ಮಡಿಕೇರಿ, ಆ. 29: ರಾಷ್ಟ್ರೀಯ ನೇತ್ರದಾನ 34ನೇ ಪಾಕ್ಷಿಕ ಕಾರ್ಯಕ್ರಮ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಪ್ರಯುಕ್ತ ನೇತ್ರದಾನ ಮಹತ್ವ ಬಗ್ಗೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಹಾಗೂ ಕಾರ್ಯಕ್ರಮ ಅಧಿಕಾರಿ ಡಾ. ಎನ್. ಆನಂದ್ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೇತ್ರದಾನ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ, ರ್ಯಾಲಿ, ಹೀಗೆ ವಿವಿಧ ಮಾದರಿಯಲ್ಲಿ ಅರಿವು ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರತಿ ವರ್ಷ ಸರಾಸರಿ 5,600 ನೇತ್ರ ದಾನಗಳಾಗುತ್ತಿದ್ದು, ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬಂಧಿ ಅಂಧತ್ವದಿಂದ ಬಳಲುತ್ತಿದ್ದು ನೇತ್ರದಾನಕ್ಕಾಗಿ ಕಾಯುತ್ತಿರುತ್ತಾರೆ. ವಿಶ್ವದಾದ್ಯಂತ ಧಾರ್ಮಿಕ ನಾಯಕರು ನೇತ್ರದಾನಕ್ಕೆ ಬೆಂಬಲ ಸೂಚಿಸಿದ್ದು, ಅತ್ಯುತ್ತಮ ಮಾನವೀಯ ಸೇವೆ ಎಂದಿದ್ದಾರೆ.
ಕರ್ನಾಟಕದಲ್ಲಿ 27 ನೇತ್ರ ಬ್ಯಾಂಕುಗಳು ಸೇವೆ ಸಲ್ಲಿಸುತ್ತಿವೆ. 7 ಸರ್ಕಾರಿ ಸ್ವಾಮ್ಯದಲ್ಲಿ. ನೇತ್ರದಾನ ಮಾಡುವುದು ಮರಣದ ನಂತರವೇ, ನಮ್ಮ ನೇತ್ರಗಳು ಮರಣದ ನಂತರವೂ ಜೀವಿತವಾಗಿರಲಿ, ನೇತ್ರದಾನಕ್ಕೆ ವಯೋಮಿತಿ ಇಲ್ಲ. ವ್ಯಕ್ತಿಯ ಮರಣದ 6 ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲಾಗುವದು. ಒಬ್ಬ ವ್ಯಕ್ತಿಯು ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಠಿ ನೀಡುತ್ತದೆ.
ನೇತ್ರ ಸಂಗ್ರಹಣೆಗೆ ಬೇಕಾಗುವ ಸಮಯ ಕೇವಲ 20 ನಿಮಿಷಗಳು, ನೇತ್ರ ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವದಿಲ್ಲ. ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು, ಯಾವದೇ ಭೇದ ಭಾವವಿಲ್ಲದೇ ಎಲ್ಲರೂ ನೇತ್ರದಾನ ಮಾಡಬಹುದು.
ನೇತ್ರದಾನ ಮಾಡುವದು ಮರಣಾನಂತರವೇ, ಎಲ್ಲರೂ ನೇತ್ರದಾನ ಮಾಡಬಹುದು. ಸಕ್ಕರೆ ರೋಗ, ರಕ್ತದ ಒತ್ತಡ, ಹೃದಯ ತೊಂದರೆ, ಗ್ಲೋಕೊಮಾ, ಪೊರೆರೋಗ, ಕನ್ನಡಕ ಧಾರಣೆ ಯಾವದೇ ನೇತ್ರದಾನಕ್ಕೆ ಅಡ್ಡಿ ಬರುವದಿಲ್ಲ. ಯಾವದೇ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯು ಸಹ ನೇತ್ರದಾನ ಮಾಡಬಹುದು. ಮರಣಿಸಿದ ವ್ಯಕ್ತಿ ನೋಂದಾಯಿತ ನೇತ್ರದಾನಿಯಾಗಿರಬೇಕಿಲ್ಲ. ನೇತ್ರ ಸಂಗ್ರಹಣೆ ಮತ್ತು ವಿತರಣೆ ಉಚಿತವಾದ ಸೇವೆ. ವ್ಯಕ್ತಿ ಮರಣಿಸಿದ ಯಾವದೇ ಸ್ಥಳದಲ್ಲಿ ಮನೆ, ಆಸ್ಪತ್ರೆ, ಶವಾಗಾರ, ಚಿತಗಾರ/ ಇನ್ನಾವದೇ ಸ್ಥಳದಿಂದ ನೇತ್ರಗಳನ್ನು ಸಂಗ್ರಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104 ಅಥವಾ ಜಿಲ್ಲಾ ಆಸ್ಪತ್ರೆ 08272-223445 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಹಾಗೂ ಕಾರ್ಯಕ್ರಮ ಅಧಿಕಾರಿ ಡಾ. ಎನ್. ಆನಂದ್ ತಿಳಿಸಿದ್ದಾರೆ.