1857 ಭಾರತೀಯ ಇತಿಹಾಸ ದಲ್ಲಿ ಅತ್ಯಂತ ಮಹತ್ವದ ವರ್ಷ.

ಆಂಗ್ಲರ ಸತ್ತೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು ಸ್ವದೇಶವನ್ನು ರಕ್ಷಿಸಲು ಮಹಾ ಸ್ವಾತಂತ್ರ್ಯ ಸಂಗ್ರಾಮವೊಂದು ನಡೆದ ವರ್ಷ. ಇದನ್ನು ಆಂಗ್ಲರು `ದಂಗೆ' ಎಂದರೂ ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ನಾವು ಅರಿತಿದ್ದೇವೆ. ಮಂಗಲ್ ಪಾಂಡೆ, ತಾಂತ್ಯ ಮೊದಲಾದ ವೀರರ ಬಲಿದಾನಗಳ ಬಗ್ಗೆ ಓದಿದ್ದೇವೆ. ಅಷ್ಟಕ್ಕೂ ಒಂದು ಸಂಘಟಿತ ರೂಪವೆಂಬ ದೃಷ್ಟಿಯಲ್ಲಿ `ಸಿಪಾಯಿ ದಂಗೆ'ಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಅನ್ನುವದಕ್ಕೂ ಮೊದಲು ವ್ಯವಸ್ಥಿತವಾದ ಹೋರಾಟ ನಡೆದಿರಲಿಲ್ಲವೇ?

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1837 ರಲ್ಲೇ ನಡೆದಿತ್ತು.! ಹೌದು.., 1857 ರ ಸಿಪಾಯಿ ದಂಗೆಯ ಇಪ್ಪತ್ತು ವರ್ಷ ಮೊದಲೇ ರಾಷ್ಟ್ರೀಯತೆಯ ಅರಿವು ಇದ್ದೋ.., ಇಲ್ಲದೆಯೋ ಆಂಗ್ಲರಿಗೆ ತಮ್ಮ ಸ್ವಾತಂತ್ರ್ಯದ ಹಸಿವಿನ ಬಿಸಿಯನ್ನು ಮುಟ್ಟಿಸಿದವರು ಕೊಡಗು- ಸುಳ್ಯದ ರೈತಾಪಿ ಜನರು. ಇದು ಭಾರತದ ಇತಿಹಾಸದಲ್ಲಿ ದಾಖಲಾಗದ ಮೊದಲ ಸ್ವಾತಂತ್ರ್ಯ ಸಂಗ್ರಾಮ, ಆಂಗ್ಲರು ಹೀಗಳೆದ ದರೋಡೆ, `ಕಲ್ಯಾಣಪ್ಪನ ಕಾಟಕಾಯಿ'.!!! ಇದು ಅಮರ ಸುಳ್ಯ ದಂಗೆ.!!!

ಟಿಪ್ಪು ಸುಲ್ತಾನ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ ಇತರ ಹಲವರು ಬ್ರಿಟಿಷರ ವಿರುದ್ಧ ಅವರ ರಾಜ್ಯಕ್ಕಾಗಿ, ತಮ್ಮ ಆಳ್ವಿಕೆಯನ್ನು ಉಳಿಸಲಿಕ್ಕಾಗಿ ಹೋರಾಡಿದರು.

ಬಿದರೂರಿನ ಧೋಂಡಿಯ ವಾಘ, ಐಗೂರಿನ ವೆಂಕಟಾದ್ರಿ ನಾಯಕ (1802),ಕಿತ್ತೂರಿನ ಚೆನ್ನಮ್ಮಾಜಿ (1824),ಸಂಗೊಳ್ಳಿ ರಾಯಣ್ಣ, ಕೊಡಗಿನ ಅಪರಂಪಾರ (1835) ಕಲ್ಯಾಣಸ್ವಾಮಿ(1837), ಗುಡ್ಡೆಮನೆ ಅಪ್ಪಯ್ಯ, ಕೆದಂಬಾಡಿ ರಾಮಗೌಡ, ಕುಡಿಯ ಸಹೋದರರು.., ಹೀಗೆ ಅಖಿಲ ಭಾರತ ಮಟ್ಟದ ಇತಿಹಾಸದ ಪುಟಗಳಲ್ಲಿ ದಾಖಲಾಗದ ಅನೇಕ ವೀರರು 1857ಕ್ಕೂ ಹಿಂದೆಯೇ ರಕ್ತ ತರ್ಪಣಗೈದಿದ್ದರು. ಆದರೆ ಅವರ ಬಗ್ಗೆ ಅವರದೇ ನೆಲದ ನಮಗೆ ಅರಿವಿಲ್ಲದೇ ಇರುವದು ದುರಂತ ಸತ್ಯ!

