ಕುಶಾಲನಗರ, ಜು. 14: 7ನೇ ಹೊಸಕೋಟೆ-ಕಂಬಿಬಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ಥಿಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಗುಂಡಿಬಿದ್ದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಭಾನುವಾರ ಪ್ರತಿಭಟನೆ ನಡೆಸಿದರು.

ಗ್ರಾಮ ವ್ಯಾಪ್ತಿಯ 5 ಕಿಮೀ ರಸ್ತೆ ಸಂಪೂರ್ಣ ಕಿತ್ತುಬಂದಿದ್ದು ಅಲ್ಲಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡು ರಸ್ತೆ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟಾಗಿದೆ. ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಸೂಕ್ತ ಕ್ರಮಕೈಗೊಳ್ಳದೆ ಸದಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ರಸ್ತೆ ಅವ್ಯವಸ್ಥೆ ಒಂದೆಡೆಯಾದರೆ ಈ ಭಾಗದಲ್ಲಿ ನಿತ್ಯ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದಾರೆ. ವರ್ಷಾನುಗಟ್ಟಲೆ ನಿರ್ವಹಣೆ ಕಾಣದ ರಸ್ತೆಯ ಎರಡೂ ಭಾಗದಲ್ಲಿ ಕಾಡು ಪೊದೆಗಳು ಆವರಿಸಿಕೊಂಡಿದೆ. ಬೀದಿ ದೀಪಗಳ ಕೊರತೆಯಿಂದ ರಾತ್ರಿ ಸಂಚಾರ ಜೀವಕ್ಕೆ ಸಂಚಕಾರ ಎಂಬಂತಾಗಿದೆ ಎಂದು ಗ್ರಾಮಸ್ಥರಾದ ಸಂತೋಷ್, ಸೌಮ್ಯ ತಮ್ಮ ಅಳಲು ತೋಡಿಕೊಂಡರು.

ಕಾಡು ಕಡಿಯಲು ಗ್ರಾಪಂಗೆ ಕೋರಿಕೊಂಡರೆ ಅರಣ್ಯ ಇಲಾಖೆಯತ್ತ ಬೆರಳು ಮಾಡಿ ತೋರಿಸುತ್ತಾರೆ, ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರೆ ಗ್ರಾಮಪಂಚಾಯ್ತಿಗೆ ಮಾಹಿತಿ ನೀಡಲು ತಿಳಿಸುತ್ತಾರೆ. ರಸ್ತೆ ದುಸ್ಥಿತಿಯಿಂದ ಆಟೋಗಳು, ಶಾಲಾ ವಾಹನಗಳು ಈ ಭಾಗಕ್ಕೆ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ಸೌಮ್ಯ ದೂರಿದರು.

ಸ್ವಾತಂತ್ರ್ಯ ಬಂದು 5 ದಶಕಗಳ ಬಳಿಕ ಗ್ರಾಮಕ್ಕೆ ಡಾಂಬರು ರಸ್ತೆ ಕಾಣುವಂತಾಯಿತು. ಆದರೆ ಇದೂ ಕೂಡ ಇದೀಗ ಕಿತ್ತು ಬಂದಿದ್ದು ಕಳೆದ 1 ದಶಕದಿಂದ ಈ ಭಾಗದ ಗ್ರಾಮಸ್ಥರು ಸುಗಮ ಸಂಚಾರಕ್ಕೆ ನಿತ್ಯ ಹರಸಾಹಸ ಪಡುತ್ತಿದ್ದಾರೆ ಎಂದು ಸಂತೋಷ್ ಆರೋಪಿಸಿದರು.

ಕೂಡಲೆ ಸಂಬಂಧಿಸಿದ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ. ಹಲವು ಸಮಸ್ಯೆಗಳಿಂದ ನಲುಗಿರುವ ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರಾದ ರತನ್, ಪುರುಷೋತ್ತಮ್, ಸವಿನ್, ಸುಜಿತ್, ಪ್ರಕಾಶ್, ಹರೀಶ್, ಗೌರಮ್ಮ, ರಾಧಾ, ಸುನಿಲ್, ರಾಧಾ ಮತ್ತಿತರರು ಆಗ್ರಹಿಸಿದ್ದಾರೆ.