ಪೊನ್ನಂಪೇಟೆ, ಮೇ 31: ಶನಿವಾರದಂದು ದಕ್ಷಿಣ ಕೊಡಗಿನ ಬೇರಳಿನಾಡಿನ ಯಾವದೇ ಪ್ರದೇಶದಲ್ಲಿ ನೋಡಿದರೂ ಪಾರಣ ನಮ್ಮೆ (ಹಬ್ಬ) ವೇಷದಾರಿಗಳ ಸಾಂಪ್ರದಾಯಿಕ ನೃತ್ಯ ಸಾಮಾನ್ಯವಾಗಿರುತ್ತದೆ. ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಗ್ರಾಮದ ಪುರಾತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಅದನ್ನು ಜೀವಂತವಾಗಿರಿಸುವ ಪ್ರಯತ್ನದಲ್ಲಿ ಎಲ್ಲರೂ ಮಗ್ನರಾಗಿರುತ್ತಾರೆ. ಬೇರಳಿನಾಡಿದಾದ್ಯಂತ ಪಾರಣ ಹಬ್ಬದ ಕಲರವದಿಂದಾಗಿ ಬೇಡು ಹಬ್ಬಕ್ಕೆ ವಿಶೇಷ ಕಳೆ ಬರುತ್ತದೆ.
ಇತಿಹಾಸ ಪ್ರಸಿದ್ದ ಬೇರಳಿನಾಡಿನ ‘ಪಾರಣ ಬೋಡ್ನಮ್ಮೆ’ಗೆ ತಾ. 1 ರಂದು (ಇಂದು) ಸಂಜೆ ವರ್ಣರಂಜಿತವಾಗಿ ತೆರೆ ಬೀಳಲಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಆರಂಭಗೊಂಡ ಪಾರಣ ಬೇಡು ಹಬ್ಬದಲ್ಲಿ ಎರಡು ದಿನಗಳ ಕಾಲ ಸಂಭ್ರಮಿಸುವ ಗ್ರಾಮಸ್ಥರು ಶನಿವಾರ ಸಂಜೆ ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವನ್ನು ವಿಶಿಷ್ಟವಾಗಿ ಬೀಳ್ಕೊಡುತ್ತಾರೆ. ಕೊಡವರ ಪ್ರಸಿದ್ದ ನಾಣ್ನುಡಿಯಾದ ‘ಕುಂದತ್ ಬೊಟ್ಟ್ಲ್ ನೇಂದ ಕುದುರೆ, ಪಾರಣಮಾನಿಲ್ ಅಳ್ಂಜ ಕುದುರೆ’ ಎಂಬಂತೆ ಪಾರಣ ಬೇಡುಹಬ್ಬದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ ಕುದುರೆಯಾಕೃತಿಯನ್ನು ಕಡಿಯುವದರ ಮೂಲಕ ಬೇಡು ಹಬ್ಬಕ್ಕೆ ಮಂಗಳ ಹಾಡಲಾಗುತ್ತದೆ.
ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಒಳಪಟ್ಟ 9 ಕೇರಿಗಳನ್ನು ಒಳಗೊಂಡಿರುವ ಬೇರಳಿನಾಡಿನಲ್ಲಿ ಪ್ರತಿ ವರ್ಷ ಮೇ 31 ಮತ್ತು ಜೂನ್ 1ರಂದು ವಿಶೇಷ ಹಬ್ಬದ ವಾತಾವರಣ ನಿರ್ಮಾಣಗೊಳ್ಳುತ್ತದೆ. ಬೇರಳಿನಾಡಿನ 9 ಕೇರಿಗಳಲ್ಲಿ ಪಾರಣಮಾನಿ ಹಬ್ಬದ ಪ್ರತೀಕವಾಗಿ ವಿವಿಧ ವೇಷಧಾರಿಗಳು ಅಲ್ಲಲ್ಲೇ ಗುಂಪಾಗಿ ಮನೆ ಮನೆಗೆಳಿಗೆ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಗುಂಪುಗಳಲ್ಲಿ ಮಹಿಳೆಯರಂತೆ ವೇಷ ಧರಿಸಿದ್ದ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆಯುತ್ತಿದ್ದರು.