ವಿಶಾಲ ಕೊಡಗಿನ ಜನ ಸಾಮಾನ್ಯರು, ರೈತರು ರಾಷ್ಟ್ರೀಯ ಪರಿಕಲ್ಪನೆ ಇಲ್ಲದಿದ್ದರೂ, ಬ್ರಿಟಿಷರ ವಿರುದ್ಧ ದಂಗೆಯೆದ್ದು ಹೋರಾಡಿದ ಕಾರಣವೇನೆಂದರೆ: ತಮ್ಮ ವಿಶಾಲ ಕೊಡಗಿನ ರಾಜ್ಯವನ್ನು ಬ್ರಿಟಿಷರು ವಿಭಜಿಸಿ ಕಾಸರಗೋಡು, ಪುತ್ತೂರು ಮತ್ತು ಸುಳ್ಯ ಮಾಗಣೆಗಳನ್ನು ಮದ್ರಾಸು ಪ್ರಾಂತ್ಯಕ್ಕೆ ಸೇರಿಸಿದರಿಂದ ಮೇಲಿನ ಕೊಡಗಿನೊಂದಿಗೆ ತಮಗಿದ್ದ ಸಾಂಸ್ಕೃತಿಕ ಮತ್ತು ರಕ್ತಸಂಬಂಧ ಕಡಿತಗೊಂಡ ಪ್ರಯುಕ್ತವೂ, ತಂಬಾಕು, ಉಪ್ಪು ಇತ್ಯಾದಿ ದಿನಬಳಕೆ ವಸ್ತುಗಳ ಮೇಲೆ ಕರ (ಣಚಿx)ವಿಧಿಸಿದ ಬಗ್ಗೆ ಅಸಮಾಧಾನ ದಿಂದಲೂ, ಮೊದಲು ರಾಜರ ಕಾಲದಲ್ಲಿ ತಾವು ಬೆಳೆಸಿದ ಅಕ್ಕಿ ಇತ್ಯಾದಿ ಬೆಳೆಗಳನ್ನು ವಸ್ತು ರೂಪದಲ್ಲಿ ನೀಡುತ್ತಿದ್ದ ಕಂದಾಯ ಪದ್ಧತಿಯ ಬದಲು ಬ್ರಿಟಿಷರು ಹಣದ ರೂಪದಲ್ಲಿ ಹೆಚ್ಚಿನ ಪಸೆರ್Àಂಟ್‍ನ ಕಂದಾಯ ಹೇರಿದ ಬಗ್ಗೆ, ಮಧ್ಯವರ್ತಿಗಳು ಹುಟ್ಟಿ ಜನಸಾಮಾನ್ಯರ ಬದುಕು ದುಸ್ತರವಾಗಿತ್ತು.

1834ರ ವರೆಗೆ ಅಮರಸುಳ್ಯ ಕೊಡಗಿನ ಹಾಲೇರಿಯ ಲಿಂಗಾಯಿತ ಅರಸರ ಸುಪರ್ದಿಯಲ್ಲಿತ್ತು. ಕೊನೆಯ ಅರಸ ಚಿಕ್ಕವೀರರಾಜೇಂದ್ರನ ಆಡಳಿತ ಹದಗೆಟ್ಟಾಗ ಆಂಗ್ಲರು 1834ರ ಏಪ್ರಿಲ್ ತಿಂಗಳಲ್ಲಿ ಮೈಸೂರಿನ ಕರ್ನಲ್ ಫ್ರೇಸರ್ ನ ನೇತೃತ್ವದಲ್ಲಿ ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾರೆ. ಏಪ್ರಿಲ್ 6ಕ್ಕೆ ಕೋಟೆ ಪ್ರೇಸರನ ವಶವಾಗುತ್ತದೆ. ಅರಸ ನಾಲ್ಕುನಾಡಿನ ಅರಮನೆಗೆ ಹೆದರಿ ಪಲಾಯನ ಮಾಡುತ್ತಾನೆ. ದಿವಾನ್ ಲಕ್ಷ್ಮೀನಾರಾಯಣ, ಬೋಪು ಶರಣಾಗತರಾಗುವ ಸಲಹೆ ನೀಡುತ್ತಾರೆ.ಎ.10ಕ್ಕೆ ಮಡಿಕೇರಿಯಲ್ಲಿ ಶರಣಾದ ದೊರೆಯನ್ನು ಪ್ರೇಸರ್ ಏ.24ಕ್ಕೆ ಬೆಂಗಳೂರಿಗೆ ಕಳುಹಿಸಿದ. ಮುಂದೆ ಮಗಳ ಸಹಿತ ವಾರಣಾಸಿ ಅಲ್ಲಿಂದ ಲಂಡನ್‍ಗೆ ಕಳಿಸಲಾಗುತ್ತದೆ. 1859 ಸೆ.24ರಂದು ಖಾಯಿಲೆ ಯಿಂದಾಗಿ ಲಂಡನ್‍ನಲ್ಲೇ ಮರಣ ಹೊಂದುತ್ತಾನೆ.

