ಮಡಿಕೇರಿ, ಸೆ. 1: ವಲಯೋತ್ಸವದಂತಹ ಕಾರ್ಯಕ್ರಮ ಗಳಿಂದ ಹವ್ಯಕ ಸಂಘಟನೆಯು ಭದ್ರವಾಗಲಿದೆ ಹಾಗೂ ಸಮಾಜದ ಸದಸ್ಯರನ್ನು ಒಂದೆಡೆ ಸಮೀಕರಿಸಲು ಸಾಧ್ಯವಾಗಿದೆ ಎಂದು ಮುಳ್ಳೇರಿಯಾ ಮಂಡಲ ಅಧ್ಯಕ್ಷ ಪ್ರೊ. ಕೃಷ್ಣಭಟ್ ಹೇಳಿದರು. ಮಡಿಕೇರಿಯ ಲಕ್ಷ್ಮೀನರಸಿಂಹ ಕಲ್ಯಾಣಮಂಟಪದಲ್ಲಿ ನಡೆದ ಕೊಡಗು ಹವ್ಯಕ ವಲಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹವ್ಯಕ ಸಮಾಜದ ಗುರುಗಳ ಆಶೀರ್ವಾದದೊಂದಿಗೆ ಸಮಾಜ ಬಾಂಧವರು ಸಂಘಟನೆಯ ದೃಷ್ಟಿಯಿಂದ ವಿವಿಧ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಹವ್ಯಕ ಮಂಡಲ ಕಾರ್ಯದರ್ಶಿ ಬಾಲಸುಬ್ರಮಣ್ಯ ಸರ್ಪಮೂಲೆ ಮಾತನಾಡಿ, ಹವ್ಯಕ ಮಾತೆಯರ ಚೈತನ್ಯ ಸಮಾಜಕ್ಕೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮಾತೃತ್ವ ಘಟಕವನ್ನು ಆರಂಭಿಸಲಾಗಿದೆ ಎಂದರು.

ಕೊಡಗು ಹವ್ಯಕ ವಲಯದ ಶಿಷ್ಯರಿಗೆ ವಿವಿಧ ಸೂಚನೆಗಳನ್ನು ನೀಡಿದರು. ಹವ್ಯಕ ವಲಯಾಧ್ಯಕ್ಷ ಕೆ.ಆರ್. ನಾರಾಯಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯ ನಿರ್ದೇಶಕ ಮಿತ್ತೂರು ಈಶ್ವರಭಟ್, ಮಂಡಲ ಗುರಿಕಾರ ಸತ್ಯನಾರಾಯಣ ಮೊಗ್ರ, ಶ್ರೀ ರಾಮಚಂದ್ರ ಗುರೂಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಮತ್ತು ಶೈಲಾ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. 40ಕ್ಕೂ ಅಧಿಕ ದೇಸಿ ಹಸುಗಳನ್ನು ಸಾಕುತ್ತಿರುವ ಬಿಳಿಗೇರಿಯ ಉದಯಕುಮಾರ್ ಮತ್ತು ಲಲಿತ ದಂಪತಿಗಳನ್ನು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ್ರಸ್ತುತ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪ್ರಧಾನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಪಾಲಂಗಾಲದ ಡಾ.ವಿಜಯಲತಾ ಅವರನ್ನು ಸನ್ಮಾನಿಸಲಾಯಿತು.

ಸಮಾಜ ಬಾಂಧವರಿಗೆ ಹವ್ಯಕ ಅಡುಗೆ ಸ್ಪರ್ಧೆ, ಆಶುಭಾಷಣ, ಸ್ಮರಣ ಶಕ್ತಿ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಶೇ. 85 ಅಂಕಗಳಿಗಿಂತ ಅಧಿಕ ಅಂಕ ಗಳಿಸಿದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಹವ್ಯಕ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾಪುರಸ್ಕಾರ ನೀಡಲಾಯಿತು. ಹೊಸೂರು ಶ್ರೀನಿವಾಸ ಮೂರ್ತಿ ವಲಯೋತ್ಸವ ಗೀತೆ ಹಾಡಿದರು. ವಲಯ ಕಾರ್ಯದರ್ಶಿ ಡಾ. ಎ.ಆರ್. ರಾಜಾರಾಂ ವಾರ್ಷಿಕ ವರದಿ ವಾಚಿಸಿದರು. ಸವಿತಾ ಕಾರ್ಯಕ್ರಮ ನಿರೂಪಿಸಿದರು.