ಸೋಮವಾರಪೇಟೆ, ಅ. 6: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್, ಎಸ್ಎಸ್ಎಫ್ ಸೋಮವಾರಪೇಟೆ ವಿಭಾಗದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ‘ಗಾಂಧೀಜಿಯ ಕನಸು ನನಸಾಗಲಿ’ ಎಂಬ ಧ್ಯೇಯವಾಕ್ಯ ದೊಂದಿಗೆ ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಎಸ್ಎಸ್ಎಫ್ನ ಜಿಲ್ಲಾಧ್ಯಕ್ಷ ಅಝೀಜ್ ಸಖಾಫಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗಾಂಜಾ, ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಆರೋಗ್ಯ ಹಾಳಾಗುವದರೊಂದಿಗೆ ಕುಟುಂಬದ ನೆಮ್ಮದಿಯನ್ನು ಕೆಡಿಸುತ್ತ್ತದೆ. ಇವುಗಳ ಸೇವೆನೆಯಿಂದ ವಾಸಿ ಮಾಡಲಾಗದಂತಹ ಮಾರಕ ಕಾಯಿಲೆಗಳು ಬರುತ್ತವೆ. ಯುವ ಜನಾಂಗ ಮಾದಕ ವ್ಯಸನಗಳಿಗೆ ದಾಸರಾಗದೆ, ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ಈ ಸಂದರ್ಭ ಎಸ್ವೈಎಸ್ ಸೋಮವಾರಪೇಟೆ ಘಟಕದ ಅಧ್ಯಕ್ಷ ಸೈದು ಹಾಜಿ, ರಾಜ್ಯ ಸಮಿತಿಯ ಹೊಸತೋಟದ ಶರೀಫ್, ರಹೀಂ, ಉನೈಸ್, ಸಲೀಂ ಹಾಗೂ ಡಿವಿಷನ್ ಸೆಕ್ಟರ್ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.