ಸೋಮವಾರಪೇಟೆ, ಅ.26: ಜಿ. ಪಂ., ಜಿಲ್ಲಾಡಳಿತ, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ, ಜಿಲ್ಲೆ ಹಾಗೂ ಮೂರು ತಾಲೂಕುಗಳ ಯುವ ಒಕ್ಕೂಟದ ಆಶ್ರಯದಲ್ಲಿ ತಾ. 27ರಂದು(ಇಂದು) ಪೂರ್ವಾಹ್ನ 10 ಗಂಟೆಗೆ ಸ್ಥಳೀಯ ಕೊಡವ ಸಮಾಜದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಪ್ಪಚ್ಚು ರಂಜನ್ ವಹಿಸಲಿದ್ದು, ಜಿಲ್ಲಾ ಪಂಚಾ¬ತಿ ಅಧ್ಯಕ್ಷ ಬಿ.ಎ. ಹರೀಶ್, ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಯುವಕ ಹಾಗೂ ಯುವತಿಯರಿಗೆ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ. 15 ನಿಮಿಷಗಳ ಕಾಲಾವಕಾಶವಿದ್ದು, ಧ್ವನಿಸುರುಳಿ ಬಳಸಲು ಅವಕಾಶ ಇರುವದಿಲ್ಲ. ಜಾನಪದ ಗೀತೆಯಲ್ಲಿ 7 ನಿಮಿಷ ಕಾಲಾವಕಾಶವಿರುತ್ತದೆ. ಏಕಾಂಕ ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಹಾರ್ಮೋನಿಯಮ್ ವಾದನ, ಗಿಟಾರ್ ವಾದನ, ಶಾಸ್ತ್ರೀಯ ನೃತ್ಯ, ಆಶುಭಾಷಣ ಸ್ಪರ್ಧೆ ನಡೆಯಲಿದೆ. 14 ವರ್ಷದ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದ್ದು, ಶಾಲೆಯಿಂದ ವಯಸ್ಸಿನ ದೃಢೀಕರಣ ತರಬೇಕಿದೆ.
ಬೆಳಿಗ್ಗೆ 9 ಗಂಟೆಯೊಳಗೆ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ. ಎಲ್ಲ ಸ್ಪರ್ಧೆಗಳಲ್ಲಿ ಮೊದಲ ಸ್ಥಾನಗಳಿಸಿದ ಸ್ಪರ್ಧಿಗಳು ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರ್ಹತೆ ಪಡೆಯಲಿದ್ದಾರೆ.
ಸಮಾರೋಪ ಸಮಾರಂಭ ಸಂಜೆ 4.30ಕ್ಕೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಚ್.ಎನ್. ತಂಗಮ್ಮ, ಸದಸ್ಯರಾದ ಬಿ.ಬಿ. ಸತೀಶ್, ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಏಜಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 9481213920, 9480747835ನ್ನು ಸಂಪರ್ಕಿಸ ಬಹುದಾಗಿದೆ.