1833ರಲ್ಲಿ ಮಂಜರಾಬಾದ್ ಬಾಗಗಳಲ್ಲಿ ಸ್ವಾಮಿ ಅಪರಂಪಾರ ಓರ್ವ ಜಂಗಮ ಕಾಣಿಸಿಕೊಳ್ಳುತ್ತಾನೆ. ಕೊಡಗಿನ ಜನ ಇವನನ್ನು ಹಿಂದಿನ ಅರಸ ಲಿಂಗರಾಜೇಂದ್ರನ ಅಣ್ಣ ಅಪ್ಪಾಜಿಯ ಹಿರಿಮಗ ವೀರಪ್ಪನೆಂದು ಭಾವಿಸುತ್ತಾರೆ. ಆದರೆ ಇವನು ತುಮಕೂರಿನ ಮಾಯಸಂದ್ರದ ಕಡಗನೂರಿನವ ಎನ್ನಲಾಗಿದೆ. ನಿರಂಜನರ ಕಾದಂಬರಿ `ಸ್ವಾಮಿ ಅಪರಂಪಾರ' ಇವನ ಬಗ್ಗೆಯೇ.

ಆಂಗ್ಲರು ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತುರೂಪದಲ್ಲಿ ಕಂದಾಯವನ್ನು ಪಾವತಿಸುತ್ತಿದ್ದ ಕೊಡಗು ಜನರಿಗೆ ಅಸಮಾದಾನ ಉಂಟಾಗುತ್ತದೆ. ರಾಜ ಪರದೇಶಿಯಾದ ಮೇಲೆ ಸೂಕ್ತ ನಾಯಕತ್ವ ಇಲ್ಲದ್ದರಿಂದ ಅಪರಂಪಾರನನ್ನೇ ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ.ಇವನು ಸೋಮವಾರಪೇಟೆ, ಹಾರಂಗಿ, ಹಾಲೇರಿ, ಹೊಸಕೋಟೆ ಮೊದಲಾದೆಡೆ ಆಂಗ್ಲರ ವಿರುದ್ಧ ಜನ ಸಂಘಟನೆ ನಡೆಸಿ ಸುಬ್ರಹ್ಮಣ್ಯಕ್ಕೆ ಬರುತ್ತಾನೆ.ಇವನನ್ನು ರಾಜವಂಶಸ್ಥನೆಂದು ಕೂಜುಗೋಡಿನ ಅಪ್ಪಯ್ಯ ಗೌಡ ಹಾಗೂ ಮಲ್ಲಪ್ಪ ಗೌಡರು ಸತ್ಕರಿಸಿ ಕೊಡಗಿನಿಂದ ಬ್ರಿಟಿಷರನ್ನು ಓಡಿಸುವ ಯೋಜನೆ ಹಾಕಿಕೊಳ್ಳುತ್ತಾರೆ.ಸುಮಾರು ಸಾವಿರ ಮಂದಿ ಸೇನೆಯೊಡನೆ ಮಡಿಕೇರಿ ಕಡೆಗೆ ನಡೆಯುತ್ತದೆ. ಆದರೆ ಅಪರಂಪಾರ ಗೌಡಳ್ಳಿ ತಲಪುವ ಮುನ್ನವೇ ಮೋಸದಿಂದ ಸೆರೆಯಾಗುತ್ತಾನೆ. ಕೂಜುಗೋಡು ಸಹೋದರರು ಪಾರಾಗುತ್ತಾರೆ. ಅಪರಂಪಾರನನ್ನು ತಿರುಚಿನಾಪಳ್ಳಿಯ ಜೈಲಿಗೆ ಕಳುಹಿಸಲಾಯಿತು. 1869ರಲ್ಲಿ ಬಿಡುಗಡೆಯಾಗಿ 1870ರಲ್ಲಿ ಶ್ರೀರಂಗಪಟ್ಟಣದಲ್ಲಿ ನಿಧನ ಹೊಂದಿದ.

