ಸಿದ್ದಾಪುರ, ಆ. 13: ಸಿದ್ದಾಪುರ - ನೆಲ್ಯಹುದಿಕೇರಿ- ಕರಡಿಗೋಡು - ಗುಹ್ಯ, ಕುಂಬಾರಗುಂಡಿ, ಕೊಂಡಂಗೇರಿ ವ್ಯಾಪ್ತಿಯಲ್ಲಿ ನೀರಸ ಮೌನ - ದುಃಖ, ದುಗುಡಗಳು; ಮುಂದೇನು ಎಂಬ ಚಿಂತೆ, ಜೀವನ ಕಟ್ಟಿಕೊಳ್ಳುವ ಬಗ್ಗೆ ಆತಂಕಗಳು ಮನೆಮಾಡಿವೆ. ಗ್ರಾಮಗಳಲ್ಲಿ ಮೌನ ಸಂಪೂರ್ಣ ಆವರಿಸಿದೆ.
ಮಳೆ ಕೊಂಚ ಬಿಡುವು ಕೊಟ್ಟಿದೆ. ನೀರು ಇಳಿಮುಖಗೊಳ್ಳುತ್ತಿದೆ. ಮನೆಗಳು ಕುಸಿದಿವೆ. ಮತ್ತಷ್ಟು ಮನೆಗಳು ಕುಸಿಯುವ ಹಂತದಲ್ಲಿವೆ. ಮನೆ ಕಳೆದುಕೊಂಡವರ ಸ್ಥಿತಿ ಹೇಳತೀರದು. ಇನ್ನೊಂದೆಡೆ ಮನೆಯಲ್ಲಿದ್ದ ಸಾಮಗ್ರಿಗಳು ಮಣ್ಣು ಪಾಲಾಗಿವೆ. ಮನೆಗಳು ಬಿರುಕು ಬಿಟ್ಟಿವೆ. ಇರುವ ಮನೆಯಲ್ಲಿ ವಸ್ತುಗಳಿಗೆ, ದಾಖಲಾತಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮನೆ ಕಳೆದುಕೊಂಡ ಕುಟುಂಬಗಳು ಮನೆಯ ಮುಂಭಾಗದಲ್ಲಿ ನಿಂತು ಕಣ್ಣೀರು ಸುರಿಸುತ್ತಿದ್ದಾರೆ.
ಇದು ಈ ಬಾರಿಯ ಮಹಾಮಳೆಯಿಂದ ಪ್ರವಾಹದಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ಸಿದ್ದಾಪುರದ ಕರಡಿಗೋಡು, ಗುಹ್ಯ, ಕಕ್ಕಟ್ಟುಕಾಡು, ಕೂಡುಗದ್ದೆ ಹಾಗೂ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದ ಕಾಡು, ಬರಡಿ, ಕುಂಬಾರಗುಂಡಿಯಲ್ಲಿ ನದಿದಡದ ಸಮೀಪ ವಾಸವಾಗಿದ್ದ ನಿವಾಸಿಗಳ ಗೋಳು. ಕಳೆದ ಒಂದು ವಾರಗಳಿಂದ ಸುರಿಯುತ್ತಿದ್ದ ಮಹಾಮಳೆಗೆ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿದು ಪ್ರವಾಹ ಏರಿಕೆಯಾಗಿ ಸಿದ್ದಾಪುರದ ಕರಡಿಗೋಡು, ಗುಹ್ಯ, ಕಕ್ಕಟ್ಟುಕಾಡುವಿನಲ್ಲಿ 300ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದವು. ಮಹಾಮಳೆಗೆ ಸಿಲುಕಿ ಪ್ರವಾಹದಿಂದಾಗಿ ಕರಡಿಗೋಡು ನದಿದಡದ 40ಕ್ಕೂ ಅಧಿಕ ಮನೆಗಳು ಕುಸಿದು ನೆಲಸಮವಾಗಿವೆ. 25ಕ್ಕೂ ಅಧಿಕ ಮನೆಗಳು ಮುಳುಗಡೆಗೊಂಡು ಸಂಪೂರ್ಣ ಹಾನಿಯಾಗಿವೆ. ನೂರಾರು ಮನೆಗಳು ಜಲಾವೃತ ಗೊಂಡು ವಾಸಕ್ಕೆ ಯೋಗ್ಯವಿಲ್ಲದಂತಹ ಸ್ಥಿತಿಯಲ್ಲಿವೆ. ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿ 25ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿವೆ. ಹಲವಾರು ಮನೆಗಳು ಹಾನಿಯಾಗಿವೆ. ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನಲ್ಲಿ 10ಕ್ಕೂ ಅಧಿಕ ಮನೆಗಳು ನೆಲಸಮ ಗೊಂಡು ಹಲವಾರು ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ 25ಕ್ಕೂ ಅಧಿಕ ಮನೆಗಳು ನೆಲಸಮ ಗೊಂಡು ಹಲವಾರು ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಬರಡಿಯಲ್ಲಿ 13 ಮನೆಗಳು ನೆಲಸಮಗೊಂಡಿದ್ದು, 60ಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಗೊಳ ಗಾಗಿವೆ. ಕುಂಬಾರಗುಂಡಿಯಲ್ಲಿ 10ಕ್ಕೂ ಅಧಿಕ ಮನೆಗಳು ನೆಲಸಮ ಗೊಂಡಿದ್ದು, 30ಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಇದಲ್ಲದೆ, ನದಿದಡದ ಸುತ್ತಮುತ್ತಲಿನ ನೂರಾರು ಎಕರೆ ಕಾಫಿ ತೋಟಗಳು, ಭತ್ತದ ಕೃಷಿ ಮಾಡಿದ ಕೃಷಿ ನೀರಿನಲ್ಲಿ ಮುಳುಗಡೆಗೊಂಡು ಇನ್ನಿತರ ಸಾಮಗ್ರಿಗಳು ನೀರು ಪಾಲಾಗಿವೆ.
ಮಹಾ ಮಳೆಯಿಂದಾಗಿ ಪ್ರವಾಹ ದಿಢೀರನೇ ಏರಿಕೆಗೊಂಡ ಹಿನ್ನೆಲೆಯಲ್ಲಿ ನೂರಾರು ಮಂದಿ ನದಿ ದಡದ ನಿವಾಸಿಗಳು ಉಟ್ಟ ಬಟ್ಟೆಯಲ್ಲಿ ಓಡಿ ಬಂದು ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ. ಕೆಲವರ ವಾಹನಗಳು ನೀರಿನಲ್ಲಿ ಮುಳುಗಿ ದುರಸ್ತಿಗೀಡಾಗಿವೆ. ನೆಲ್ಯಹುದಿಕೇರಿ ನದಿದಡದ ನಿವಾಸಿಯೊಬ್ಬರು ಸಾಕಿದ್ದ 7 ಆಡುಗಳು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುತ್ತವೆ. ಇದಲ್ಲದೆ ಮನೆ ಗೊಳಗಿನ ಬೆಲೆಬಾಳುವ ಸಾಮಗ್ರಿಗಳು ಮಣ್ಣು ಹಿಡಿದು ಹಾನಿಯಾಗಿವೆ. ಸಾಕಷ್ಟು ನಿವಾಸಿಗಳ ಮಕ್ಕಳ ಶಾಲಾ ಬ್ಯಾಗ್, ಪಠ್ಯಪುಸ್ತಕ, ಬಟ್ಟೆ ಸಮವಸ್ತ್ರ ನೀರು ಪಾಲಾಗಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ದಿಕ್ಕು ತೋಚ ದಂತಾಗಿದೆ. -ವಾಸು ಸಿದ್ದಾಪುರ.