ಹಬ್ಬದ ಆಚರಣೆ : ಪ್ರತೀ ವರ್ಷದ ಕಾದ್ಯಾರ್ 17 ಮತ್ತು 18 ರಂದು ಅಂದರೆ ಮೇ 31 ಹಾಗೂ ಜೂನ್ 1 ರಂದು ಪಾರಣ ಬೇಡುಹಬ್ಬ ವಿಜೃಂಭಣೆಯಿಂದ ಜರುಗುತ್ತದೆ. ತಕ್ಕಂಡಕೇರಿ, ಪೊದಿಕೇರಿ, ವಿ.ಬಾಡಗ, ಮರೋಡಿ, ಕಂಡಂಗಾಲ, ಪೆಗ್ಗರಿಮಾಡ್, ಕೂಡಣ, ಪೋಟಣ ಮತ್ತು ತೋತೇರಿ ಎಂಬ 9 ಕೇರಿಗಳನ್ನೊಳಗೊಂಡ ಬೇರಳಿನಾಡಿನಲ್ಲಿ ಆಚರಿಸಲಾಗುವ ಪಾರಣ ಬೇಡುಹಬ್ಬಕ್ಕೆ ಹಲವು ಶತಮಾನಗಳ ಇತಿಹಾಸವಿದೆ.
ಹಬ್ಬ ಹೀಗೆ ನಡೆಯುತ್ತದೆ : ಹಬ್ಬಕ್ಕೆ 5 ದಿನಗಳ ಮುಂಚಿತವಾಗಿ ಇಡೀ ಬೇರಳಿನಾಡಿನಲ್ಲಿ ಪಾರಣಮಾನಿ ಹಬ್ಬದ ಕಟ್ಟು ಬೀಳುತ್ತದೆ. ಕಾದ್ಯಾರ್ 17 ರಂದು ಬೆಳಿಗ್ಗಿನ ಜಾವ ವಿವಿಧ ಕೇರಿನಾಡಿನ ಅಂಬಲದಲ್ಲಿ ಬಂದು ಸೇರುವ ಗ್ರಾಮವಾಸಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅಲ್ಲಿನ ಜೋಡು ಭಗವತಿ ದೇವಸ್ಥಾನದಲ್ಲಿ ಬಂದು ಮತ್ತೊಂದು ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಬಳಿಕ ನಿರ್ದಿಷ್ಟ ಸಂಖ್ಯೆಯಲ್ಲಿ ನಾಡಿನ ಕೆಲವರು ಕಂಜಿತಂಡ ಕುಟುಂಬಸ್ಥರ ನೇತೃತ್ವದಲ್ಲಿ ಭಂಡಾರ, ಪೂಜೆ ಮತ್ತು ಅಡಿಗೆ ಸಾಮಾನುಗಳನ್ನು ಹೊತ್ತು ಸುಮಾರು 14 ಕಿ.ಮೀ ದೂರದ ‘ಕಮ್ಮಟ್ಟ್ಮಲೆ’ಗೆ ತೆರಳುತ್ತಾರೆ. ‘ಕಮ್ಮಟ್ಟ್ಮಲೆ’ಯಲ್ಲಿರುವ ಉದ್ಭವಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ಸ್ವೀಕರಿಸಿದ ಬಳಿಕ ಪುರೋಹಿತರು ‘ಪಾರಣ ಪಾಟ್’ಗೆ ಚಾಲನೆ ನೀಡಿ ಬೆಟ್ಟ ಇಳಿಯಲಾರಂಭಿಸುತ್ತಾರೆ. ‘ಕಮ್ಮಟ್ಟ್ಮಲೆ’ಯಿಂದ ಆಗಮಿಸಿದ ತಂಡ ಮತ್ತೆ ಅಂಬಲಗಳಲ್ಲಿ ಬಂದು ಸೇರುತ್ತಾರೆ.
ಈ ತಂಡ ಆಗಮಿಸಿದ ಬಳಿಕವಷ್ಟೇ ಪಾರಣಮಾನಿ ಹಬ್ಬಕ್ಕೆ ಚಾಲನೆ ದೊರೆಯುವದು ಸಂಪ್ರದಾಯ. ನಂತರ ನಾಡಿನ ವಿವಿಧ ಗ್ರಾಮಗಳ ತಕ್ಕರುಗಳ ಮನೆಯಲ್ಲಿ ‘ಕಳಿ’ (ವೇಷಧಾರಿಗಳ ಗುಂಪು) ಆರಂಭಗೊಳ್ಳುತ್ತದೆ. ಇದಕ್ಕೂ ಮೊದಲು ಕಾದ್ಯಾರ್ 17 ರಂದು ಬೆಳಿಗ್ಗೆ ಗ್ರಾಮವಾಸಿಗಳ ಮತ್ತೊಂದು ತಂಡ ಬಾಡಗದ ಬಿದಿರು ಕಾಡಿಗೆ ತೆರಳಿ ಕೃತಕ ಆನೆ ಮತ್ತು ಕುದುರೆಯಾಕೃತಿಗೆ ಅಗತ್ಯವಿರುವ ಹಸಿ ಬಿದಿರನ್ನು ತಂದು ಸಿದ್ಧತೆ ಮಾಡಿಕೊಳ್ಳುತ್ತಾರೆ. ಬೇಡು ಹಬ್ಬದ ಭಾಗವಾಗಿ ನಾಡಿನಲ್ಲಿರುವ ಭದ್ರಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ಸಾಂಪ್ರದಾಯಿಕವಾದ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ಹಿಂದಿನ ದಿನ ರಾತ್ರಿಯಿಂದಲೇ ಬೇರಳಿನಾಡಿನ ಪ್ರತೀ ಮನೆ ಮನೆಗಳಿಗೆ ತೆರಳುವ ವಿವಿಧ ಕೇರಿಗಳ ವೇಷಧಾರಿಗಳು ¥ದ್ಧತಿಯನ್ನು ಪೂರ್ಣಗೊಳಿಸುತ್ತಾರೆ.
