ಕೂಡಿಗೆ, ಏ. 11: ಶ್ರೀ ವಿಕಾರಿನಾಮ ಸಂವತ್ಸರದ ಚೈತ್ರ ಮಾಸ ಶುಕ್ಲ ಪಕ್ಷ ಬಹುಳ ನವಮಿಯ ತಾ. 13 ರಂದು ಶನಿವಾರ ಮಧ್ಯಾಹ್ನ 12.28 ರಿಂದ 1.48 ಅಭಿಜಿನ್ ಮುಹೂರ್ತದಲ್ಲಿ ವೇದ ಬ್ರಹ್ಮ ನರಹರಿಶರ್ಮಾ ಅವರ ನೇತೃತ್ವದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ನೆರವೇರಲಿದೆ.
ರಥೋತ್ಸವದ ಅಂಗವಾಗಿ ಈಗಾಗಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ತಾ. 17 ರವರೆಗೆ ವಿವಿಧ ಪೂಜಾ ವಿಧಿ-ವಿಧಾನಗಳು ನಡೆಯಲಿವೆ.
ತಾ. 12 ರಂದು (ಇಂದು) ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ನವಗ್ರಹ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ, ಸಂಜೆ ಸೀತಾ ಕಲ್ಯಾಣೋತ್ಸವದ ನಂತರ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.
ತಾ. 13 ರ ಬ್ರಹ್ಮ ರಥೋತ್ಸವ ದಂದು ಪವಿತ್ರ ಗಂಗೋದಕದಿಂದ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ವಸಂತ ಮಾಧವ ಪೂಜೆ, ಕೃಷ್ಣ ಗಂಧೋತ್ಸವ, ಶಾಂತೋತ್ಸವ ಹಾಗೂ ವಿವಿಧ ಪೂಜೆ, ರಥಬಲಿ ಕೈಂಕರ್ಯಗಳು ನೆರವೇರಲಿವೆ. ರಥೋತ್ಸವದ ಅಂಗವಾಗಿ ಮೆರವಣಿಗೆಯಲ್ಲಿ ಆಕರ್ಷಕ ಚಂಡೆ ಪ್ರದರ್ಶನ ಇರುತ್ತದೆ.
ತಾ. 14 ರಂದು ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಸಹಸ್ರನಾಮಾರ್ಚನೆ, ಮಹಾಪೂಜೆ, ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಬಸವೇಶ್ವರ ಉತ್ಸವ ಮೆರವಣಿಗೆ, ಮಹಾಪೂಜೆ ನಡೆಯಲಿದ್ದು, ತಾ. 15 ರಂದು ಪಂಚಾಮೃತಾಭಿಷೇಕ, ಅಷ್ಟೋತ್ತರ ಸಹಸ್ರನಾಮಾರ್ಚನೆ, ಮಹಾಪೂಜೆ, ಸಂಜೆ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯೋತ್ಸವ, ತಾ. 16 ರಂದು ಬಿಲ್ವಪತ್ರಾರ್ಚನೆ, ಸಂಜೆ ಉಯ್ಯಾಲೋತ್ಸವ ನೆರವೇರಲಿದೆ. ಸಂಜೆ ಪುಷ್ಪಾಲಂಕಾರ ಮಂಟಪದಲ್ಲಿ ಶ್ರೀ ಸ್ವಾಮಿಯ ಮೆರವಣಿಗೆ ಮತ್ತು ಆಕರ್ಷಕ ಮದ್ದುಗುಂಡು ಪ್ರದರ್ಶನ, ತಪ್ಪೋತ್ಸವ, ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮ : ರಥೋತ್ಸವದ ಅಂಗವಾಗಿ ತಾ. 13 ರಂದು ಕುಶಾಲನಗರ ಝೇಂಕಾರ್ ಆರ್ಕೆಸ್ಟ್ರಾದಿಂದ ರಸಮಂಜರಿ ಕಾರ್ಯಕ್ರಮ, ತಾ. 14 ರಂದು ಕೂಡು ಮಂಗಳೂರು ಯಂಗ್ ಸ್ಟಾರ್ ಡ್ಯಾನ್ಸ್ ಗ್ರೂಪ್ ನಿಂದ ಡ್ಯಾನ್ಸ್ ಕಾರ್ಯಕ್ರಮ, ತಾ. 15 ರಂದು ಪಣವಂ ನಾಟ್ಯಾಲಯ ಕೂಡುಮಂಗಳೂರು ಇವರಿಂದ ಭರತನಾಟ್ಯ, ಭಕ್ತಿಗೀತೆ, ಜಾನಪದ ನೃತ್ಯ, ಚಲನಚಿತ್ರ ಗೀತೆ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ, ತಾ. 16 ರಂದು ಹಾಸನದ ಮೋಹನ್ ಮೆಲೋಡಿಸ್ ನಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯದ ಸಮಿತಿಯ ಅಧ್ಯಕ್ಷ ಕೆ.ಎನ್.ಸುರೇಶ್ ತಿಳಿಸಿದ್ದಾರೆ.
