ಮಡಿಕೇರಿ, ಸೆ. 29: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 44ನೇ ವರ್ಷದ ಉತ್ಸವಕ್ಕೆ ಸಜ್ಜಾಗುತ್ತಿದ್ದು; ಈ ಬಾರಿ ಮಂಟಪದಲ್ಲಿ ಹಯಗ್ರೀವನಿಂದ ಹಯಗ್ರೀವ ದಾನವನ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಕೋಟೆ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ಅಧ್ಯಕ್ಷ ಹೆಚ್.ಎಲ್. ಯೋಗೇಶ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‍ನ ಕಳೆಯಗಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕವನ್ನು ಬೆಂಗಳೂರಿನ ಪ್ರೀತಿ ಸೌಂಡ್ಸ್ ಒದಗಿಸಲಿದ್ದು; ಸಮಿತಿಯ ಸದಸ್ಯ ಪ್ರಶಾಂತ್ ತಂಡ ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದ್ದಾರೆ. ಒಟ್ಟು 17 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಸಮಿತಿಯ ಸದಸ್ಯ ಹಾಗೂ ಕಲಾವಿದ ಸುನಿಲ್ ಮತ್ತು ತಂಡ ಕಲಾಕೃತಿಗಳನ್ನು ರಚಿಸುತ್ತಿದೆ. ಫ್ಲಾಟ್‍ಫಾರಂ ನಿರ್ಮಾಣ, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನ - ವಲನ ವ್ಯವಸ್ಥೆಯನ್ನು ಟೀಂ ಕೆಎಂಟಿ ತಂಡ ಮಾಡಲಿದೆ. ಬೆಂಗಳೂರಿನ ಮಸೂದ್ ಫೈರ್ ಎಫೆಕ್ಟ್ ನೀಡಲಿದ್ದಾರೆ ಎಂದು ಯೋಗೇಶ್ ವಿವರಿಸಿದರು.

15 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನ ಮೆಚ್ಚುಗೆ ಪಡೆಯುವದರೊಂದಿಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡುವ ನಿಟ್ಟಿನಲ್ಲಿ 150 ಮಂದಿ ಸದಸ್ಯರ ತಂಡ ಶ್ರಮಿಸುತ್ತಿದೆ ಎಂದು ಯೋಗೇಶ್ ತಿಳಿಸಿದ್ದಾರೆ.

- ಉಜ್ವಲ್ ರಂಜಿತ್