ಗೋಣಿಕೊಪ್ಪ ವರದಿ, ಸೆ. 4: ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ದ್ವೇಷದಿಂದ ಬಿಜೆಪಿ ಅನಾವಶ್ಯಕವಾಗಿ ತೊಂದರೆ ನೀಡುತ್ತಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಜೆ.ಕೆ. ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲ ಪಡಿಸುತ್ತಿರುವ ಕಾರಣ ಇದನ್ನು ಸಹಿಸಲಾಗದೆ ಬಿಜೆಪಿ ಪಕ್ಷವು ಕೇಂದ್ರದ ಇ.ಡಿ. ಸೇರಿದಂತೆ ಹಲವು ತೆರಿಗೆ ಇಲಾಖೆಗಳನ್ನು ಬಳಸಿಕೊಂಡು ತೊಂದರೆ ನೀಡುತ್ತಿದೆ. ಅವರನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಪ್ರ. ಕಾರ್ಯದರ್ಶಿ ಮುರುಗ ಮಾತನಾಡಿ, ದೇಶಕ್ಕೆ ನಾಯಕರಾಗುವಷ್ಟು ಬೆಳೆದಿರುವ ಶಿವಕುಮಾರ್ ಕಾಂಗ್ರೆಸ್ ಪಕ್ಷ ಬಲ ಪಡಿಸುವ ಕೆಲಸದಲ್ಲಿ ತೊಡಗಿ ಕೊಂಡಿರುವದರಿಂದ ಇದನ್ನು ಸಹಿಸದೆ ಅವರ ಮೇಲೆ ಕಾನೂನು ಹೋರಾಟ ನಡೆಸಲಾಗುತ್ತಿದೆ. ಬಿಜೆಪಿ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದರು.

ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಪ್ರಮುಖರಾದ ಪಟ್ಟಡ ರಕ್ಷಿತ್ ಚಂಗಪ್ಪ, ಮುತ್ತಣ್ಣ, ಸ್ಟಾಲಿನ್ ಉಪಸ್ಥಿತರಿದ್ದರು.