ಮಡಿಕೇರಿ, ಅ. 1: ನಗರದ ಶ್ರೀ ಕೋದಂಡರಾಮ ದೇವಾಲಯ ದಸರಾ ಮಂಟಪ ಸಮಿತಿ 45ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ಈ ಬಾರಿ ಶಿವನಿಂದ ತ್ರಿಪುರಾಸುರರ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಕೋದಂಡರಾಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಹೆಚ್.ಎನ್. ಮಹೇಶ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‍ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕವನ್ನು ಸೋಮವಾರಪೇಟೆಯ ಲೋಬೋ ಸೌಂಡ್ಸ್‍ನವರು ಒದಗಿಸಲಿದ್ದು, ಮಡಿಕೇರಿಯ ರಮೇಶ್ ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದ್ದಾರೆ. ಫೈರ್ ಎಫೆಕ್ಟನ್ನು ಬೆಂಗಳೂರಿನ ಪ್ರಸಾದ್ ನೀಡಲಿದ್ದು, 18 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಕಲಾಕೃತಿಗಳನ್ನು ಹುದುಬೂರಿನ ಮಹದೇವಪ್ಪ ಅಂಡ್‍ಸನ್ಸ್ ರಚಿಸುತ್ತಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನ-ವಲನ ವ್ಯವಸ್ಥೆಯನ್ನು ಹೇಮ್‍ರಾಜ್ ತಂಡ ಮಾಡಲಿದೆ. ಫ್ಲಾಟ್ ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದಾರೆ ಎಂದು ಮಹೇಶ್ ಮಾಹಿತಿ ನೀಡಿದರು. 12 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಪ್ರಥಮ ಬಹುಮಾನಕ್ಕಾಗಿ 150 ಸದಸ್ಯರ ತಂಡ ಶ್ರಮಿಸುತ್ತಿದೆ ಎಂದು ಮಹೇಶ್ ತಿಳಿಸಿದ್ದಾರೆ.

- ಉಜ್ವಲ್ ರಂಜಿತ್