ಸುಂಟಿಕೊಪ್ಪ, ಆ. 25: ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಗ್ರೀನ್ ಫೀಸ್ ಎಸ್ಟೇಟ್ ತೋಟಕ್ಕೆ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ, ಕರಿಮೆಣಸು ಬಾಳೆ ತೋಟಗಳನ್ನು ಧ್ವಂಸಗೊಳಿಸಿ ಭಾರೀ ಪ್ರಮಾಣದಲ್ಲಿ ನಷ್ಟಪಡಿಸಿವೆ ಎಂದು ತೋಟದ ಜೆ.ಎಲ್. ರಮೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹರದೂರು ಗ್ರಾಮ ಪಂಚಾಯಿತಿಯ ಗರಗಂದೂರು ಗ್ರಾಮದ ಜೆ.ಎಲ್. ರಮೇಶ್ ಎಂಬವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ತೆಂಗು, ಮಾವು, ಕಾಫಿ, ಮೆಣಸು ಗಿಡಗಳನ್ನು ಧ್ವಂಸಗೊಳಿಸಿದ್ದು, ನಷ್ಟ ಸಂಭವಿಸಿದೆ ಎಂದಿದ್ದಾರೆ.
ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ. ಕಳೆದ 1 ತಿಂಗಳಿಂದ ಕಾಡಾನೆಗಳು ಈ ಭಾಗದ ಪಾನಂಡ್ರಾ, ಅಣ್ಣಾಮಲೈ, ಎಮ್ಮೆಗುಂಡಿ, ನಟ್ಲಿ ಬಿ, ಹರದೂರು, ಪಣ್ಯ ತೋಟಗಳಲ್ಲಿ ಬೀಡುಬಿಟ್ಟಿದ್ದು 4 ವರ್ಷದ ರೋಬಸ್ಟಾ ಮತ್ತು ಅರೇಬಿಕಾ ಕಾಪಿ ಗಿಡಗಳನ್ನು ಧ್ವಂಸಗೊಳಿಸಿದೆ ಎಂದು ಮಾಲಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಅಂಜುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರುವದಕ್ಕೂ ಭಯ ಪಡುತ್ತಿದ್ದಾರೆ. ರಾತ್ರಿ ವೇಳೆ ಸುಂಟಿಕೊಪ್ಪದಿಂದ ಮಾದಾಪುರ ಕಡೆಗೆ ಹಲವಾರು ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಆನೆ ಉಪಟಳದಿಂದ ತೊಂದರೆ ತಪ್ಪಿದಲ್ಲ. ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಯವರು ಇದೇ ಧೋರಣೆ ಮುಂದುವರಿಸಿದಲ್ಲಿ ಕೃಷಿಕರು ಮತ್ತು ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.