‘ಚೀನಿ ದುಡಿ’ ಸಾಥ್: ‘ಕಳಿ’ ತಂಡಗಳೊಂದಿಗೆ 4 ಡೋಲುಗಳನ್ನು ಹೊತ್ತು ಅವುಗಳನ್ನು ಭಾರಿಸುತ್ತ ಪಾರಣ ಹಾಡುಗಳನ್ನು ಹಾಡುತ್ತ ಮನೆ ಮನೆಗೆ ತೆರಳುವ ವೇಷಧಾರಿಗಳು ಬೇಡು ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಇವರೊಂದಿಗೆ ಕೊಡಗಿನ ಎರವರ ಸಾಂಪ್ರದಾಯಿಕ ಚೀನಿ ಮತ್ತು ದುಡಿ ತಂಡ ಹಿಂಬಾಲಿಸುತ್ತಾ ವಾದ್ಯ ನುಡಿಸುವದು ಮತ್ತೊಂದು ವಿಶೇಷ. ಕೊಡಗಿನಾದ್ಯಂತ ಎರವರ ಚೀನಿ ದುಡಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪಾರಣ ಬೇಡು ಹಬ್ಬದಲ್ಲಿ ದುಡಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವದು ಇಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ.
ಸಂಭ್ರಮದ ತೆರೆ: ನಾಡಿನ ಮನೆ ಮನೆಗಳಿಗೆ ತೆರಳಿ ಸಂಜೆ ವೇಳೆಗೆ ಅಂಬಲಕ್ಕೆ ಬಂದು ಸೇರುತ್ತಾರೆ. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವ ಗ್ರಾಮವಾಸಿಗಳು ಮತ್ತು ವೇಷಧಾರಿಗಳ ತಂಡ ಸ್ಥಳದಲ್ಲಿ ಅದ್ಭುತವಾದ ಮನೋರಂಜನಾ ಲೋಕವನ್ನೇ ಸೃಷ್ಟಿಸಿರುತ್ತಾರೆ. ‘ಕಳಿ’ ಆರಂಭಗೊಂಡ ತಕ್ಕರುಗಳ ಮನೆಯಲ್ಲೇ ‘ಕಳಿ’ ಅಂತ್ಯವಾಗುತ್ತದೆ. ಬಳಿಕ ಕೋಡಂಗಿದಾಸ ಮತ್ತು ಪಾಲೆಕರುಂಬ ಎಂಬ ವೇಷಧಾರಿಗಳೊಡನೆ ಪಾರಣ ಮಾನಿಗೆ ಬಂದು ಸೇರುವ ಗ್ರಾಮವಾಸಿಗಳು ಗ್ರಾಮದ ಮನೆಗಳಿಂದ ಸಂಗ್ರಹಿಸಲಾದ ಸಿಂಬಿಗಳನ್ನು ಮಾನಿಗೆ ಎಸೆಯುತ್ತಾರೆ. ಈ ವೇಳೆಗಾಗಲೇ ಶೃಂಗಾರಗೊಂಡು ಸಿದ್ದವಾಗಿರುವ ಕೃತಕ 2 ಆನೆ ಮತ್ತು 3 ಕುದುರೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಮಾನಿಯ ಪಕ್ಕದಲ್ಲೇ ಇರುವ ಗದ್ದೆಯಲ್ಲಿ ಕುಣಿದು ಕುಪ್ಪಳಿಸುತ್ತ ಹಬ್ಬವನ್ನು ಸಂಭ್ರಮಿಸುತ್ತಾರೆ. ಅಲ್ಲಿ ಕೃತಕ ಆನೆ ಮತ್ತು ಕುದುರೆ ಕಡಿಯುವ ಮೂಲಕ ಪಾರಣ ಬೇಡು ಹಬ್ಬಕ್ಕೆ ಅಂತಿಮ ತೆರೆ ಬೀಳಲಿದೆ.
- ರಫೀಕ್ ತೂಚಮಕೇರಿ