ಮಡಿಕೇರಿ, ಮೇ 22 : ಗ್ರಾಮ ಪಂಚಾಯಿತಿ ನೌಕರರನ್ನು ಏಕಕಾಲದಲ್ಲಿ ಖಾಯಂ ಗೊಳಿಸುವದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡಗು ಜಿಲ್ಲೆಯ ಗ್ರಾ.ಪಂ ನೌಕರರು ತಾ. 31ರಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರು, ಅಂದು ಮಧ್ಯಾಹ್ನ 2 ಗಂಟೆಯಿಂದ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ತಿಳಿಸಿದರು.
ಹಲವಾರು ವರ್ಷಗಳ ತೀವ್ರ ಹೋರಾಟದ ಫಲವಾಗಿ 2018ರ ಮಾರ್ಚ್ನಿಂದ ಗ್ರಾಮ ಪಂಚಾಯಿತಿ ನೌಕರರ ಸರಕಾರದಿಂದ ವೇತನ ಪಡೆಯಲು ಸಾಧ್ಯವಾಗಿದೆ. ಆದರೆ ರಾಜ್ಯದ 61 ಸಾವಿರ ಗ್ರಾಮ ಪಂಚಾಯಿತಿ ನೌಕರರ ಪೈಕಿ ಇನ್ನೂ 18 ಸಾವಿರ ಗ್ರಾಮ ಪಂಚಾಯಿತಿ ನೌಕರರು ಇನ್ನೂ ಇಎಫ್ಎಂಎಸ್ ವ್ಯವಸ್ಥೆಗೆ ಒಳಪಡದಿರುವದರಿಂದ ವೇತನ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಂಚಾಯಿತಿ ನೌಕರರಿಗೆ ಸರಕಾರ ನಿಗದಿಪಡಿಸಿದ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡಬೇಕೆಂದು ಸರಕಾರದ ಸ್ಪಷ್ಟ ನಿರ್ದೇಶನವಿದ್ದರೂ, ಬಹುತೇಕ ಪಂಚಾಯತ್ಗಳಲ್ಲಿ ನೌಕರರಿಗೆ ವೇತನ ನೀಡದೆ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಭರತ್ ಆರೋಪಿಸಿದರು.
ಗ್ರಾಮ ಪಂಚಾಯತ್ಗಳು ಸ್ವತಂತ್ರವಾಗಿ ಸ್ವಯಂ ಆಡಳಿತ ನಡೆಸಬೇಕೆಂಬ ಆದೇಶವಿದ್ದರೂ, ಪಂಚಾಯಿತಿ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ 61 ಸಾವಿರ ನೌಕರರಿಗೆ ಈಗಿನ ಕನಿಷ್ಟ ವೇತನ ಮತ್ತು ತುಟ್ಟಿಭತ್ಯೆ ಸೇರಿ ಸುಮಾರು 830 ಕೋಟಿ ಹಣ ಬೇಕಿದೆ. ಆದರೆ ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣವನ್ನು ರೈತರ ಸಾಲ ಮನ್ನಾ ನೆಪದಲ್ಲಿ 312 ಕೋಟಿ ಹಣವನ್ನು ಸರಕಾರ ಬಿಡುಗಡೆ ಮಾಡಿಲ್ಲ. ವೇತನಕ್ಕೆ ಬೇಕಾಗುವ ಹೆಚ್ಚುವರಿ ಹಣದ ಬಗ್ಗೆ ಮಲ್ಮನವಿ ಸಲ್ಲಿಸಲಾಗಿದ್ದರೂ, ಹಣಕಾಸು ಇಲಾಖೆ ಇನ್ನೂ ಅನುಮೋದನೆ ನೀಡಿಲ್ಲ. ಇದರಿಂದಾಗಿ ಹೆಚ್ಚುವರಿ ಹಣ ಬರದೆ ಪಂಚಾಯಿತಿ ನೌಕರರ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಸರಕಾರ ಮಾಡಿದ ಆದೇಶಗಳ ಜಾರಿಗಾಗಿ, ಸಂಬಳಕ್ಕೆ ಬೇಕಾಗುವ ನಿಧಿಗಾಗಿ ಹೋರಾಟ ಅನಿವಾರ್ಯವಾಗಿದ್ದು, ಮೇ 15ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ಆರಂಭಿಸಲಾಗಿದೆ. ಅದರಂತೆ ಕೊಡಗು ಜಿಲ್ಲೆಯ ಪಂಚಾಯಿತಿ ನೌಕರರು ಮೇ 31ರಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಅವರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಬೇಡಿಕೆಗಳು
ಅಪರ ಕಾರ್ಯದರ್ಶಿ ಸ್ವಾಮಿ ಅವರ ವರದಿಯಂತೆ ಎಲ್ಲಾ ನೌಕರರನ್ನು ಏಕಕಾಲದಲ್ಲಿ ಅನುಮೋದನೆ ಮಾಡಬೇಕು. ಕಳೆದ ಒಂದು ವರ್ಷದಿಂದ ಬಾಕಿ ಉಳಿದ ವೇತನ ಇಎಫ್ಎಂಎಸ್ಗೆ ಸೇರದಿರುವವರಿಗೆ ತೆರಿಗೆ ಸಂಗ್ರಹದಲ್ಲಿ ಕೊಡುವಂತಾಗಬೇಕು. ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ಉಪಧನ ನೀಡಬೇಕು. ಎಲ್ಲ ನೌಕರರಿಗೆ ಸೇವಾ ಪುಸ್ತಕ ತೆರೆಯಬೇಕು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರಚಿಸಬೇಕು. ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ. ವೈದ್ಯಕೀಯ ವೆಚ್ಚ, ಸರಕಾರಿ ನೌಕರರಿಗೆ ನೀಡುವಂತೆ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೂ ನೀಡಬೇಕು, ಪಂಚಾಯಿತಿ ನೌಕರರಿಂದ ಹೊಸ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಹೊಸ ಬಿಲ್ ಕಲೆಕ್ಟರ್ ಹುದ್ದೆಗೆ ನೇರ ನೇಮಕಾತಿ ಮಾಡಬಾರದು. ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಲು 2019ರ ಜೇಷ್ಠತಾ ಪಟ್ಟಿ ಸಿದ್ದಪಡಿಸಬೇಕು. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಪಿಡಿಒ ಬಡ್ತಿ, ಗ್ರೇಡ್1 ಬಡ್ತಿ ನೀಡಿ ಖಾಲಿಯಾದ ಗ್ರೇಡ್2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡುವಂತಾಗಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳನ್ನು ಬಡ್ತಿಗೆ ಪರಿಗಣಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಈ ಹೋರಾಟ ನಡೆಸಲಾಗುತ್ತಿದೆ ಎಂದು ಭರತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪ ಕಾರ್ಯದರ್ಶಿ ಟಿ.ಕೆ.ಮೂರ್ತಿ ಹಾಗೂ ಸದಸ್ಯ ಕೆ.ಆರ್.ಸುಧಾಕರ್ ಉಪಸ್ಥಿತರಿದ್ದರು.