ಶನಿವಾರಸಂತೆ, ಜು. 19: ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ಆಷಾಢ ಏಕಾದಶಿ ಹಬ್ಬವನ್ನು ಆಚರಿಸ ಲಾಯಿತು. ಬೆಳಿಗ್ಗೆ ದೇವಾಲಯ ಆವರಣವನ್ನು ಅಲಂಕರಿಸಿ, ಪ್ರಾಂಗಣದಲ್ಲಿ ಸುಂದರ ರಂಗೋಲಿ ಬಿಡಿಸಿ ಹಣತೆಯನ್ನು ಬೆಳಗಿಸ ಲಾಯಿತು. ರುಕ್ಮಿಣಿ ಪಾಂಡುರಂಗ ದೇವರಿಗೆ ವಿಶೇಷ ಅಭಿಷೇಕ ಮಾಡಲಾಯಿತು. ಸಿಂಪಿ ಸಮಾಜದ ಕುಟುಂಬಸ್ಥರೊಂದಿಗೆ ಕೊಡ್ಲಿಪೇಟೆ, ಶನಿವಾರಸಂತೆ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಬಂದ ಇತರ ಜಾತಿ ಜನಾಂಗದ ನೂರಾರು ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಭಜನೆ ಗೀತೆಗಳನ್ನು ಹಾಡಿ ರಂಜಿಸಿದರು.