ಅಪರಂಪಾರನ ಆಪ್ತರಲ್ಲಿ ಓರ್ವನಾದ ಕಲ್ಯಾಣ ಬಸವ (ಪುಟ್ಟ ಬಸಪ್ಪ) -ಕಲ್ಯಾಣಪ್ಪ ತನ್ನನ್ನು ಅಪ್ಪಾಜಿಯ ದ್ವಿತೀಯ ಪುತ್ರನೆಂದು ಕರೆಸಿಕೊಂಡು ಕಲ್ಯಾಣಸ್ವಾಮಿ ಎಂದು ಕರೆಸಿಕೊಂಡು ಹಾಲೇರಿಯ ಗದ್ದುಗೆ ಏರಲು ಜನ ಬೆಂಬಲ ಪಡೆಯುತ್ತಾನೆ. ಆದರೆ ಕೆಲವರು ಮಡಿಕೇರಿಯಲ್ಲಿ ಆಂಗ್ಲ ಅಧಿಕಾರಿ ಕ್ಯಾಪ್ಟನ್ ಲೀಹಾರ್ಡಿಯ ಮುಂದೆ ಕಲ್ಯಾಣಪ್ಪನನ್ನು ಹಾಲೇರಿ ರಾಜವಂಶಸ್ಥನಲ್ಲ ಎಂದು ಸಾಬೀತುಪಡಿಸಿದರು. ಆದರೂ ಜನ ಬೆಂಬಲ ಕಲ್ಯಾಣಪ್ಪನಿಗೆ ಕಡಿಮೆಯಾಗಲಿಲ್ಲ. ಏಳುಸಾವಿರ ಸೀಮೆಯ ಹುಲಿ ಕಡಿದ ನಂಜಯ್ಯ,ಗುಡ್ಡೆಮನೆ ಅಪ್ಪಯ್ಯ ಗೌಡ ಇವನಿಗೆ ಬೆಂಗಾವಲಿಗೆ ನಿಂತರು. ಸುಳ್ಯ ಕೆದಂಬಾಡಿ ರಾಮ ಗೌಡ, ಕೂಜುಗೋಡು ಸಹೋದರರು,ಪೆರಾಜೆ ಊಕಣ್ಣ ಬಂಟ,ಕುಂಬ್ಳೆಯ ಅರಸ ಸುಬ್ರಾಯ ಹೆಗ್ಡೆ, ಧರ್ಮಸ್ಥಳದ ಹೆಗ್ಡೆ ಮೊದಲಾದವರು ಬೆಂಬಲ ಸೂಚಿಸಿದರು.

ತನ್ನ ಕಾರ್ಯವನ್ನು ಕಲ್ಯಾಣಸ್ವಾಮಿ ದಕ್ಷಿಣ ಕನ್ನಡಕ್ಕೆ ವಿಸ್ತರಿಸಲು ತೀರ್ಮಾನಿಸಿದರೂ ಅವನನ್ನು ಸೆರೆ ಹಿಡಿಯುವ ಆಂಗ್ಲರ ಯೋಜನೆಯನ್ನು ಅರಿತು ಕೊಡ್ಲಿಪೇಟೆಯ ಮೂಲಕ ವೈನಾಡಿನ ಕಡೆ ಪ್ರಯಾಣ ಬೆಳೆಸುತ್ತಾನೆ. ಆದರೆ ಲೀಹಾರ್ಡಿ ಮಲಬಾರಿನ ಸೈನಿಕರ ನೆರವಿನಿಂದ ಇವನನ್ನು 1837ರಲ್ಲಿ ಸೆರೆ ಹಿಡಿದು ಮೈಸೂರಿನ ಸೆರೆಮನೆಗೆ ತಳ್ಳುತ್ತಾನೆ.ಕ್ರಾಂತಿಯ ಕಿಡಿಯೊಂದು ಆರುತ್ತದೆ..!

