಅವರುಗಳ ಉಪಸ್ಥಿತಿಯಲ್ಲಿ ಅಧ್ಯಕ್ಷರ ಆಯ್ಕೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಬಾಬು ರಾಜೇಂದ್ರ ಪ್ರಸಾದ್, ಹರಗ ಉದಯ, ಹರಗ ಧರ್ಮಪ್ಪ, ಡಿ.ಬಿ. ಧರ್ಮಪ್ಪ, ಕೆ.ಜಿ. ಸುರೇಶ್, ಎಸ್.ಎನ್. ರಘು, ಬಿ.ಜೆ. ದೀಪಕ್, ಹುಲ್ಲೂರಿಕೊಪ್ಪ ಮಾದಪ್ಪ, ತಾಕೇರಿ ಪೊನ್ನಪ್ಪ, ಮೋಹನ್‍ದಾಸ್, ಎ.ಎಸ್. ಮಲ್ಲೇಶ್, ಕೆ.ಜಿ. ಮನು, ಕೃಷ್ಣಪ್ಪ, ಜಿ.ಎಲ್. ನಾಗರಾಜು, ಕೆ.ಕೆ. ಸುಧಾಕರ್, ಪ್ರಸಾದ್ ಪಟೇಲ್, ಗಣಿಪ್ರಸಾದ್, ಮನುಕುಮಾರ್ ರೈ ಅವರುಗಳು ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಹರಗ ಉದಯ್, ಹೆಚ್.ಕೆ. ಮಾದಪ್ಪ, ಮನುಕುಮಾರ್ ರೈ ಹೆಸರುಗಳನ್ನು ರಾಜ್ಯಕ್ಕೆ ಕಳುಹಿಸಲಾಗಿತ್ತು. ಇಂದು ನಡೆದ ಸಭೆಯಲ್ಲಿ ಚರ್ಚೆಗಳು ನಡೆದು, 50 ವರ್ಷದೊಳಗಿನವರು, ಸಕ್ರಿಯ ಕಾರ್ಯಕರ್ತರು, ಕನಿಷ್ಟ 25 ಮಂದಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಸದಸ್ಯತ್ವ ನೀಡಿದವರು ಸೇರಿದಂತೆ ಇತರ ಮಾನದಂಡಗಳ ಆಧಾರದ ಮೇಲೆ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. ಸಭೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಜಿಲ್ಲಾಧ್ಯಕ್ಷ ಭಾರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಚುನಾವಣಾಧಿಕಾರಿ ರವಿ ಕಾಳಪ್ಪ, ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ತಾಲೂಕು ಅಧ್ಯಕ್ಷ ಕೊಮಾರಪ್ಪ, ಕೋರ್‍ಕಮಿಟಿ ಸದಸ್ಯ ದೇವಯ್ಯ, ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ, ಜಿಲ್ಲಾ ಪ್ರಮುಖ್ ವರದ ಸೇರಿದಂತೆ ಇತರರು ಉಪಸ್ಥಿತರಿದ್ದರು.