ಮಡಿಕೇರಿ, ನ. 10: ಜಿಲ್ಲಾ ಬಾಲಭವನ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ‘’ಕಲಾಶ್ರೀ’’ ಆಯ್ಕೆ ಶಿಬಿರ ಮಂಗಳವಾರ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ರಾಧ ಮಾತನಾಡಿ, ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಬಾಲಭವನ ಸೊಸೈಟಿಯು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಮಕ್ಕಳು ಹೆಚ್ಚಿನ ದೈಹಿಕ ಶ್ರಮವಿಲ್ಲದೆ ಸಮಯವನ್ನು ಟಿ.ವಿ, ಮೊಬೈಲ್ ಹಾಗೂ ಕಂಪ್ಯೂಟರ್ ಗಳನ್ನು ಉಪಯೋಗಿಸುತ್ತ ವ್ಯರ್ಥ ಮಾಡುತ್ತಿದ್ದಾರೆ. ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಅಂಕವನ್ನು ತೆಗೆಯಲು ಒತ್ತಡವನ್ನು ಹೇರುವದರಿಂದ ಖಿನ್ನತೆಗೆ ಒಳಗಾಗುತ್ತಾರೆ. ಅಂಕಗಳನ್ನು ಮಾತ್ರ ಪರಿಗಣಿಸದೆ ಅವರ ಪ್ರತಿಭೆಯನ್ನು ಪೋಷಿಸಿ ಬೆಳೆಸಬೇಕು. ಬಾಲಕಾರ್ಮಿಕ ಮಕ್ಕಳು, ಅನಾಥ ಮಕ್ಕಳು, ಏಕ ಪೋಷಕ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಶೋಷಣೆಗೆ ಒಳಗಾದಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.

ಸೃಜನಾತ್ಮಕ ಕಲೆ: ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ಸÀೃಜನಾತ್ಮಕ ಬರವಣಿಗೆ, ಕಥೆ- ಕೊಡಗಿನಲ್ಲಾದ ಪ್ರಕೃತಿ ವಿಕೋಪ ನಂತರದ ಚಿತ್ರಣ ಅಥವಾ ಕೊಡಗಿನಲ್ಲಾದ ಪ್ರಕೃತಿ ವಿಕೋಪದ ಚಿತ್ರಣ, ಕವನ, ಕೊಡಗಿನ ವೀರ ಯೋಧ, ಪ್ರಬಂಧ - ಸೃಜನಾತ್ಮಕ ಕಲೆ ಬೆಳೆಸುವದರಲ್ಲಿ ವಿದ್ಯಾರ್ಥಿಗಳ ಪಾತ್ರ, ಸೃಜನತ್ಮಾಕ ಪ್ರದರ್ಶನ ಕಲೆ, ಶಾಸ್ತ್ರಿಯ ನೃತ್ಯ, ಜಾನಪದ ನೃತ್ಯ, ಶಾಸ್ತ್ರಿಯ ಗಾಯನ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷ ಪ್ರದರ್ಶನ, ಸುಗಮ ಸಂಗೀತ, ಯೋಗ, ನೃತ್ಯ, ಏಕ ಪಾತ್ರಾಭಿನಯ, ವಿಜ್ಞಾನದಲ್ಲಿ ನೂತನ ಆವಿಷ್ಕಾರಗಳನ್ನು ಕಾರ್ಯಕ್ರಮ ಒಳಗೊಂಡಿತ್ತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮಂಜುಳ ಮತ್ತು ಕೋಮಲ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಜಿಲ್ಲಾ ಸಂಯೋಜಕಿ ಪ್ರಭಾವತಿ, ತೀರ್ಪುಗಾರರಾದ ಪ್ರಸನ್ನ, ಭರತ್ ಕೋಡಿ, ದಿಲೀಪ್ ಕುಮಾರ್, ಭಾರತಿ ರಮೇಶ್, ಗೌರಮ್ಮ ಮತ್ತು ಇತರರು ಪಾಲ್ಗೊಂಡಿದ್ದರು.

ಜಿಲ್ಲಾಮಟ್ಟದ ಕಲಾಶ್ರೀ ಆಯ್ಕೆ ಶಿಬಿರ 2019ರಲ್ಲಿ ಭಾಗವಹಿಸಿ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಶಿಬಿರಕ್ಕೆ ಆಯ್ಕೆಯಾದ ಮಕ್ಕಳ ವಿವರ ಇಂತಿದೆ. ಸೃಜನಾತ್ಮಕ ಕಲೆಯಲ್ಲಿ ಮಡಿಕೇರಿ ಸಂತ ಜೋಸೆಫರ ಶಾಲೆಯ ಮಿಥಿಲ ಟಿ.ಎಂ., ಹಾಗೂ ಕೊಡಗು ವಿದ್ಯಾಲಯ, ಭಾರತೀಯ ವಿದ್ಯಾಭವನದ ಲಕ್ಷ್ಯ ಪಿ. ಎನ್.

ಸೃಜನಾತ್ಮಕ ಬರವಣಿಗೆಯಲ್ಲಿ ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ಅನನ್ಯ ಎಂ.ಹೆಚ್. ಹಾಗೂ ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ದರ್ಶನ್ ಬಿ.ಎಂ. ವಿಜ್ಞಾನದಲ್ಲಿ ನೂತನ ಆವಿಷ್ಕಾರ: ಜನರಲ್ ತಿಮ್ಮಯ್ಯ ಶಾಲೆಯ ಶ್ರೀದೇವಿ, ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ಲಿಖಿತ್. ಸೃಜನಾತ್ಮಕ ಕಲೆ ಮತ್ತು ಪ್ರದರ್ಶನ: ಗೋಣಿಕೊಪ್ಪ, ಕೂರ್ಗ್ ಪಬ್ಲಿಕ್ ಶಾಲೆಯ ಆಯುಷ್ ಎಂ.ಡಿ., ಮಡಿಕೇರಿ ಸಂತ ಜೋಸೆಫರ್ ಶಾಲೆಯ ಮೇನಿತಾ ನಾಗೇಶ್ ಅವರು ಆಯ್ಕೆಯಾಗಿದ್ದಾರೆ.