ಬಂಧÀನದ ವಿಚಾರ ಹುಲಿಕಡಿದ ನಂಜಯ್ಯನಿಗೆ ಮಾತ್ರ ಗೊತ್ತಿತ್ತು. ಸಂಘಟನೆ ಉಳಿಸಿಕೊಳ್ಳುವದಕ್ಕಾಗಿ ಇದನ್ನು ಗುಪ್ತವಾಗಿಡಲಾಗುತ್ತದೆ. ಕೆದಂಬಾಡಿ ರಾಮಗೌಡನೊಂದಿಗೆ ಚರ್ಚಿಸಿ ಅಪರಂಪಾರನ ಸಹಾಯಕ ಹಾಗೂ ಕಲ್ಯಾಣ ಸ್ವಾಮಿಯ ಆಪ್ತ ಪುಟ್ಟ ಬಸವನನ್ನು ಕಲ್ಯಾಣಪ್ಪನೆಂದು ಬಿಂಬಿಸಲಾಯ್ತು. ಇವನಿಗೆ ಕೊಡಗಿನ ಪಟ್ಟವನ್ನು ಕಟ್ಟಲು ಜನರು ಹಂಬಲಿಸಿದ್ದರು. ಜನರು ಬಸವನನ್ನೇ ಕಲ್ಯಾಣಪ್ಪ ಎಂದು ನಂಬಿದ್ದರು!

ಅಮರಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ ನಗದು ರೂಪದ ಕಂದಾಯವನ್ನು ಹೇರಿದ್ದರಿಂದ ಸುಳ್ಯ ಮಾಗಣೆಯವರಿಗೆ ಆಂಗ್ಲರ ಮೇಲೆ ಅಸಾಧ್ಯ ಕೋಪವಿತ್ತು. ಇದರಿಂದ ನಂಜಯ್ಯ ಹಾಗೂ ಕೆದಂಬಾಡಿ ರಾಮ ಗೌಡ 1837 ಏ.6 ರಂದು ಇಲ್ಲಿಂದಲೇ ದಂಗೆ ಆರಂಭಿಸಲು ತೀರ್ಮಾನಿಸುತ್ತಾರೆ. ಆದರೆ ಕೊಡಗಿನ ದಿವಾನ ಲಕ್ಷ್ಮೀನಾರಾಯಣನ ಸೋದರ ಅಟ್ಲೂರು ರಾಮಪ್ಪಯ್ಯನ ಕುತಂತ್ರ ಅರಿತು ಮುಂಚೆಯೇ ದಂಗೆ ಆರಂಭಿಸಲಾಯ್ತು. ಇವನು ಅಮರಸುಳ್ಯದ ಅಮಲ್ದಾರನಾಗಿದ್ದು ಆಂಗ್ಲರ ಪರವಾಗಿ ಅನಾಚಾರಗಳನ್ನು ನಡೆಸುತ್ತಿದ್ದ. ಒಂದು ಬಾರಿ ಕೆದಂಬಾಡಿ ರಾಮಗೌಡನನ್ನು ಅವಮಾನಿಸಿದ್ದರಿಂದ ಗೌಡನ ಕಡೆಯವರು ಕಾಂತಮಂಗಲ ದಲ್ಲಿ ಅಡ್ಡಗಟ್ಟಿ ಕತ್ತಿಯಿಂದ ಕಡಿದರು. ಆದರೆ ಅವನ ಕುದುರೆಯ ವೇಗದ ಓಟ ಅವನನ್ನು ಉಳಿಸಿತ್ತು. ಆದರೆ ಮದುವೆಗದ್ದೆಗೆ ಬಂದಾಗ ಅವನನ್ನು ಕೊಚ್ಚಿ ಕೊಲ್ಲುವದರೊಂದಿಗೆ ಕ್ರಾಂತಿಯ ಕಹಳೆ ಊದಲಾಯಿತು.

