ಸೋಮವಾರಪೇಟೆ,ಜು.21: ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿರಿಗೇರಿ ಯರಿಸ್ವಾಮಿ ಅವರ "ಶಿಲ್ಪ" ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶನಿವಾರಸಂತೆ ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಜಗತ್ತಿನ ತಂತ್ರಜ್ಞಾನ ಯುಗದಲ್ಲಿ ಪುಸ್ತಕಗಳ ಬಳಕೆ ಕಡಿಮೆಯಾಗಿದೆ. ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು. ಬದುಕಿನಲ್ಲಿ ಗಳಿಸಿದ್ದು ಯಾವದೂ ನಮ್ಮದಲ್ಲ. ಅಹಂಕಾರದ ಬದುಕಿಗೆ ಬೆಲೆಯಿಲ್ಲ. ಇನ್ನೊಬ್ಬರೊಂದಿಗೆ ಸೇರಿ ಬದುಕು ಸಾಗಿಸಬೇಕು. ಈ ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸ್ವಾಮೀಜಿ ಅಭಿಪ್ರಾಯಿಸಿದರು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಮೈಸೂರಿನ ಕವಯತ್ರಿ ಡಾ.ಲತಾ ರಾಜಶೇಖರ್ ಮಾತನಾಡಿ, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡಕ್ಕೆ ಮೂರನೆ ಸ್ಥಾನವಿದ್ದು, ಲಿಪಿಗಳ ರಾಣಿ ಎಂದೇ ಕರೆಸಿಕೊಂಡಿದೆ. ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಜಗತ್ತಿನ ಶೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಇದೊಂದು ವೈಜ್ಞಾನಿಕ ಭಾಷೆಯಾಗಿರುವದರಿಂದ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು.
ಇಂಗ್ಲೀಷರು ದೇಶ ಬಿಟ್ಟು 7 ದಶಕಗಳೇ ಕಳೆದಿವೆ. ಆದರೆ ಇಂಗ್ಲೀಷ್ ದಾಸ್ಯ ಬಿಟ್ಟು ಹೋಗಿಲ್ಲ. ಕನ್ನಡವನ್ನು ತಪ್ಪಾಗಿ ಮಾತನಾಡುವದೇ ಹೆಮ್ಮೆಯ ವಿಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಾರ್ಷಿಕವಾಗಿ ನಾಲ್ಕೈದು ಸಾವಿರದಷ್ಟು ಕನ್ನಡ ಪುಸ್ತಕಗಳು ಬಿಡುಗಡೆಯಾಗುತ್ತಿವೆ. 21ನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಸಮೃದ್ಧಿ ಕಾಣುವ ವಿಶ್ವಾಸ ಮೂಡುತ್ತಿದೆ. ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ತಾಲೂಕು ಕ.ಸಾ.ಪ.ಮಾಜಿ ಅಧ್ಯಕ್ಷ ಎಸ್.ಸಿ.ರಾಜಶೇಖರ್, ಲೇಖಕ ಯರಿಸ್ವಾಮಿ, ಕವಯತ್ರಿ ಡಾ.ಲತಾ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಎಸ್.ಮಹೇಶ್ ಇದ್ದರು. ಪರಿಷತ್ನ ಕಾರ್ಯದರ್ಶಿ ಪ್ರೇಮ್ನಾಥ್ ಸ್ವಾಗತಿಸಿ, ಪತ್ರಕರ್ತ ಭಾಸ್ಕರ್ ನಿರೂಪಿಸಿ, ಪ.ಪಂ. ಸದಸ್ಯೆ ಶೀಲಾ ಡಿಸೋಜ ವಂದಿಸಿದರು.