ವೀರಾಜಪೇಟೆ, ಜು, 27: ಆಷಾಡ ಮಾಸದಲ್ಲಿ ಸಿಗುವಂತಹÀ ಆಹಾರ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ಗೌಡ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವತಿಯಿಂದ ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಂಜನೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ‘ಪೌಷ್ಟಿಕ ಆಹಾರ ಮೇಳ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿzದರು. ಅಡುಗೆ ಮಾಡುವದು ಒಂದು ಕಲೆ. ಬೇರೆ ಬೇರೆ ಆಹಾರಗಳನ್ನು ತಯಾರು ಮಾಡುವದರಲ್ಲಿ ಮಹಿಳೆಯರ ಪಾತ್ರ ಮುಖ್ಯ. ಮರೆತುಹೋದ ಅಡುಗೆಗಳನ್ನು ಮತ್ತೆ ನೆನಪು ಮಾಡಿಕೊಳ್ಳುವ ಮೂಲಕ ಈ ಆಷಾಢ ಮಾಸದಲ್ಲಿ ಮತ್ತಷ್ಟು ಚಂದವಾಗಿ ಅಡುಗೆ ಹಾಗೂ ವಿವಿಧ ಪದಾರ್ಥಗಳನ್ನು ಮಾಡಬಹುದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಧೋಶ್ ಪೂವಯ್ಯ ಅವರು ಮಾತನಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು. ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸುವದರಿಂದ ದೇಹ ಮತ್ತು ಮನಸು ಎರಡು ಸುಸ್ಥಿತಿಯಲ್ಲಿರುತ್ತದೆ. ಪ್ರಪಂಚದಲ್ಲಿ ಅಣಬೆಯಂಥ ಇನ್ಸುಲಿನ್ ಬೇರೊಂದಿಲ್ಲ ಎಂದು ಆಹಾರ ಕುರಿತ ಸಮಗ್ರ ಮಾಹಿತಿ ನೀಡಿದರು.

ಅತಿಥಿಯಾಗಿ ಶ್ರೀ ಬಾಲಂಜನೇಯ ದೇವಾಲಯದ ಬಾಬಾ ಶಂಕರ್ ಅವರು ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಸದಸ್ಯೆ ರತ್ನಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ರತ್ನಾ ಮೈಪಾಲ, ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ, ಸೇವಾ ಪ್ರತಿನಿಧಿ ಪದ್ಮಾ ಇತರರು ಉಪಸ್ಥಿತರಿದ್ದರು.

ಅಂಬಿಕಾ ನಿರೂಪಿಸಿ, ಜಾಜಿ ಸ್ವಾಗತಿಸಿದರು. ಈ ಸಂದರ್ಭ ಬಗೆ ಬಗೆಯ ಖಾದ್ಯ ತಯಾರಿಸಿದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಯೋಜನೆಯ ಸದಸ್ಯರ ಕೌಶಲ್ಯದ ಬಗ್ಗೆ ಜಯಂತಿ ವಿವರಿಸಿದರು.