ಕಲ್ಯಾಣಸ್ವಾಮಿಯೊಂದಿಗೆ ನಂಜಯ್ಯ, ಕೆದಂಬಾಡಿ ರಾಮ ಗೌಡ, ಚೆಟ್ಟಿ- ಕುರ್ತು ಕುಡಿಯರು, ಕರಡಿಮಲೆ ಅಣ್ಣಿಗೌಡ, ಪೆರಾಜೆ ಊಕಣ್ಣ ಬಂಟ, ಕರಣಿಕ ಕೃಷ್ಣಯ್ಯ, ಕರಣಿಕ ಸುಬ್ಬಯ್ಯ, ಕೋಲ್ಚಾರು ಕೂಸಪ್ಪ ಗೌಡ ಮೊದಲಾದವರ ಪಡೆ 1837ರ ಮಾರ್ಚ್ ನಲ್ಲಿ ಬೆಳ್ಳಾರೆಗೆ ಲಗ್ಗೆ ಇಟ್ಟಿತು. ಇಲ್ಲಿಂದ ಕಲ್ಯಾಣಪ್ಪ (ಪುಟ್ಟ ಬಸವ) ಮಾರ್ಚ್ 30ರಂದು ಕೊಡಗಿಗೆ ನಿರೂಪವೊಂದನ್ನು ಕಳುಹಿಸುತ್ತಾನೆ. ಇಲ್ಲೇ ಪ್ರಸಿದ್ಧ ಇಸ್ತಿಹಾರ್ ಪ್ರಕಟಿಸಿದ. ಅಮರ ಸುಳ್ಯ ಪುನಃ ಕೊಡಗಿನ ಸಂಸ್ಥಾನಕ್ಕೆ ಸೇರಿಸುವದು; ಕಂದಾಯ ಮನ್ನಾ; ತಂಬಾಕು, ಉಪ್ಪಿನ ಮೇಲಿನ ತೆರಿಗೆ ರದ್ದು. ಇದರಿಂದ ಪಂಜ, ಪುತ್ತೂರು, ಕಡಬ, ವಿಟ್ಲ ಸುಲಭದಲ್ಲಿ ಕೈವಶವಾದರೆ ವಿಟ್ಲದ ಅರಸು, ನಂದಾವರದ ಲಕ್ಷ್ಮಪ್ಪ ಬಂಗರಸ ಮೊದಲಾದವರು ಕಲ್ಯಾಣಪ್ಪನ ಪಡೆಯನ್ನು ಸೇರಿಕೊಂಡರು. ಧರ್ಮಸ್ಥಳದ ಹೆಗ್ಡೆ ಪಿರಂಗಿಗಳನ್ನು ಕಳುಹಿಸಿದರು. ಪಡೆ ಯಾವದೇ ಸಮಸ್ಯೆ ಇಲ್ಲದೆ ಮಂಗಳೂರು ಸೇರಿ ಬಾವುಟಗುಡ್ಡೆಯನ್ನು, ಖಜಾನೆ, ಜೈಲು, ಶಸ್ತ್ರಗಳನ್ನು ವಶಮಾಡಿಕೊಂಡು ಬ್ರಿಟಿಷ್ ದ್ವಜವನ್ನು ಕಿತ್ತೊಗೆದು ಕ್ರಾಂತಿಯ ಬಾವುಟವನ್ನು ಹಾರಿಸಿದರು. 13 ದಿನಗಳ ಸ್ವತಂತ್ರ ರಾಜ್ಯಭಾರ ಮಾಡಿದರು.ಇದಕ್ಕೆ ಸಂಬಂದಿಸಿದ ಕುರುಹುಗಳನ್ನು ಈಗಲೂ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಕಾಣಬಹುದು.

ಹೆದರಿ ಪಲಾಯನ ಮಾಡುತ್ತಿದ್ದ ಬ್ರಿಟೀಷರ ಕೈಗೆ ದುರ್ದೈವದಿಂದ ಸಿಕ್ಕಿದ ಕುಂಬಳೆ ಸುಬ್ರಾಯ ಹೆಗ್ಗಡೆ ಹಾಗೂ ಪಡೆಯನ್ನು ನೇತ್ರಾವತಿ ನದಿ ದೋಣಿಯಲ್ಲಿ ದಾಟುತ್ತಿರುವಾಗ ನದಿಯಲ್ಲಿ ಪಿರಂಗಿ ಹಾರಿಸಿ ಸಾಯಿಸಲಾಯಿತು.

ಕಣ್ಣಾನೂರಿನಿಂದ ಆಂಗ್ಲರ ಪಿರಂಗಿ ಶಸ್ತ್ರ ಸಜ್ಜಿತ ಪಡೆ ಮಂಗಳೂರಿಗೆ ಮೂರು ಹಡಗುಗಳಲ್ಲಿ ಬಂದು ರಾತ್ರೋರಾತ್ರಿ ಧಾಳಿ ಇಟ್ಟಿತು. ಕೆಲವರು ಸೆರೆ ಸಿಕ್ಕರೆ ಅಪ್ಪಯ್ಯ ಗೌಡ, ಬಂಗರಸ, ರಾಮಗೌಡ, ಕುಕ್ಕನೂರು ಚೆನ್ನಯ್ಯ, ಕಲ್ಯಾಣಪ್ಪ, ಕುಡಿಯರು, ನಾಲ್ಕುನಾಡಿನ ಉತ್ತ ಇತರರು ತಪ್ಪಿಸಿಕೊಂಡರು. ಕಲ್ಯಾಣಪ್ಪನಾಗಿದ್ದ ಪುಟ್ಟ ಬಸವನ ತಲೆಗೆ ಆಗಲೇ ಹತ್ತು ಸಾವಿರ ರೂಪಾಯಿಗಳ ಬೆಲೆ ಕಟ್ಟಲಾಗಿತ್ತು. ಕೊಡ್ಲಿಪೇಟೆಗೆ ಬಂದಾಗ ಇವನ ಮಾವನೇ ಕರಿ ಬಸವಯ್ಯ ದುಡ್ಡಿನ ಆಸೆಗೆ ಸುಬೇದಾರ ಮಾದಯ್ಯನಿಗೆ ಹಿಡಿದುಕೊಟ್ಟ. 1837 ಮೇ 15ರಂದು ಕ್ಯಾ. ಲೀಹಾರ್ಡಿ ಮಡಿಕೇರಿಯಲ್ಲಿ ಬಸವನನ್ನು ವಿಚಾರಿಸಿ ಗಲ್ಲಿಗೇರಿಸಿದ!