ರಾಮೇಶ್ವರನ ಕಥೆ : ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕುಶಾಲನಗರ ಸಮೀಪದ ರಾಮಸ್ವಾಮಿ ಕಣಿವೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಾಮಲಿಂಗೇಶ್ವರನನ್ನು ಮಣ್ಣಿನಿಂದ ನಿರ್ಮಿಸಿ ಪ್ರತಿಷ್ಠಾಸಿರುವ ಸನ್ನಿವೇಶವು ರಾಮಾಯಣದ ಸೀತಾಪಹರಣ ಕಥೆಯಲ್ಲಿ ಬರುತ್ತದೆ. ಈ ಮೂಲಕ ರಾಮಯಣಕ್ಕೂ ಕಣಿವೆಯ ನದಿ ದಂಡೆಗೂ ಇರುವ ಸಂಬಂಧವನ್ನು ಇಲ್ಲಿ ಎತ್ತಿ ತೋರಿಸುತ್ತಿದೆ ಈ ಪುಣ್ಯಕ್ಷೇತ್ರ.
ಶ್ರೀ ರಾಮನು ಲಕ್ಷಣನೊಂದಿಗೆ ಸೀತೆಯನ್ನು ದಕ್ಷಿಣಾಭಿಮುಖವಾಗಿ ಹುಡುಕುತ್ತಾ ಬರುವ ಸಂದರ್ಭ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಂಡು ಇಲ್ಲಿಯೇ ವಿಶ್ರಾಂತಿ ಪಡೆಯಲು ಮುಂದಾಗುತ್ತಾನೆ ಎನ್ನಲಾಗಿದೆ. ಇಲ್ಲಿನ ಕಾವೇರಿ ನದಿ ದಡದಲ್ಲಿ ಈ ಮೊದಲೇ ತಪಸ್ಸಿಗೆ ಕುಳಿತಿದ್ದ ವ್ಯಾಘ್ರ ಮಹರ್ಷಿಗಳು ಶ್ರೀ ರಾಮನಿಗೆ ಆಜ್ಞೆ ಮಾಡಿ ತನ್ನ ಪೂಜಾ ಕೈಂಕರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರಲು ಹೇಳುತ್ತಾರೆ. ರಾಮನಿಗೆ ವ್ಯಾಘ್ರ ಮಹರ್ಷಿಗಳು ನೀಡಿದ ಆದೇಶವನ್ನು ಪಾಲಿಸಲು ಆಂಜನೇಯನು ಕಾಶಿಗೆ ಶಿವಲಿಂಗ ತರಲು ತೆರಳುತ್ತಾನೆ. ಆದರೆ, ಶಿವಲಿಂಗ ತರಲು ಹೋದ ಆಂಜನೇಯ ಬರಲು ತಡವಾಗುವದರ ಸೂಚನೆಯರಿತ ರಾಮ ತನ್ನ ಪೂಜೆಯ ಸಮಯ ಮೀರುತ್ತಿರುವ ದರಿಂದ ಸ್ಥಳದಲ್ಲಿಯೇ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆ ಆರಂಭಿಸುತ್ತಾನೆ.
