ಮಡಿಕೇರಿ, ಸೆ. 3: ಗೋಣಿಕೊಪ್ಪಲು ರೋಟರಿ ಕ್ಲಬ್‍ನಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಶಿಕ್ಷಣಕ್ಕೆ ರೋಟರಿ ಸಂಸ್ಥೆ ಆದ್ಯತೆ ನೀಡುತ್ತಲೇ ಬಂದಿದ್ದು, ಪ್ರಕೃತಿ ವಿಕೋಪಕ್ಕೀಡಾದಾಗಲೂ ಸಂಕಷ್ಟದಲ್ಲಿದ್ದ ಕುಟುಂಬಗಳ ಮಕ್ಕಳಿಗೆ ನೆರವು ನೀಡಿದೆ. ಶಿಕ್ಷಣ ಶುಲ್ಕವನ್ನೂ ರೋಟರಿ ಸದಸ್ಯರು ಪಾವತಿಸಿ ಸಹಾಯಕ್ಕೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು. ಗೋಣಿಕೊಪ್ಪ ರೋಟರಿ ಅಧ್ಯಕ್ಷ ಕಾಡ್ಯಮಾಡ ನೆವೀನ್ ಮಾತನಾಡಿ, ದೆಹಲಿಯ ಓರೆಕಲ್ ಸಂಸ್ಥೆ ಮತ್ತು ಪ್ರಥಮ್ ಪಬ್ಲಿಕೇಶನ್ಸ್ ಅವರು ರೋಟರಿ ಸದಸ್ಯರಾದ ಅರುಣ್ ತಮ್ಮಯ್ಯ ಮೂಲಕ 3500 ಪುಸ್ತಕಗಳನ್ನು ಗೋಣಿಕೊಪ್ಪ ರೋಟರಿಗೆ ನೀಡಿದ್ದು, ಈ ಪುಸ್ತಕಗಳನ್ನು ವಿವಿಧ ರೋಟರಿ ಸಂಸ್ಥೆಗಳ ಮೂಲಕ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ವಿತರಿಸಲಾಗುತ್ತಿದೆ. ವಿಜ್ಞಾನ, ಆಂಗ್ಲ, ಗಣಿತ ಹಾಗೂ ಸಾಮಾನ್ಯ ಜ್ಞಾನ ಸಂಬಂಧಿತ ಪುಸ್ತಕಗಳು ಶಾಲಾ ಗ್ರಂಥ ಭಂಡಾರಕ್ಕೆ ಆಸ್ತಿಯಾಗಲಿದೆ ಎಂದು ಮಾಹಿತಿ ನೀಡಿದರು..

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್.ಜಗದೀಶ್ ಪ್ರಶಾಂತ್ ಪುಸ್ತಕ ಸ್ವೀಕರಿಸಿ ಮಾತನಾಡಿದರು. ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಟಿ.ಬಿ. ಪೂಣಚ್ಚ, ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಮಾಜಿ ಸಹಾಯಕ ಗವರ್ನರ್ ಡಾ. ಚಂದ್ರಶೇಖರ್, ರೀಟಾ ದೇಚಮ್ಮ ಸೇರಿದಂತೆ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿದ್ದರು.