ಮಡಿಕೇರಿ, ಜೂ. 11: ವಿವಿಧೆಡೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯೊಂದಿಗೆ ಗಿಡಗಳನ್ನು ನೆಟ್ಟು ಸಾಮೂಹಿಕ ಕಾರ್ಯಕ್ರಮ ನಡೆಸಲಾಯಿತು.
ಮೂರ್ನಾಡು: ಗಿಡ ನೆಟ್ಟು ಬೆಳೆಸುವದು ಮಾತ್ರ ಪರಿಸರ ಸಂರಕ್ಷಣೆಯಾಗುವದಿಲ್ಲ. ಈಗ ಇರುವ ಪ್ರಕೃತಿಯನ್ನು ಉಳಿಸಿಕೊಳ್ಳುವದು ಪರಿಸರ ಸಂರಕ್ಷಣೆಯ ಮಹತ್ತರ ಕಾರ್ಯವಾಗಿದೆ ಎಂದು ಕಾವೇರಿ ಟೈಮ್ಸ್ನ ಪ್ರಧಾನ ಸಂಪಾದಕ ಡಾ. ಬಲ್ಲಡಿಚಂಡ ನಂಜಪ್ಪ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಿರ್ದೇಶಕ ನಂದೇಟಿರ ರಾಜಾ ಮಾದಪ್ಪ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಉಪನ್ಯಾಸಕಿ ಬಿ.ಎನ್. ಮಮತ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಯು.ಸಿ. ಮಾಲತಿ ಉಪಸ್ಥಿತರಿದ್ದರು. ಎನ್ಎಸ್ಎಸ್ ವಿದ್ಯಾರ್ಥಿ ಕವನ ಪ್ರಾರ್ಥಿಸಿ, ಶ್ರೀರಕ್ಷ ಕಾರ್ಯಕ್ರಮ ನಿರೂಪಿಸಿ, ಯೋಜನಾಧಿಕಾರಿ ಯು.ಸಿ. ಮಾಲತಿ ಸ್ವಾಗತಿಸಿ, ಅಜಿತ್ ವಂದಿಸಿದರು.
ಮರಗೋಡು: ವಿಶ್ವ ಪರಿಸರ ದಿನವನ್ನು ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ದಿನದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಥಾ ನಡೆಸಿದರು.
ವಿದ್ಯಾಸಂಸ್ಥೆಯ ಆವರಣದಿಂದ ಹೊರಟ ಜಾಥಾವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್ ಉದ್ಘಾಟಿಸಿದರು. ಶಿಕ್ಷಕ ವೆಂಕಟೇಶ್ ನಾಯಕ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವು ಮೂಡಿಸಿದರು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಸ್ವಚ್ಛತಾ ಕಾರ್ಯ ಹಾಗೂ ಶ್ರಮದಾನ ನಡೆಸಲಾಯಿತು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೋಚನ ಲವಿನ್, ಕಾರ್ಯದರ್ಶಿ ಬಡುವಂಡ್ರ ದುಷ್ಯಂತ್, ನಿರ್ದೇಶಕರಾದ ಕೋಚನ ಅನೂಪ್, ಪಾರೆರ ಯತೀಶ್, ಪರಿಚನ ಶರತ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ಹೆಚ್.ವೈ. ಪುಟ್ಟರಾಜು, ಎಂ.ಪಿ. ವೀಣಾ, ಬಿ.ಬಿ. ಪೂರ್ಣಿಮ ಹಾಜರಿದ್ದರು.
ಮಡಿಕೇರಿ: ಗ್ರೀನ್ ಸಿಟಿ ಫೋರಂ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಜೊಸೇಫರ ಶಾಲೆಯಲ್ಲಿ ಪರಿಸರ ದಿನದ ಅಂಗವಾಗಿ ಗಿಡನೆಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಫೋರಂನ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ, ಜಿಲ್ಲೆಯಲ್ಲಿರುವ ಪ್ರತಿಯೊಬ್ಬರು ಒಂದೊಂದು ಗಿಡ ನೆಡುವ ಮೂಲಕ ಉತ್ತಮ ವಾತಾವರಣವನ್ನು ಸೃಷ್ಟಿಸಬೇಕೆಂದು ಕರೆ ನೀಡಿದರು. ಹಸಿರ ಪರಿಸರ ಸಮೃದ್ಧಿಯಾಗಿದ್ದರೆ ಮನುಷ್ಯನ ಆರೋಗ್ಯವು ಉತ್ತಮವಾಗಿರುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಫೋರಂ ವತಿಯಿಂದ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದು, ನಗರದ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಜಯಾಚಿಣ್ಣಪ್ಪ ತಿಳಿಸಿದರು. ಫೋರಂನ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ನಿರ್ದೇಶಕರುಗಳಾದ ಅಂಬೆಕಲ್ ನವೀನ್ ಕುಶಾಲಪ್ಪ, ಮೋಂತಿ ಗಣೇಶ್, ಮಹೇಶ್ ಜೈನಿ ಸೇರಿದಂತೆ ಪದಾಧಿಕಾರಿಗಳು, ಅರಣ್ಯಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕ ವೃಂದ ಹಾಜರಿದ್ದು, ಸಸಿ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣಗೊಳಿಸಿದರು.
ವೀರಾಜಪೇಟೆ: ವೀರಾಜಪೇಟೆಯಿಂದ ಮಾಕುಟ್ಟಕ್ಕೆ ರಕ್ಷಿತಾರಣ್ಯದ ಮಾರ್ಗವಾಗಿ ಸಾಗುವ ಅಂತರರಾಜ್ಯ ಹೆದ್ದಾರಿಯ ಇಕ್ಕೆಲದಲ್ಲಿನ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಾಕುಟ್ಟ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಸಂಗ್ರಹಿಸಿ ಸ್ವಚ್ಛಗೊಳಿಸಿದರು.ಕುಶಾಲನಗರ: ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಇಕೋ ಕ್ಲಬ್ ಹಾಗೂ ಕುಶಾಲನಗರದ ವಲಯ ಅರಣ್ಯ ಇಲಾಖಾ ಸಹಭಾಗಿತ್ವದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಅರಣ್ಯ ಇಲಾಖಾ ವತಿಯಿಂದ ಒದಗಿಸಲಾದ ಗಿಡಗಳನ್ನು ನೆಡುವದರ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಸ್ವಪ್ರೇರಣೆಯಿಂದ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಪಿ. ಚಂದ್ರಕಲಾ ಮಾತನಾಡಿ, ಉತ್ತಮ ಆರೋಗ್ಯವಂತ ಜೀವನಕ್ಕೆ ಉತ್ತಮ ಪರಿಸರ ಅತ್ಯಗತ್ಯ ಎಂದರು. ಮುಖ್ಯೋಪಾಧ್ಯಾಯ ಎಸ್.ಎಸ್. ಗೋಪಾಲ್ ಮಾತನಾಡಿ, ಪರಿಸರ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು.
ಇಕೋ ಕ್ಲಬ್ನ ಕಾರ್ಯದರ್ಶಿ ಚಂದ್ರಶೇಖರ್, ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯೋಗೇಶ್ ಅಧ್ಯಾಪಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಶಿಕ್ಷಕ ಕೆ. ಬಸವರಾಜ್ ನಿರೂಪಿಸಿ, ವಂದಿಸಿದರು.
ವೀರಾಜಪೇಟೆ: ನೆಲ, ಜಲ, ಗಾಳಿ ಎಲ್ಲವನ್ನು ಪಡೆದುಕೊಳ್ಳುವ ನಾವುಗಳು ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಗಳನ್ನು ನೆಡುವ ಮೂಲಕ ಮರಗಳನ್ನು ಬೆಳೆಸುವಂತಾಗಬೇಕು ಎಂದು ಓ.ಡಿ.ಪಿ. ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮೇನೆಜಸ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಿಳೋದಯ ಮಹಿಳಾ ಒಕ್ಕೂಟ ಓಡಿಪಿ ಸಂಸ್ಥೆ ವತಿಯಿಂದ ವೀರಾಜಪೇಟೆ ದೊಡ್ಡಟ್ಟಿಚೌಕಿ ಬಳಿಯ ಅಪ್ಪಯ್ಯ ಸ್ವಾಮಿ ರಸ್ತೆಯ ಸಮುದಾಯ ಭವನದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಸಗಳನ್ನು ಎಸೆಯದೇ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು. ಅಂಗನವಾಡಿ ಕಾರ್ಯಕರ್ತೆ ಗೀತಾ, ಮಹಿಳಾ ಒಕ್ಕೂಟದ ಅಧ್ಯಕ್ಷೆ ರೀಟಾ ಸಲ್ಡಾನಾ, ಓಡಿಪಿ ಕಾರ್ಯಕರ್ತೆ ರೀಟಾ ಜೋಸೆಫ್ ಹಾಗೂ ಸಂಸ್ಥೆಯ ಮೇರಿ ಅಗನೆಸ್, ಕಾವೇರಮ್ಮ, ಇಂದಿರ, ಭಾರತಿ, ಸುಶೀಲ, ಸದಸ್ಯರು ಹಾಜರಿದ್ದರು.
ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಮೀಪದ ಪಡಿಯಾಣಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು.
ಚಪ್ಪೆಂಡಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಚೆಟ್ಟಳ್ಳಿ: ವಿದ್ಯಾ ಕೇಂದ್ರ ಅನ್ವಾರುಲ್ ಹುದಾ ವೀರಾಜಪೇಟೆಯಲ್ಲಿ ಸ್ನೇಹ, ಸಹನೆ, ಸಂತೋಷದ ಈದುಲ್ ಫಿತರ್ ಆಚರಣೆಯೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಮುದರ್ರಿಸರಾದ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ಈದುಲ್ ನೇತೃತ್ವ ವಹಿಸಿದ್ದರು. ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಎಸ್ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಲಿಯಾಕತ್ ಅಲಿ ಹಾಗೂ ಸತ್ತಾರ್ ಇದ್ದರು.