ಮಡಿಕೇರಿ, ಏ. 8: ವೀರಾಜಪೇಟೆ ತಾಲೂಕಿನ ನಿಟ್ಟೂರು ಬಳಿಯ ಜಾಗಲೆ ಗ್ರಾಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಸೋಮವಾರ ಭೇಟಿ ನೀಡಿ ಅಲ್ಲಿನ ಮತದಾರರನ್ನು ಭೇಟಿ ಮಾಡಿ ಈಗಾಗಲೇ ಗುರುತಿಸಲಾಗಿರುವ ತಟ್ಟೆಕೆರೆ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮನವೊಲಿಸಿದ್ದಾರೆ.

ಈ ಹಿಂದಿನ ಚುನಾವಣೆಗಳಲ್ಲಿ ಜಾಗಲೆ ಆಶ್ರಮ ಶಾಲೆ ಆವರಣದಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗುತ್ತಿತ್ತು, ಆದರೆ ಈ ಬಾರಿ ತಟ್ಟೆಕೆರೆಗೆ ಮತಗಟ್ಟೆ ಸ್ಥಳಾಂತರವಾಗಿರುವದರಿಂದ ಜಾಗಲೆಯ ಗ್ರಾಮಸ್ಥರು ಮತದಾನ ಬಹಿಷ್ಕರಿಸುವದಾಗಿ ಹೇಳಿದ್ದರು, ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿತ್ತು ಈ ಹಿನ್ನೆಲೆ ಹೆಚ್ಚುವರಿ ಜಿಲ್ಲಾಧಿಕಾರಿ ಭೇಟಿ ಮಾಡಿ ಜಾಗಲೆ ಗ್ರಾಮಸ್ಥರನ್ನು ಮನವೊಲಿಸಿದ್ದಾರೆ.

ಈಗಾಗಲೇ ನಿರ್ಧರಿಸಲಾಗಿರುವ ತಟ್ಟೆಕೆರೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮುಂದಿನ ಚುನಾವಣೆ ವೇಳೆಗೆ ಹೊಸ ಮತಗಟ್ಟೆ ಸ್ಥಾಪನೆ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವದು ಎಂದು ಮನವರಿಕೆ ಮಾಡಿದ ಹಿನ್ನೆಲೆ ಜಾಗಲೆ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ.