ಇಲ್ಲಿನ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗಿನ ಉಡುಗೆಯಲ್ಲಿ ತಮ್ಮೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಪಾಲ್ಗೊಳ್ಳುವಂತೆ ತಯಾರಿ ಮಾಡಿಕೊಂಡಿದ್ದಾಗಿ ಸಂತಸ ಹಂಚಿಕೊಂಡರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ಜತೆಗೂಡಿ ಈ ಮೂವರು ಅಧಿಕಾರಿಗಳು ‘ನಾವೂ ಕೊಡಗಿನ ಬೆಡಗಿಯರು’ ಎಂಬಂತೆ ಕಾಣಿಸಿಕೊಂಡು ಮಹಿಳಾ ದಸರಾಕ್ಕೆ ಚಾಲನೆ ನೀಡಿದಾಗ; ನೆರೆದಿದ್ದ ಜನಸ್ತೋಮ ಭಾರೀ ಕರತಾಡನದೊಂದಿಗೆ ಹೋ... ಎಂದು ಸಂಭ್ರಮಿಸಿತು. ಅಧಿಕಾರಿಗಳು ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವೀಣಾ ಅಚ್ಚಯ್ಯ, ಇಂತಹ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನಲ್ಲಿ ಸೇವೆಗೆ ಬರಲೆಂದು ಆಶಿಸಿದರು.
ಎಸ್ಪಿ ಆಶಯ : ಕೊಡಗಿನ ಉಡುಪಿನಲ್ಲಿ ಕಾಣಿಸಿಕೊಂಡ ತಮ್ಮಗಳನ್ನು ಪ್ರೀತಿಯಿಂದ ಜನತೆ ಸ್ವೀಕರಿಸಿದ್ದು; ಸಂತೋಷದಿಂದ ಮಹಿಳಾ ದಸರಾ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಆಶಿಸಿದರು.
ಹೆಮ್ಮೆ - ಲಕ್ಷ್ಮೀಪ್ರಿಯ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಕೂಡ ಈ ಉಡುಪಿನೊಂದಿಗೆ ಹರ್ಷಚಿತ್ತರಾಗಿ ಕಾಣಿಸಿಕೊಂಡು; ಕೊಡಗಿನ ಮಹಿಳೆಯರು ಕಚೇರಿ ಕೆಲಸಗಳಿಗೂ ಹೆಚ್ಚಾಗಿ ಆಗಮಿಸುವ ಮೂಲಕ ಸ್ವಾವಲಂಬನೆಯ ಬದುಕು ಕಂಡುಕೊಳ್ಳುತ್ತಿರುವದು ಹೆಮ್ಮೆ ಎಂದು ನುಡಿದರು.
ಇಂದಿನ ಮಹಿಳಾ ದಸರಾ ಉದ್ಘಾಟನೆಯೊಂದಿಗೆ ಇಡೀ ವೇದಿಕೆ ಅಲಂಕರಿಸಿದ್ದ ಮಹಿಳಾ ಮಣಿಗಳ ಸಾಲಿನಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಸಹಿತ ಮಹಿಳಾ ದಸರಾ ಯಶಸ್ವಿಗೆ ಹಾರೈಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅರುಂಧತಿ ಪ್ರಾಸ್ತಾವಿಕ ನುಡಿಯಾಡಿದರೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹಾ ಆಶಯ ನುಡಿಯಾಡಿದರು.
ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು, ಸ್ವಸಹಾಯ ಸಂಘಗಳು, ಅಂಗನವಾಡಿ ಕಾರ್ಯಕರ್ತೆಯರೂ ಹಾಗೂ ಸಂಘದ ಪ್ರಮುಖರು, ವಿವಿಧ ಕ್ಷೇತ್ರದ ಮಹಿಳಾ ಮುಖಂಡರು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಈ ನಡುವೆ ಆಗಮಿಸಿ ಶುಭಾಶಯ ಕೋರಿದರು. ನಾಡಿನ ಜನತೆ ದಸರಾದಲ್ಲಿ ಪಾಲ್ಗೊಳ್ಳುವಂತೆ ಅವರು ಕರೆಯಿತ್ತರು. ಮಹಿಳಾ ದಸರಾ ತಂಡದ ಪರವಾಗಿ ಪ್ರಮೀಳಾ ಸಂಗಡಿಗರು ಪ್ರಾರ್ಥಿಸಿ, ಸವಿತಾ ರಾಖೇಶ್ ಸ್ವಾಗತಿಸಿದರೆ, ಶಿಕ್ಷಕಿ ಚೋಕೀರ ಅನಿತಾ ದೇವಯ್ಯ ನಿರೂಪಿಸಿ, ಮಹಿಳಾ ಕಲ್ಯಾಣ ಇಲಾಖೆಯ ಮೇಪಾಡಂಡ ಸವಿತಾ ಕೀರ್ತನ್ ವಂದಿಸಿದರು.
ಶಾಸಕಿಗೆ ಹುಟ್ಟುಹಬ್ಬದ ಸಂಭ್ರಮ
ಇಂದಿನ ಕಾರ್ಯಕ್ರಮದ ಉದ್ಘಾಟಕರಾಗಿದ್ದ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರ ಹುಟ್ಟುಹಬ್ಬದ ದಿನ ಇದಾಗಿದ್ದು, ಮಹಿಳಾ ದಿನಾಚರಣೆಯ ನಡುವೆ ಅವರು ಎಂದಿನಂತೆ ನಗು ಮುಖದಿಂದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ನಿರೂಪಕರು ವಿಚಾರ ತಿಳಿಸುತ್ತಿದ್ದಂತೆ ಇತರರು ಶುಭ ಕೋರಿದರು. ಬಳಿಕ ಶಾಸಕ ಅಪ್ಪಚ್ಚುರಂಜನ್ ಅವರು ಕೂಡ ಶಾಸಕಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದ್ದು, ವಿಶೇಷವಾಗಿತ್ತು.