ಅಷ್ಟರಲ್ಲಿ ಆಂಜನೇಯ ಶಿವಲಿಂಗ ವನ್ನು ತರುತ್ತಾನೆ. ಶ್ರೀರಾಮದೇವ ಮರಳಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಯಲ್ಲಿ ನಿರತನಾದ ರಾಮದೇವರ ಮೇಲೆ ಆಂಜನೇಯ ಅಸಮಧಾನಗೊಳ್ಳುತ್ತಾನೆ. ಈ ನಡುವೆ ಆಂಜನೇಯನಿಗೆ ಬೇಸರ ಆಗಬಾರದು ಎಂಬ ಕಾರಣಕ್ಕೆ ಆಂಜನೇಯ ಕಾಶಿಯಿಂದ ತಂದ ಶಿವಲಿಂಗವನ್ನು ಶ್ರೀರಾಮ ಸನ್ನಿದಿಯ ಹಿಂಬದಿಯಲ್ಲಿ ಲಕ್ಷ್ಮಣನ ಮೂಲಕ ಪ್ರತಿಷ್ಠಾಪಿಸುತ್ತಾನೆ. ಈ ಸ್ಥಳ ಇದೀಗ ಲಕ್ಷ್ಮಣೇಶ್ವರ ಕ್ಷೇತ್ರವಾಗಿ ಇದೇ ಸ್ಥಳದಲ್ಲಿ ಪ್ರಸಿದ್ಧಿ ಪಡೆದಿದೆ. ಹೀಗೆ ಜಿಲ್ಲೆಯಲ್ಲಿಯೇ ಅತಿ ಅಪರೂಪದ ಲಕ್ಷ್ಮಣೇಶ್ವರ ಕ್ಷೇತ್ರವನ್ನು ಹೊಂದಿರುವ ಪೂಜಾ ಕ್ಷೇತ್ರವಾಗಿ ಕಣಿವೆ ಗ್ರಾಮ ಪ್ರಸಿದ್ದಿ ಹೊಂದಿದೆ. ಹರಿಹರೇಶ್ವರ ಲಿಂಗವು ಸಹ ಇಲ್ಲಿ ಉದ್ಭವ ಮೂರ್ತಿಯಾಗಿ ಭಕ್ತರಿಂದ ಪೂಜಿಸಲ್ಪಡುತ್ತಿದೆ.
ಹೀಗೆ ಯುಗಾದಿ ಬಳಿಕ ನಡೆಯುವ ಶ್ರೀ ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವದಂದು ಅಂಚೆಯ ಮೂಲಕ ಕಾಶಿಯಿಂದ ಗಂಗಾಜಲ ಆಗಮಿಸುತ್ತದೆ. ಹೆಬ್ಬಾಲೆ ಅಂಚೆ ಕಛೇರಿಗೆ ಬರುವ ಗಂಗಾಜಲವನ್ನು ನಾದಸ್ವರ ಮಂಗಳವಾದ್ಯ ಹಾಗೂ ಪೂರ್ಣಕುಂಭಗಳೊಂದಿಗೆ ಕಣಿವೆ ಗ್ರಾಮಸ್ಥರು ದೇವಾಲಯದ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಗ್ರಾಮಕ್ಕೆ ತಂದು ರಾಮಲಿಂಗೇಶ್ವರನಿಗೆ ಅಭಿಷೇಕಗೈದ ಬಳಿಕ ಅಲಂಕೃತ ರಥೋತ್ಸವದಲ್ಲಿ ಉತ್ಸವ ಮೂರ್ತಿ ಯನ್ನು ಭಕ್ತರ ಜಯಘೋಷದೊಂದಿಗೆ ಮೆರವಣಿಗೆ Éಯಲ್ಲಿ ಕೊಂಡೊಯ್ಯ ಲಾಗುವದು.
ಈ ಜಾತ್ರಾ ಮಹೋತ್ಸವಕ್ಕೆ ಕಣಿವೆ ಗ್ರಾಮದ ಸುತ್ತಮುತ್ತಲ 22 ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
- ಕೆ.ಕೆ.ನಾಗರಾಜಶೆಟ್ಟಿ