ಮಡಿಕೇರಿ, ನ. 6 : ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೊದಲ 2 ಜೀವಂತ ಹೆರಿಗೆಯ ಪೂರ್ವದ ಕೊನೆಯ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆಯ ನಂತರದ ಮೂರು ತಿಂಗಳ ಕಾಲ ಮಾಸಿಕ ರೂ. ಒಂದು ಸಾವಿರಗಳನ್ನು ಒಟ್ಟು ರೂ 6 ಸಾವಿರಗಳನ್ನು ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಫಲಾನುಭವಿಯು ಬಿ.ಪಿ.ಎಲ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿದ್ದು ಫಲಾನುಭವಿಯು ಮೊದಲನೇ ಅರ್ಜಿ ಸಲ್ಲಿಸುವಾಗ 7 ತಿಂಗಳ ಗರ್ಭಿಣಿ ಯಾಗಿದ್ದು, ಕನಿಷ್ಟ 1 ನಿಯಮಿತ ಆರೋಗ್ಯ ತಪಾಸಣೆಗೆ ಒಳಪಟ್ಟಿರಬೇಕಾಗುತ್ತದೆ. ಎರಡನೇ ಅರ್ಜಿಯನ್ನು ಸಾಂಸ್ಥಿಕ ಹೆರಿಗೆಯ ನಂತರ ನೀಡಬೇಕಾಗುತ್ತದೆ. ಮಾತೃಶ್ರೀ ಯೋಜನೆಯ ನೋಂದಾವಣೆಗೆ ನಿಗಧಿಪಡಿಸಿದ ಅರ್ಜಿ ನಮೂನೆಗಳು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಬಿ.ಪಿ.ಎಲ್ ಕಾರ್ಡ್, ತಾಯಿ ಮತ್ತು ಮಗುವಿನ ಸುರಕ್ಷತಾ ಕಾರ್ಡ್, ಫಲಾನುಭವಿಯ ಹಾಗೂ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.