ಮಡಿಕೇರಿ, ಆ. 10: ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ ನಂತರ ಕೈಗಾರಿಕಾ ಬಡಾವಣೆ ಯಲ್ಲಿ ಆರಂಭಿಸಿರುವ ಏಕಮುಖ ಸಂಚಾರ ವ್ಯವಸ್ಥೆಯಿಂದ ಸಮಸ್ಯೆಗಳು ಎದುರಾಗಿದೆ ಎಂದು ಈ ಭಾಗದ ವರ್ತಕರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ಭೇಟಿಯಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ

ಪೀಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ. ಆಚಾರ್ಯ ನೇತೃತ್ವದಲ್ಲಿ ಡಿಸಿ ಹಾಗೂ ಎಸ್‍ಪಿಯನ್ನು ಭೇಟಿಯಾದ ವರ್ತಕರು ಏಕಮುಖ ಸಂಚಾರ ವ್ಯವಸ್ಥೆಯ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದರು.

ಮಡಿಕೇರಿಯ ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ಮೊದಲಿ ನಿಂದಲೂ ಕೊಹಿನೂರು ರಸ್ತೆಯಿಂದ ಪ್ರೆಸ್ ಕ್ಲಬ್ ಕಡೆಗೆ ವಾಹನಗಳು ಸಂಚರಿಸುತ್ತಿದ್ದವು. ಇದರಿಂದಾಗಿ ಕೈಗಾರಿಕಾ ಬಡಾವಣೆಯಲ್ಲಿರುವ ವ್ಯಾಪಾರ¸್ಥÀರಿಗೆ, ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರಿಗೆ ಹಾಗೂ ನಾಗರಿಕರಿಗೆ ಅನುಕೂಲಕರ ವಾತಾವರಣವಿತ್ತ್ತು. ಆದರೆ ಇತ್ತೀಚೆಗೆ ಈ ಏಕಮುಖ ಸಂಚಾರವನ್ನು ಬದಲಾಯಿಸಿ ಪತ್ರಿಕಾ ಭವನದಿಂದ ಕೊಹಿನೂರು ರಸ್ತೆ ಕಡೆಗೆ ವಾಹನ ಸಂಚಾರ ಸಂಚರಿಸುವಂತೆ ಮಾಡಲಾಗಿದ್ದು, ಇದರಿಂದ ಸಮಸ್ಯೆಯಾಗಿದೆ ಎಂದರು.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಡೆಯಿಂದ ಪ್ರಯಾಣಿಸುವಾಗ ವಾಹನಗಳಿಗೆ ಕೊಹಿನೂರು ರಸ್ತೆಯಲ್ಲಿ ಬಲ ತಿರುವು ಇಲ್ಲ. ಎಡಕ್ಕೆ ಚಲಿಸಿದಾಗ ಗೌಳಿಬೀದಿಯ ಎಲ್ಲಾ ರಸ್ತೆಗಳು ಕಿರಿದಾಗಿದ್ದು, ಪ್ರವಾಸಿ ವಾಹನಗಳು ಇನ್ನಿತರ ವಾಹನಗಳಿಗೆ ಚಲಿಸಲು ತುಂಬಾ ತೊಂದರೆಯಾಗುತ್ತಿದೆ ಮತ್ತು ಪ್ರವಾಸಿ ವಾಹನಗಳು ಯಾವ ಕಡೆಗೆ ಹೋಗಬೇಕೆಂದು ತಿಳಿಯದೆ ಪ್ರತಿ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸಿ ಪ್ರವಾಸಿ ತಾಣಗಳ ಮಾರ್ಗದ ಬಗ್ಗೆ ವಿಚಾರಿಸುವದರಿಂದ ವಾಹನ ದಟ್ಟಣೆ ಹೆಚ್ಚಾಗಿ ಇತರ ವಾಹನ ಚಾಲಕರು ಹಾಗೂ ಪಾದಾಚಾರಿಗಳು ಪರದಾಡುವಂತಾಗಿದೆ ಎಂದರು.

ಸ್ಥಳೀಯ ಪ್ರಯಾಣಿಕರು, ವಯಸ್ಸಾದವರು ಖಾಸಗಿ ಬಸ್‍ನಲ್ಲಿ ಆಸನ ಹಿಡಿಯ ಬೇಕಾದರೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಡೆಯಿಂದ ಹೋಗಲು ಆಟೋ ರಿಕ್ಷಾಗಳಿಗೆ ಅತಿ ಹೆಚ್ಚು ಹಣ ನೀಡಬೇಕಾಗಿದೆ. ಆದುದರಿಂದ ಈ ಹಿಂದೆ ಇದ್ದಂತೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಕೊಹಿನೂರು ರಸ್ತೆಯಿಂದ ಪತ್ರಿಕಾ ಭವನದ ಕಡೆಗೆ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಖಾಸಗಿ ಬಸ್‍ಗಳು ಮೊದಲಿನಂತೆ ಕಾವೇರಿ ಹಾಲ್ ಮೂಲಕ ಕಾಲೇಜು ರಸ್ತೆಗೆ ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದಿಂದ ಕೊಹಿನೂರು ರಸ್ತೆಗೆ ಬಂದು ಮುಂದಕ್ಕೆ ಪ್ರಯಾಣಿಸಿದಾಗ ಸಾರ್ವಜನಿಕರಿಗೆ, ಕೈಗಾರಿಕಾ ಬಡಾವಣೆಯವರಿಗೆ, ಪ್ರವಾಸಿಗರಿಗೆ, ವ್ಯಾಪಾರಸ್ಥರಿಗೆ ಅಲ್ಲದೆ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವವರೆಲ್ಲರಿಗೂ ಅನುಕೂಲವಾಗುತ್ತದೆ.

ನೂತನ ಖಾಸಗಿ ಬಸ್ ನಿಲ್ದಾಣದಿಂದ ಕಾಲೇಜು ರಸ್ತೆಗೆ ತೆರಳುವಾಗ ಕಾವೇರಿ ಹಾಲ್‍ನ ಎದುರು ಯಾವದೇ ವಾಹನಗಳಿಗೂ ನಿಲುಗಡೆಗೆ ಅವಕಾಶ ನೀಡಬಾರದು, ಒಂದು ವೇಳೆ ನಿಲುಗಡೆಗೆ ಅವಕಾಶ ನೀಡಿದರೆ ಬಸ್ ಚಾಲಕರಿಗೆ ಕಷ್ಟವಾಗುತ್ತದೆ. ಕಾಲೇಜು ರಸ್ತೆಯಲ್ಲಿ ಮೋರ್ ಎದುರಿನ ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ಬದಲಾಯಿಸಿ ಆ ಜಾಗದಲ್ಲಿ ಆಟೋ ರಿಕ್ಷಾಗಳನ್ನು ಪಾರ್ಕ್ ಮಾಡುವಂತಾಗಬೇಕು. ಆಗ ಕಾಲೇಜು ರಸ್ತೆ ಮೂಲಕ ಬಂದ ಬಸ್‍ಗಳಿಗೆ ಸ್ಟೆಂಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ಸುಲಲಿತವಾಗಿ ತಿರುವು ಪಡೆಯಲು ಅನುಕೂಲ ವಾಗುತ್ತದೆ. ಈ ಪರಿವರ್ತನೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ವರ್ತಕರಾದ ಕ್ಲೆಮೆಂಟ್ ರೈಗೊ, ಪ್ರಶಾಂತ್ ಹಾಗೂ ಇತರರು ಹಾಜರಿದ್ದರು.