ಗೋಣಿಕೊಪ್ಪಲು, ಆ. 22: ದ.ಕೊಡಗಿನ ಕಿರುಗೂರು, ಬಾಳೆಲೆ ಮತ್ತು ಕಾರ್ಮಾಡು ಪರಿಹಾರ ಕೇಂದ್ರಗಳಿಗೆ ಇತ್ತೀಚೆಗೆ ವೀರಾಜಪೇಟೆ ಜೆಎಂಎಫ್‍ಸಿ ಮತ್ತು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು. ಕಿರುಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಹಾರ ಕೇಂದ್ರದಲ್ಲಿ ಅಲ್ಲಿನ ಹೊನ್ನಿಕೊಪ್ಪದ ಕೀರೆಹೊಳೆಕೆರೆ ಪೈಸಾರಿಯ ಸುಮಾರು 16 ಕುಟುಂಬದ 38 ಮಂದಿ ಆಶ್ರಯ ಪಡೆದಿದ್ದು, ನಿರಾಶ್ರಿತರನ್ನು ಉದ್ಧೇಶಿಸಿ ಮಾತನಾಡಿದ ನ್ಯಾ.ಜಯಪ್ರಕಾಶ್ ಅವರು, ಇನ್ನು ಮುಂದೆ ಹೊಳೆದಡ, ನದಿದಡದಲ್ಲಿ ವಸತಿ ನಿರ್ಮಾಣ ಮಾಡಿಕೊಂಡು ವಾಸಿಸುವದು ಅಪಾಯಕಾರಿ ಮತ್ತು ಕಾನೂನು ಬಾಹಿರ. ಇದೀಗ ಕೀರೆಹೊಳೆ ಪ್ರವಾಹದಿಂದ ನಿರಾಶ್ರಿತರಾದ ಕುಟುಂಬ ಗ್ರಾ.ಪಂ., ಕಂದಾಯ ಇಲಾಖೆ ಹಾಗೂ ಸರ್ಕಾರದ ಸವಲತ್ತು ಹೊಂದಿಕೊಂಡು ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವದು ಉತ್ತಮ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪಿ. ಬೋಜಿ, ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್, ಗ್ರಾ.ಪಂ. ಉಪಾಧ್ಯಕ್ಷ ಹೆಚ್.ವಿ. ಪ್ರಕಾಶ್, ನೋಡೆಲ್ ಅಧಿಕಾರಿ ರಾಜಮ್ಮ, ಗ್ರಾ.ಪಂ. ಸದಸ್ಯರು, ಆಶಾ ಕಾರ್ಯಕರ್ತರು, ಪಿಡಿಓ, ಕಂದಾಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಬಾಳೆಲೆ ಪರಿಹಾರ ಕೇಂದ್ರ

ಬಾಳೆಲೆ ಪರಿಹಾರ ಕೇಂದ್ರವನ್ನು ಅಲ್ಲಿನ ದೋಣಿಕಡವು ರಸ್ತೆಯಲ್ಲಿ ಇರುವ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿದ್ದು ಸುಮಾರು 41 ಮಂದಿ ದೇವನೂರು, ನಲ್ಲೂರು, ಪೆÇನ್ನಪ್ಪಸಂತೆ ವ್ಯಾಪ್ತಿಯ ನಿರಾಶ್ರಿತರು ಆಶ್ರಯ ಪಡೆದಿರುವದು ಕಂಡು ಬಂತು. ವಸತಿ ನಿಲಯದಲ್ಲಿ ಹಾಸಿಗೆ ಇದ್ದ ಹಿನ್ನೆಲೆ ಇಲ್ಲಿ ಸರ್ಕಾರ ದಿಂದ ನೀಡಲಾದ ಚಾಪೆಯನ್ನು ನೀಡಿರಲಿಲ್ಲ ಎನ್ನಲಾಗಿದೆ. ಬಾಳೆಲೆಯ ಆಯುಷ್ ವೈದ್ಯರಾದ ಡಾ. ಪ್ರತಾಪ್ ನಿರಾಶ್ರಿತರಿಗೆ ಸೂಕ್ತ ವೈದ್ಯಕೀಯ ಸೇವೆ ಸಲ್ಲಿಸಿದ್ದರು. ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಕಾಂಡೇರ ಕುಸುಮಾ ಶೇಖರ್, ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಪರಿಹಾರ ಕೇಂದ್ರದಲ್ಲಿ ಸುಶೀಲಾ, ಚಿಕ್ಕದೇವು ಮುಂತಾದವರು ನಿರಾಶ್ರಿತರಿಗೆ ಪೂರಕ ನೆರವು ಕಲ್ಪಿಸಿದರು. ನ್ಯಾ. ಜಯಪ್ರಕಾಶ್ ಅವರು ಇದೇ ಸಂದರ್ಭ ನಿರಾಶ್ರಿತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ನಿಟ್ಟೂರು ಪರಿಹಾರ ಕೇಂದ್ರ

