ಕೂಡಿಗೆ, ಮೇ 27: ಕೂಡಮಂಗಳೂರು ಗ್ರಾ.ಪಂ. ವ್ಯಾಪ್ತಿಯ ವೀರಭೂಮಿಯ ಬಸವೇಶ್ವರ ಬಡಾವಣೆಯಲ್ಲಿ ಪಂಚಾಯಿತಿ ವತಿಯಿಂದ ಚರಂಡಿ ನಿರ್ಮಾಣ ಮಾಡದೇ ಪೈಪ್‍ಲೈನ್ ಅಳವಡಿಸಲು ಬಿಡುವದಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಕೂಡಮಂಗಳೂರು ಗ್ರಾ.ಪಂ. ವತಿಯಿಂದ ಬಸವೇಶ್ವರ ಬಡಾವಣೆಯಲ್ಲಿ ತಾತ್ಕಾಲಿಕವಾಗಿ ಚರಂಡಿ ನಿರ್ಮಾಣ ಮಾಡಲು ಕಾರ್ಯ ಪ್ರಾರಂಭಿಸಿದ್ದರು. ತಾತ್ಕಾಲಿಕವಾಗಿ ಮಣ್ಣಿನ ಚರಂಡಿಯನ್ನು ನಿರ್ಮಿಸುವಾಗ ನೀರಿನ ಪೈಪ್‍ಲೈನನ್ನು ಬಿಚ್ಚಿಡಲಾಗಿತ್ತು. ಆದರೆ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಸ್ಥಳೀಯ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ.

ಕಾಮಗಾರಿ ಸ್ಥಗಿತಗೊಂಡು ನಾಲ್ಕು ದಿನಗಳು ಕಳೆದಿದ್ದು, ಸ್ಥಳೀಯರು ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಪಂಚಾಯಿತಿ ವತಿಯಿಂದ ಬಸವೇಶ್ವರ ಬಡಾವಣೆಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲು ಮುಂದಾಗಿದ್ದು, ಇದಕ್ಕೂ ಕೂಡಾ ಸ್ಥಳೀಯರು ನಿರಾಕರಿಸಿದ್ದಾರೆ.

ಬಸವೇಶ್ವರ ಬಡಾವಣೆಯ ಜನರು ಸೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಮನೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸುವದರ ಜೊತೆಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದು, ಶಾಸಕರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸುವದಾಗಿ ಭರವಸೆ ನೀಡಿದ್ದಾರೆ.