ಮಡಿಕೇರಿ, ಜೂ.7 : ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಿನಿಂದ ಸುರಿದ ಬಾರಿ ಮಳೆಯಿಂದ ಜಲ ಪ್ರಳಯ ಉಂಟಾಗಿ ಇಲ್ಲಿ ಅತೀ ಹೆಚ್ಚು ಅನಾಹುತ ಆಗಿರುವದು ತಮಗೆ ತಿಳಿದ ವಿಷಯವಾಗಿದೆ. ಆದರೆ ಈಗ ಸರ್ಕಾರದಿಂದ ಮೋಡ ಬಿತ್ತನೆಗೆ ಮುಂದಾಗಿರುವದು ತಿಳಿದು ಬಂದಿದೆ.
ಒಂದೆಡೆ ಹವಾಮಾನ ಇಲಾಖೆಯು 2019ರ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳಬಹುದೆಂದು ಹಾಗೂ ಈ ಹಿಂದಿನಂತೆಯೇ ಜಲ ಪ್ರಳಯ ಉಂಟಾಗಬಹುದೆಂದು ಮುನ್ಸೂಚನೆ ನೀಡಿದ್ದು, ಈ ಸಮಯದಲ್ಲಿ ಮೋಡ ಬಿತ್ತನೆ ಮಾಡಿದ್ದಲ್ಲಿ ಇನ್ನೂ ಹೆಚ್ಚಾಗಿ ಮಳೆ ಬೀಳುವದರಿಂದ ಕಳೆದ ಸಾಲಿಗಿಂತ ಈ ಸಾಲಿಗೆ ಅತೀ ಹೆಚ್ಚು ಮಳೆ ಬಿದ್ದು, ಅನಾಹುತ ಹೆಚ್ಚಾಗುತ್ತದೆ. ಅಲ್ಲದೆ ಮೋಡ ಬಿತ್ತನೆಗೆ ಉಪಯೋಗಿಸುವ ರಾಸಾಯನಿಕವು ಸಸ್ಯ ಸಂಕುಲ, ಪ್ರಾಣಿ ಸಂಕುಲ ಮಾನವ ಹಾಗೂ ಮಣ್ಣಿನ ಮೇಲೆ ದುಷ್ಪರಿಣಾಮ ಬೀರುವದರಿಂದ ಕೊಡಗು ಜಿಲ್ಲೆಗೆ ಸೀಮಿತವಾಗುವಂತೆ ಮೋಡ ಬಿತ್ತನೆ ಕಾರ್ಯವನ್ನು ಕೈ ಬೀಡುವಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೋರಿದ್ದಾರೆ.