ನಿಟ್ಟೂರು ಗ್ರಾ.ಪಂ.ಪರಿಹಾರ ಕೇಂದ್ರವನ್ನು ಕಾರ್ಮಾಡುವಿನ ಕರ್ನಾಟಕ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಗಿರಿಜನ ಆಶ್ರಮ ಶಾಲೆಯಲ್ಲಿ ತೆರೆಯಲಾಗಿದ್ದು ಒಟ್ಟು 98 ನಿರಾಶ್ರಿತರು ನೋಂದಾವಣೆ ಮಾಡಿಕೊಂಡಿದ್ದು, ನ್ಯಾಯಾಧೀಶರ ಭೇಟಿ ಸಂದರ್ಭ 94 ಮಂದಿ ಆಶ್ರಯ ಪಡೆದಿರುವದು ಕಂಡು ಬಂತು.

ಸುಮಾರು 32 ಕುಟುಂಬದ 98 ಸದಸ್ಯರಲ್ಲಿ ಕುಂಬಾರಕಟ್ಟೆ ಗಿರಿಜನ ಕಾಲೋನಿಯ ಅಧಿಕ ಮಂದಿ, ಅವರ ಮನೆಗೆ ಬಂದಿದ್ದ ನೆಂಟರು (ವಲಸಿಗರು) ಹಾಗೂ ಕಾರ್ಮಾಡುವಿನ ಒಂದು ಕುಟುಂಬ ಲಕ್ಷ್ಮಣ ತೀರ್ಥ ಪ್ರವಾಹದಿಂದಾಗಿ ಸಂತ್ರಸ್ತರಾಗಿ ಆಶ್ರಯ ಪಡೆದಿದ್ದರು.

ಬಾಳೆಲೆ ವಿಜಯಲಕ್ಷ್ಮಿ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಕರಾದ ಪಿ. ಪ್ರಭುಕುಮಾರ್ ಅವರು ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಮತ್ತು ಸದಸ್ಯರು ಗ್ರಾ.ಪಂ. ಮೂಲಕ ಅಗತ್ಯ ನೆರವು ಕಲ್ಪಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಚಿಟ್ಟಿಯಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ, ಪ್ರಕಾಶ್, ಚೆಕ್ಕೇರ ಸೂರ್ಯ ಅಯ್ಯಪ್ಪ, ಕೋಟ್ರಂಗಡ ಮಂಜುನಾಥ್, ತಿರುನೆಲ್ಲಿಮಾಡ ಪೂಣಚ್ಚ ಮುಂತಾದವರು ವೈಯಕ್ತಿಕವಾಗಿ ನಿರಾಶ್ರಿತರಿಗೆ ನೆರವು ಕಲ್ಪಿಸಿದ್ದರು.

ನಿರಾಶ್ರಿತರ ಸಮಸ್ಯೆ ಆಲಿಸಿದ ನ್ಯಾ. ಜಯಪ್ರಕಾಶ್ ಅವರು ಅಲ್ಲಿನ ವಸತಿ ಶಾಲೆಯ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿ ಮಕ್ಕಳ ಕಾನೂನು ಬಗ್ಗೆ ಅರಿವು ಮೂಡಿಸಿದರು.

ನಿಟ್ಟೂರು ಗ್ರಾಮದ ನಿರಾಶ್ರಿತ 32 ಕುಟುಂಬಗಳಿಗೆ ನೋಡೆಲ್ ಅಧಿಕಾರಿ ಮತ್ತು ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅವರವರ ಮನೆಗೆ ತೆರಳಿ ತಲಾ 10 ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು.

-ಟಿ.ಎಲ್.ಎಸ್.