ಮಡಿಕೇರಿ, ಸೆ.14: ವೀರಾಜಪೇಟೆಯ ಮಾಜಿ ಸೈನಿಕರ ಸಹಕಾರ ಸಂಘ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ತಾ. 18 ರಂದು ಬೆಳಗ್ಗೆ 10.30 ಗಂಟೆಗೆ ಅಮರ ಜವಾನ ಸ್ಮಾರಕದಲ್ಲಿ ನಡೆಯಲಿದೆ.

ಯೋಧರ ಸ್ಮಾರಕ ಸ್ಥಂಭದ ಆವರಣದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ತುಕಡಿಯ ಗೌರವದೊಂದಿಗೆ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸಿ ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ಹಾಗೂ ದಿವಂಗತ ಮಾಜಿ ಯೋಧರಿಗೆ ಶ್ರದ್ಧಾಂಜಲಿಯನ್ನು ಸಂಘದ ವತಿಯಿಂದ ಅರ್ಪಿಸಲಾಗುವದು.

ಚೇಂದ್ರಿಮಾಡ ಕೆ.ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಸಕರಾದ ಕೆ.ಜಿ.ಬೋಪಯ್ಯ, ಸೈನಿಕ ಮತ್ತು ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಲೆ.ಕರ್ನಲ್ ಗೀತ ಮಹಾಬಲ ಶೆಟ್ಟಿ, ಕರ್ನಲ್ ಚೆಪ್ಪುಡಿರ ಪಿ.ಮುತ್ತಣ್ಣ, ಕರ್ನಲ್ ಚೋಂದಂಡ ಕಾಶಿ, ವೀರಾಜಪೇಟೆ ತಾಲೂಕಿನ ತಹಶೀಲ್ದಾರರಾದ ಕೆ.ಪುರಂದರ, ವೀರಾಜಪೇಟೆ ಉಪ ಅಧೀಕ್ಷಕ ಪಿ.ಪಿ.ಜೈಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.