ಮಡಿಕೇರಿ, ಆ. 16: ಕಳೆದ ವಾರ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ನಾಗರಿಕರು ಸಂಕಷ್ಟ ಎದುರಿಸುವಂತಾಯಿತು. ಆ ಸಂದರ್ಭ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನ ಜಾನುವಾರು ರಕ್ಷಣೆ, ಆಸ್ತಿ ಪಾಸ್ತಿ ರಕ್ಷಣೆ ಮಾಡುವಲ್ಲಿ ಶ್ರಮಿಸಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಸುಮಾರು 800 ಕ್ಕೂ ಹೆಚ್ಚು ಜನರು, 20ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಅಧಿಕಾರಿ ಪಿ. ಚಂದನ್ ಮಾಹಿತಿ ನೀಡಿದ್ದಾರೆ. ಕದನೂರು ಗ್ರಾಮದ ಬಳಿ 240ಕ್ಕೂ ಹೆಚ್ಚು ಜನರ ರಕ್ಷಣೆ, ತೋರ ಗ್ರಾಮದಲ್ಲಿ 60 ಮಂದಿಯನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಕುಶಾಲನಗರದ ಕುವೆಂಪು ಮತ್ತು ಸಾಯಿ ಬಡಾವಣೆಯಲ್ಲಿ 100 ಕ್ಕೂ ಹೆಚ್ಚು ಜನರ ಸ್ಥಳಾಂತರ, ಗಂಧದ ಕೋಟೆ ಮತ್ತು ಗುಡ್ಡೆಹೊಸೂರು ಬಳಿ ಕೆಟ್ಟುನಿಂತ ಬಸ್‍ನ್ನು ಪೊಲೀಸರ ಜೊತೆ ಸೇರಿ ರಕ್ಷಣೆ, ಕಾಲೂರು, ಗಾಳಿಬೀಡು, ಅಬ್ಬಿಫಾಲ್ಸ್ ರಸ್ತೆ, ರಾಜಾಸೀಟು, ಕೋಟೆ ಆವರಣ, ವೀರಾಜಪೇಟೆ-ಹಾಕತ್ತೂರು ರಸ್ತೆ ಮತ್ತಿತರ ಕಡೆಗಳಲ್ಲಿ ಮರಗಳನ್ನು ತೆರವುಗೊಳಿಸಿರುವದು, ಭಾಗಮಂಡಲದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ, ಹೊದವಾಡ ಮತ್ತು ಬಲಮುರಿಯಲ್ಲಿ ಸಂತ್ರಸ್ತರನ್ನು ರಕ್ಷಣೆ ಹೀಗೆ ಹಲವು ಕಾರ್ಯ ಚಟುವಟಿಕೆಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಹಲವು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಚಂದನ್ ಮಾಹಿತಿ ನೀಡಿದ್ದಾರೆ.