ಲಕ್ಷ್ಮಪ್ಪ ಬಂಗರಸ, ವಿಟ್ಲದ ಅರಸ ಮೊದಲಾದವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು. ಕುಡಿಯರು, ಪೆರಾಜೆ ಕೃಷ್ಣಯ್ಯ ಮೊದಲಾದವರನ್ನು ಸಿಂಗಾಪುರಕ್ಕೆ ಕಳುಹಿಸಲಾಯ್ತು. ಕೊಡಗಿನ ನಾಯಕ ಗುಡ್ಡೆಮನೆ ಅಪ್ಪಯ್ಯ ಗೌಡನನ್ನು 1837 ಅಕ್ಟೋಬರ್ 31 ರಂದು ಮಡಿಕೇರಿಯ ಕೋಟೆಯ ಎದುರು ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು.

ಇದೊಂದು ವಿಫಲ ದಂಗೆ ಎನಿಸಬಹುದು. ಆದರೆ ಎಂದೂ ವಿಫಲವಾಗಲಿಲ್ಲ! ಅನೇಕ ಮಂದಿ ಆಂಗ್ಲರ ಪರವಾಗಿ ನಿಂತು ರಾಜದ್ರೋಹಿಗಳು ಆಂಗ್ಲರಿಗೆ ದಂಗೆಯನ್ನು ಅಡಗಿಸುವಲ್ಲಿ ನೆರವಾದರು. ದಂಗೆಯನ್ನು ದರೋಡೆ ಎಂಬುದಾಗಿ ಬಿಂಬಿಸಿ ಕಲ್ಯಾಣಪ್ಪನ ಕಾಟಕಾಯಿ- ಸುಲಿಗೆ ಎಂದರು. ಆದರೆ ಇದನ್ನು ಖ್ಯಾತ ಕಾದಂಬರಿಕಾರ ನಿರಂಜನರು (ಕುಳ್ಕುಂದ ಶಿವರಾಯ)ರು ಸಕಾರಣವಾಗಿಯೆ ನಿರಾಕರಿಸಿದರು.

ಉಳುವಾರು ರಾಮಯ್ಯ ಗೌಡ,ಕುಡೆಕಲ್ಲು ಪುಟ್ಟ ಗುಡ್ಡಜ್ಜ, ತಿಮ್ಮಯ್ಯ, ಸುಳ್ಯಕೋಡಿ ಕೃಷ್ಣಪ್ಪ, ಕಳಗಿ ಅಣ್ಣು, ಕುಕ್ಕೆಟ್ಟಿ ಚೆನ್ನ, ಮುಂತಾದ ಗೌಡರು ದಂಗೆಯಲ್ಲಿದ್ದರಿಂದ ಕೆನರ ಜಿಲ್ಲೆಯ ಕಲೆಕ್ಟರ್ ಎಂ.ಲೆವಿನ್, ಮೇಜರ್ ಜನರಲ್ ವಿಗೋರ್ (ಗಿigouಡಿheux) ಹಾಗೂ ಚಾಲ್ರ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ ಹಾಗೂ ಜಿ.ರಿಕ್ಟರ್ ಕೊಡಗು ಗಜೇಟಿಯರ್ ನಲ್ಲಿ ಕೊಡಗು ಬಂಡಾಯವೆಂದು ಕರೆಯಲ್ಪಡುವದು, ನಿಜವಾಗಿಯೂ ಹೇಳುವದಾದರೆ ಗೌಡರ ಮೇಲ್ಬೀಳುವಿಕೆ ಎಂದಿದೆ. ಈ ದಂಗೆಯಲ್ಲಿ ಬ್ರಿಟಿಷರು ಸೆರೆ ಹಿಡಿದು ಶಿಕ್ಷೆಗೆ ಒಳಗಾದವರ ಸಂಖ್ಯೆ 1113 ಎಂದು ಬ್ರಿಟಿಷ್ ರೆಕಾರ್ಡ್‍ನಲ್ಲಿ ದಾಖಲಾಗಿದೆ. (ಎನ್.ಎಸ್.ದೇವಿಪ್ರಸಾದ್ ಸಂಪಾಜೆ:ಅಮರ ಸುಳ್ಯದ ದಂಗೆ) ಇಲ್ಲಿ ಪೆರಾಜೆಯ ಬೀರಣ್ಣ ರೈ,ಮುಳ್ಯ ಈಶ್ವರ ಸೋಮಾಯಾಜಿ, ಚೆಟ್ಟಿ-ಕುರ್ತು ಕುಡಿಯರಂತಹ ಅನೇಕ ಭಿನ್ನ ಸಮುದಾಯದವರು ಹೋರಾಡಿದ್ದಾರೆ. ದಂಗೆಯಲ್ಲಿ ಆಂಗ್ಲರಿಗೆ ನೆರವಾದವರಿಗೆ ಕೋವಿ, ಕುದುರೆ, ಬಂಗಾರದ ಪದಕಗಳನ್ನು ನೀಡಲಾಗಿತ್ತು.

