ಕುಶಾಲನಗರ, ಅ. 14: ಕುಶಾಲನಗರ ಸಮೀಪದ ಕೂಡಿಗೆ ಕಣಿವೆ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ದುರಸ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮಲೆನಾಡು ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡಿರುವ ತೂಗುಸೇತುವೆ ಈ ಬಾರಿಯ ಪ್ರವಾಹದಿಂದ ಹಾನಿಗೀಡಾಗಿ ಸಂಚಾರಕ್ಕೆ ತೊಡಕುಂಟಾಗಿತ್ತು. ಈ ಬಗ್ಗೆ ಸ್ಥಳೀಯರ ದೂರಿನ ಹಿನ್ನೆಲೆ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅವರು ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆದರೆ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ತಿಳಿಸಿರುವ ಗಡಿ ಭಾಗದ ನಾಗರಿಕರು ಅಪಾಯ ಸಂಭವಿಸುವ ಮುನ್ನ ಎಚ್ಚರವಹಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕುಶಾಲನಗರ ಸಮೀಪದ ಕಣಿವೆ ಬಳಿ ಕಾವೇರಿ ನದಿಗೆ 2010-11 ರಲ್ಲಿ ಅಡ್ಡಲಾಗಿ ತೂಗುಸೇತುವೆ ನಿರ್ಮಾಣಗೊಂಡಿದ್ದು ಕಳೆದ ಕೆಲವು ವರ್ಷಗಳಿಂದ ಕೊಡಗು ಮತ್ತು ಮೈಸೂರು ಜಿಲ್ಲೆಯ ಗಡಿಗ್ರಾಮಗಳ ಸಂಪರ್ಕ ಸೇತುವಾಗಿ ಕೆಲಸ ನಿರ್ವಹಿಸುತ್ತಿದೆ.
ನೆರೆಯ ಮೈಸೂರು ಜಿಲ್ಲೆಯ ಗಡಿಗ್ರಾಮಗಳಿಂದ ಆಗಮಿಸುವ ಮತ್ತು ತೆರಳುವ ಕೂಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಇದೇ ಸೇತುವೆಯನ್ನು ಅವಲಂಭಿಸಿದ್ದಾರೆ. ಸೇತುವೆಯು ಮೈಸೂರು ಜಿಲ್ಲೆ ಭಾಗದ ದೊಡ್ಡಕಮರವಳ್ಳಿ, ಚಿಕ್ಕ ಕಮರವಳ್ಳಿ, ಅಂಬ್ಲಾರೆ, ಮಂಟಿಕೊಪ್ಪಲು ಸೇರಿದಂತೆ ಹಲವು ಗ್ರಾಮಗಳ ಜನತೆಗೆ ಕಣಿವೆ, ಕೂಡಿಗೆ, ಹೆಬ್ಬಾಲೆ, ಕುಶಾಲನಗರದ ಕಡೆಗೆ ತೆರಳಲು ಹತ್ತಿರದ ಮಾರ್ಗವಾಗಿದೆ.
ಸೇತುವೆಯನ್ನು ಶಾಶ್ವತವಾಗಿ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪರ್ಯಾಯವಾಗಿ ವಾಹನ ಸಂಚಾರಕ್ಕೆ ಯೋಗ್ಯವಾದ ಸಂಪರ್ಕ ರಸ್ತೆ ನಿರ್ಮಿಸಬೇಕು ಎನ್ನುವದು ದೊಡ್ಡಕಮರವಳ್ಳಿ ವ್ಯಾಪ್ತಿಯ ಮಂಟಿಕೊಪ್ಪಲು ಗ್ರಾಮದ ಮಾಜಿ ಸೈನಿಕ ಈರಪ್ಪ ಅವರ ಅನಿಸಿಕೆಯಾಗಿದೆ. ದಿನನಿತ್ಯ ತಮ್ಮ ಕೃಷಿ ಚಟುವಟಿಕೆಗೆ ಈ ಸೇತುವೆಯನ್ನು ಅವಲಂಭಿಸಬೇಕಾಗಿದೆ. ವಾಹನ ಸಂಚಾರಕ್ಕೆ ಸುಮಾರು 20 ಕಿ.ಮೀ. ದೂರದ ದಾರಿಯನ್ನು ಕ್ರಮಿಸಬೇಕಾಗಿದೆ ಎಂದು ಅವರು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.
ಮೈಸೂರು ಗಡಿಭಾಗದಿಂದ ಬರುವ ನೂರಾರು ವಿದ್ಯಾರ್ಥಿಗಳಲ್ಲಿ ಶೇ.25 ರಷ್ಟು ವಿದ್ಯಾರ್ಥಿಗಳು ಸೇತುವೆಯ ಸಮಸ್ಯೆ ತಲೆದೋರಿದ ನಂತರ ತಮ್ಮ ಶಿಕ್ಷಣವನ್ನೇ ತೊರೆದಿದ್ದಾರೆ ಎಂದು ಮಂಟಿಕೊಪ್ಪಲು ನಿವಾಸಿ ಲೋಕೇಶ್ ಮಾಹಿತಿ ನೀಡಿದ್ದಾರೆ. ಅಪಾಯವನ್ನು ಅರಿತ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವದನ್ನು ನಿಲ್ಲಿಸಿರುವದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಆದಷ್ಟು ಬೇಗನೆ ಮೈಸೂರು ಮತ್ತು ಕೊಡಗು ವ್ಯಾಪ್ತಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಣಿವೆ ಬಳಿಯ ತೂಗುಸೇತುವೆಗೆ ಶಾಶ್ವತ ಕಾಯಕಲ್ಪ ಕಲ್ಪಿಸುವಲ್ಲಿ ಚಿಂತನೆ ಹರಿಸಬೇಕಾಗಿದೆ.