ಈ ಪದಕದ ಒಂದು ಬದಿಯಲ್ಲಿ ಈಔಖ ಆISಖಿIಓಉUISಊಇಆ ಅಔಓಆUಅಖಿ ಂಓಆ ಐಔಙಂಐಖಿಙ ಔಈ ಖಿಊಇ ಃಖIಖಿISಊ ಉಔಗಿಇಖಓಒಇಓಖಿ, ಅooಡಿg 1837 ಇನ್ನೊಂದು ಬದಿಯಲ್ಲಿ ``ಸಂನ್ 1837ನೇ ಏಪ್ರಿಲ್ ಮೇ ತಿಂಗಳಲ್ಲಿ (ಶರಾರದ್ರುದ !?!?) ಬಯಸುವ ವಿಚಾರದಲ್ಲು ಕುಂಪಣಿ ಸರಕಾರಕ್ಕೆ ನಂಮ (ತಪೂಲಾಲ್?!?!) ಮಾಡಿದ ಯಾದುಗಾಗಿ ನಿಶಾನಿಗೋಸ್ಕರ'' ಎಂದಿದೆ. ಇದು ಹೋರಾಟ ಹೇಗೆ ಆಂಗ್ಲರ ಬೆವರಿಳಿಸಿತ್ತು ಎಂಬದನ್ನು ಸಾರುತ್ತದೆ.

ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರ ಶೂರರು ನೂರಾರು ಕ್ರಾಂತಿ ವೀರರು ಇತಿಹಾಸದ ಪುಟಗಳಿಂದ ಮರೆಯಾಗಿದ್ದಾರೆ. ಅಬ್ಬರದ ಭಾಷಣ, ತೋರಿಕೆಯ ಪೊಳ್ಳು ಸಿದ್ಧಾಂತದ ನಡುವೆ ಇವರು ಕಾಣದಾಗುವದು ನಮ್ಮ ದುರ್ದೈವ. ಇಂದು ಅಕ್ಟೋಬರ್ 31 ಕೊಡಗಿನ ನಾಯಕ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನ ಗಲ್ಲಿಗೇರಿಸಿದ ದಿನವನ್ನು ಹುತಾತ್ಮರ ದಿನವೆಂದು ಕೊಡಗು ಜಿಲ್ಲಾಡಳಿತದ ವತಿಯಿಂದ ಆಚರಿಸುವ ಪ್ರಯುಕ್ತ ಈ ಬರಹ.

-ಬರಹ: ಆನಂದ್ ಕರಂದ್ಲಾಜೆ, ಕುಶಾಲನಗರ

ನೆರವು : ಜಿ ರಿಚ್ಟರ್ ರ ಕೊಡಗು ಗೆಜಿಟಿಯರ್,

ಮೇಜರ್ ವಿಗೌಕ್ಸ್ರ್ರ್‍ರ ಪುಸ್ತಕ, ಖ್ಯಾತ ಇತಿಹಾಸಕಾರ ಪುತ್ತೂರ್ ಅನಂತರಾಜೇ ಗೌಡರ ರಾಜಪರಂಪರೆಯ ಕೊಡಗಿನ ಗೌಡರು ಪುಸ್ತಕ.